ಹಿರಿಯಡಕ, ಮೇ 13: ಸಂಸ್ಕೃತಿಯ ತಾಯಿಬೇರುಗಳ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳದಂತೆ ಸಾಂಸ್ಕೃತಿಕ ಅಸ್ಮಿತೆಯ ಅರಿವಿನೊಂದಿಗೆ ತಮ್ಮ ಬದುಕಿನ ಕಷ್ಟಗಳನ್ನು ಮಕ್ಕಳಿಂದ ಮುಚ್ಚಿಡದೆ ಅವರಲ್ಲಿ ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹುಟ್ಟುಹಾಕಬೇಕು ಎಂದು ಸಿದ್ಧಾಪುರ ಎಸ್.ಜೆ. ಪಿ.ಯು. ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಹೇಳಿದರು. ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಶಿಕ್ಷಕ-ರಕ್ಷಕ ಮಹಾಸಭೆ ಹಾಗೂ ವಿದ್ಯಾರ್ಥಿಗಳ ಜನಪದ ಆಹಾರಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ನಿಜವಾದ ಕೊಂಡಿಯಾದ ಪೋಷಕರಿಗೆ ಸಂಸ್ಥೆಯ ಜೀವಂತಿಕೆಯಲ್ಲಿ ಮಹತ್ತರ ಪಾತ್ರವಿದೆ ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯಡಕ ಲಯನ್ಸ್ ಕ್ಲಬ್ ಅಧ್ಯಕ್ಷ ರಘುವೀರ ಶೆಟ್ಟಿಗಾರ್ ಜನಪದ ಆಹಾರ ಮೇಳದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತಮ್ಮ ಆಹಾರದ ಅರಿವನ್ನು ಮೂಡಿಸುವ ಮಹತ್ವದ ಪ್ರಯೋಗಗಳು ಎಂದರು.
ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕ ದೇವದಾಸ್ ಡಿ ಪ್ರಭು ಅವರನ್ನು ಗೌರವಿಸಲಾಯಿತು. ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎನ್.ಎಸ್. ಶೆಟ್ಟಿ, ಹರೀಶ್ ಹೆಗ್ಡೆ, ಶಾಂತ, ವಸಂತ ಶೆಟ್ಟಿ ಚೆನ್ನಿಬೆಟ್ಟು, ಡಾ. ಸೌಮ್ಯಲತಾ, ಡಾ. ಲಿತಿನ್ ಬಿ ಎಂ, ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು. ನಂದೀಶ್ ಕುಮಾರ್ ಕೆ ಸಿ ಸ್ವಾಗತಿಸಿ, ಆಶಾ ಹೆಚ್. ಬಿ. ವಂದಿಸಿದರು. ಶಿಕ್ಷಕ-ರಕ್ಷಕ ಸಂಘದ ಸಂಚಾಲಕಿ ಮೀನಾಕ್ಷಿ ನಾಯ್ಕ ನಿರ್ವಹಿಸಿದರು.




By
ForthFocus™