ಉಡುಪಿ, ಮೇ 7: ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮವಾಗಿ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿ ಏರಿಕೆಯಾಗುತ್ತಿದೆ. ಈ ಬಿಸಿಗಾಳಿ ಪರಿಸ್ಥಿತಿ ತೋಟಗಾರಿಕೆ ಬೆಳೆಗಳ ಬೆಳವಣಿಗೆ, ಹೂವು-ಹಣ್ಣು ಕಚ್ಚುವಿಕೆ, ಹಿಡುವಿಕೆ ಮತ್ತು ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ. ಹೆಚ್ಚಿನ ತಾಪಮಾನದಿಂದ ಗಿಡಗಳಲ್ಲಿ Transpiration Loss ವೇಗವಾಗಿ ಹೆಚ್ಚುತ್ತದೆ. ಇದರಿಂದ ಸಸ್ಯಗಳಲ್ಲಿ ತೇವಾಂಶ ಕೊರತೆ ಉಂಟಾಗಿ, ಗಿಡ ಒಣಗುವಿಕೆ ಸಂಭವಿಸುತ್ತದೆ. ಬಿಸಿಗಾಳಿಯಿಂದ Photosynthesis ಪ್ರಕ್ರಿಯೆ ಕುಂಠಿತವಾಗಿ ಸಸ್ಯಗಳಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗುತ್ತದೆ. ಹೆಚ್ಚಿನ ತಾಪಮಾನದಲ್ಲಿ ಪರಾಗಸ್ಪರ್ಶ ಸರಿಯಾಗಿ ನಡೆಯುವುದಿಲ್ಲ. ಇದರಿಂದ ಹೂವುಗಳ ಉದುರುವಿಕೆ ಹೆಚ್ಚಾಗುತ್ತದೆ. ಸಸ್ಯಕೋಶಗಳ ಮೇಲೆ ತಾಪಮಾನದ ಒತ್ತಡ ಹೆಚ್ಚಾಗಿ ಸಸ್ಯಕೋಶ ಹಾನಿ ಉಂಟಾಗುತ್ತದೆ.
ಇಂತಹ ಬಿಸಿಗಾಳಿಯ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಹಾನಿ ಸಂಭವಿಸಬಹುದು. ಆದ್ದರಿಂದ ಈ ಕೆಳಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದಲ್ಲಿ ಸಂಭವನೀಯ ಹಾನಿ ತಪ್ಪಿಸಬಹುದಾಗಿದೆ. ನೀರಾವರಿ ನಿರ್ವಹಣೆ : ಬೆಳಗ್ಗೆ 6 ಗಂಟೆಯೊಳಗೆ ಅಥವಾ ಸಂಜೆ 5 ಗಂಟೆಯ ನಂತರ ಮಾತ್ರ ನೀರಾವರಿ ಮಾಡಬೇಕು. ದಿನಕ್ಕೆ 2 ಬಾರಿ ಲಘು ನೀರಾವರಿ ಮಾಡುವುದರಿಂದ ಉತ್ತಮ ಮಣ್ಣಿನ ತೇವಾಂಶವನ್ನು ಕಾಯ್ದುಕೊಳ್ಳಲು ನಿಯಮಿತವಾಗಿ ನೀರು ನೀಡಬೇಕು. ಹನಿ ನೀರಾವರಿ ವ್ಯವಸ್ಥೆ ಇದ್ದರೆ ಹೆಚ್ಚು ಪ್ರಯೋಜನಕಾರಿಯಾಗಿದೆ..
ಮಲ್ಚಿಂಗ್: ಒಣ ಎಲೆಗಳು, ಹುಲ್ಲು, ತೆಂಗಿನ ತೊಗಟೆ ಮುಂತಾದವುಗಳಿಂದ ಮಲ್ಚಿಂಗ್ ಮಾಡುವುದರಿಂದ ಮಣ್ಣಿನಲ್ಲಿ ತೇವಾಂಶ ಉಳಿದುಕೊಂಡು ಬಿಸಿಲಿನ ತಾಪಮಾನ ಕಡಿಮೆಯಾಗುತ್ತದೆ. ನೆರಳು ವ್ಯವಸ್ಥೆ :ಸಸಿ ನರ್ಸರಿಗಳಲ್ಲಿ ಶೇಡ್ ನೆಟ್ (50%–75%) ಬಳಕೆ ಮಾಡಬೇಕು. ಹೊಸದಾಗಿ ನೆಟ್ಟ ಸಸಿಗಳಿಗೆ ತಾತ್ಕಾಲಿಕ ನೆರಳು ಒದಗಿಸಬೇಕು. ಗೊಬ್ಬರ ಪೋಷಕಾಂಶ ನಿರ್ವಹಣೆ :ಬೇಸಿಗೆಯಲ್ಲಿ ರಾಸಾಯನಿಕ ಗೊಬ್ಬರ ಬಳಕೆ ತಾತ್ಕಾಲಿಕವಾಗಿ ತಪ್ಪಿಸಬೇಕು. ಅಲ್ಪ ಸಲ್ಪ ಜೈವಿಕ ಗೊಬ್ಬರಗಳು (ವರ್ಮಿ ಕಾಂಪೋಸ್ಟ್, ಗೋಮಯ) ಬಳಕೆ ಮಾಡುವುದು ಉತ್ತಮ. ಮೈಕ್ರೋನ್ಯೂಟ್ರಿಯಂಟ್ ಸ್ಪ್ರೇಗಳನ್ನು ಸಂಜೆ ವೇಳೆಯಲ್ಲಿ ಮಾತ್ರ ಮಾಡಬೇಕು.
ಬೆಳೆ ರಕ್ಷಣೆ: ಬಿಸಿಗಾಳಿಯಿಂದ ಎಲೆ ಸುಡುವಿಕೆ ತಪ್ಪಿಸಲು 1% ಪೊಟಾಶಿಯಂ ನೈಟ್ರೇಟ್ ಅಥವಾ 1% ಕ್ಯಾಲ್ಸಿಯಂ ಕ್ಲೋರೈಡ್ ಸಿಂಪಡಿಸಬಹುದು, Kaolin ಸ್ಪ್ರೇ ಮಾಡಬಹುದು. ಕೀಟ ಮತ್ತು ರೋಗಗಳ ಮೇಲೆ ನಿಗಾ ಇರಿಸಬೇಕು; ಅಗತ್ಯವಿದ್ದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಹಣ್ಣು ಬೆಳೆಗಳಿಗೆ ವಿಶೇಷ ಸಲಹೆಗಳು: ಮಾವು, ಬಾಳೆ, ಪಪ್ಪಾಯಿ, ಸೀತಾಫಲ ಮುಂತಾದ ಬೆಳೆಗಳಲ್ಲಿ ಹಣ್ಣು ಬೀಳುವಿಕೆ ಕಡಿಮೆ ಮಾಡಲು ನಿಯಮಿತ ನೀರಾವರಿ ಅಗತ್ಯ. ಬಾಳೆ ಬೆಳೆಗಳಲ್ಲಿ ಹಣ್ಣಿನ ಗೊಂಚಲಿಗೆ ಹೊದಿಕೆ ಹಾಕುವುದು ಉತ್ತಮ.
ನರ್ಸರಿ ಮತ್ತು ಸಸಿ ಸಂರಕ್ಷಣೆ: ಸಸಿಗಳಿಗೆ ದಿನಕ್ಕೆ 2 ಬಾರಿ ಲಘು ನೀರಾವರಿ ಮಾಡಬೇಕು. ಶೇಡ್ ನೆಟ್ ಹಾಗೂ ಮಿಸ್ಟಿಂಗ್ ವ್ಯವಸ್ಥೆ ಬಳಸುವುದು ಉತ್ತಮ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಪ್ರಕಟನೆ ತಿಳಿಸಿದೆ.




By
ForthFocus™