ಉಡುಪಿ, ಮೇ 3: ಉಡುಪಿ ತಾಲೂಕು ಹದಿನಾರನೇ ಕನ್ನಡ ಸಾಹಿತ್ಯ ಸಮ್ಮೇಳನ ‘ಬೀಷ್ಮೋತ್ಸವ’
ಸಾಹಿತ್ಯ -ಸಂಸ್ಕೃತಿ -ಕಲೋತ್ಸವವು ಮೇ 3 ಭಾನುವಾರ ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್ಪಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರಮಯ ಉಡುಪಿ: ಡಾ. ಭಾಸ್ಕರಾನಂದ ಕುಮಾರ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವು ಬೆಳಗ್ಗೆ ಎಂಟು ಮೂವತ್ತಕ್ಕೆ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಧ್ವಜಾರೋಹಣ, ಸಾಹಿತಿ ರಾಮದಾಸ್ ನೆನಪಿನ ಪುಸ್ತಕ ಮಳಿಗೆ, ಗಮಕ ಸೌರಭ, ಚಿತ್ರ ಕಲಾವಿದರಾದ ಆಸ್ಟ್ರೋ ಮೋಹನ್ ಹಾಗೂ ಜನಾರ್ಧನ ಕೊಡವೂರು ಸಂಪಾದಿತ ‘ಚಿತ್ರಮಯ ಉಡುಪಿ’ ಉದ್ಘಾಟನೆ, ನಿತ್ಯಾನಂದ ನಾಯಕ್ ಅವರ ಮುರಲ್ ಕಲಾಕೃತಿಗಳ ಪ್ರದರ್ಶನದ ಉದ್ಘಾಟನೆ ನಡೆಯಲಿದೆ. ನಂತರ 10 ಗಂಟೆಗೆ ಸರಿಯಾಗಿ ಸಮ್ಮೇಳನ ಅಧ್ಯಕ್ಷರ ಪರಿಚಯದ ನುಡಿ ಚಿತ್ರ ಬಿಡುಗಡೆಯೊಂದಿಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನೆರವೇರುತ್ತದೆ.
ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ: ಸಮ್ಮೇಳನದ ಉದ್ಘಾಟನೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರು ನಡೆಸಲಿದ್ದು, ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಮಯದಲ್ಲಿ ಕಸಾಪ ಉಡುಪಿ ತಾಲೂಕು ಗೌರವ ಪುರಸ್ಕಾರವನ್ನು ವಿವಿಧ ಕ್ಷೇತ್ರದ ಸಾಧಕರಾದ ತಿಲಕನಾಥ್ ಮಂಜೇಶ್ವರ, ಗೋಪಾಲ್ ಭಟ್ ಎಂ., ವಿಮಲಾ ಚಂದ್ರಶೇಖರ್, ಮರವಂತೆ ನಾಗರಾಜ್ ಹೆಬ್ಬಾರ್, ಕೆ. ರಂಜನ್, ಲಕ್ಷ್ಮಿ ಹರಿಶ್ಚಂದ್ರ, ಅ.ರಾ.ಪ್ರಭಾಕರ್ ಪೂಜಾರಿ, ವಿಘ್ನೇಶ್ವರ ಅಡಿಗ, ಪಿ.ಎಂ. ವೇಣುಗೋಪಾಲ್ ಹೆಬ್ಬಾರ್, ಶ್ರೀಕಾಂತ್ ಭಟ್ ವಿದ್ಯಾಲತಾ ಯು. ಶೆಟ್ಟಿ ಇವರಿಗೆ ನೀಡಿ ಗೌರವಿಸಲಾಗುವುದು. ನಂತರ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಅವರಿಂದ ಗೀತ ಗಾಯನ ನಡೆದು, ಉಡುಪಿ ತಾಲೂಕಿನ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ಸುಮಾರು 50 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.
ಸಂಧ್ಯಾ ಶೆಣೈ ಹಾಸ್ಯ ಸಂಜೆ: 12 ಗಂಟೆಗೆ ಬಹುಮುಖಿ ಕನ್ನಡ ಕವಿಗೋಷ್ಠಿ ನಡೆಯಲಿದ್ದು ಇದರ ಆಶಯ ನುಡಿಯನ್ನು ಡಾ. ರಶ್ಮಿ ಅಮ್ಮೆಂಬಳ ಹಾಗೂ ಸಮನ್ವಯವನ್ನು ಸುಧಾ ಆಡುಕಳ ನಡೆಸಿಕೊಡಲಿದ್ದಾರೆ. ಮದ್ಯಾಹ್ನ 1: 15 ರಿಂದ ಹೆಜ್ಜೆಗೆಜ್ಜೆ (ರಿ) ಉಡುಪಿ – ಮಣಿಪಾಲ ಇವರಿಂದ ‘ನೃತ್ಯ ಸಿಂಚನ ‘ ಕಾರ್ಯಕ್ರಮ ನಡೆಯಲಿದೆ. ನಂತರ ಸುಹಾಸಂ ಉಡುಪಿ ಇದರ ಅಧ್ಯಕ್ಷರಾದ ಸಂಧ್ಯಾ ಶೆಣೈ ಉಡುಪಿ ಇವರಿಂದ ಹಾಸ್ಯ ಸಮಯ ‘ಆಪ್ತಮಿತ್ರರ ಕಚಗುಳಿ ‘ ನಡೆಯಲಿದೆ. ಮಧ್ಯಾಹ್ನ ಎರಡು ಇಪ್ಪತ್ತಕ್ಕೆ ವಿಚಾರಗೋಷ್ಠಿಯಲ್ಲಿ ನಿತ್ಯಾನಂದ ಪಡ್ರೆ , ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ, ಗುರುರಾಜ್ ಸನಿಲ್ ಅವರು ಭಾಗವಹಿಸಲಿದ್ದಾರೆ.
ಸಾಧಕರಿಗೆ ಗೌರವಾರ್ಪಣೆ: ಮಧ್ಯಾಹ್ನ 3:35 ಕ್ಕೆ ಸಮ್ಮೇಳನಾಧ್ಯಕ್ಷರಾದ ಡಾ.ಭಾಸ್ಕರಾನಂದ ಕುಮಾರ್ ಅವರೊಂದಿಗೆ ಮುಖಾಮುಖಿ ನಡೆಯಲಿದ್ದು, ಬನ್ನಂಜೆ ಸಂಜೀವ ಸುವರ್ಣ, ಮುರಳಿ ಕಡೆಕಾರ್ ಉದ್ಯಾವರ ನಾಗೇಶ್, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಭಾಗವಹಿಸಲಿದ್ದಾರೆ. ಸಂಜೆ 4:30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಡಾ. ಗಣನಾಥ್ ಶೆಟ್ಟಿ ಎಕ್ಕಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 23 ಮಂದಿ ಗಣ್ಯರನ್ನು ಮತ್ತು 5 ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲಾಗುವುದು.
ಮಕ್ಕಳ ನಾಟಕ ಪ್ರದರ್ಶನ: ಸಂಜೆ 6 ಗಂಟೆಗೆ ಸರಿಯಾಗಿ ರಾಜೇಶ್ ಭಟ್ ಪಣಿಯಾಡಿ ಅವರ ನಿರ್ದೇಶನದ ‘ಕತ್ತಲೆ ರಾಜ್ಯದ ಮರ್ಕಟ ರಾಜ’ ಎಂಬ ಮಕ್ಕಳ ನಾಟಕ ಪ್ರದರ್ಶನಕೊಳ್ಳುವುದು. ಸುಮಾರು 12 ಗಂಟೆಗಳ ಕಾಲ ನಿರಂತರವಾಗಿ ನಡೆಯುವ ಈ ಸಮ್ಮೇಳನಕ್ಕೆ ಎಲ್ಲಾ ಸಾಹಿತ್ಯ ಅಭಿಮಾನಿಗಳು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ತಿಳಿಸಿದರು.
ಕಸಾಪ ಉಡುಪಿ ತಾಲೂಕು ಗೌರವ ಸಲಹೆಗಾರರಾದ ವಿಶ್ವನಾಥ್ ಶೆಣೈ, ಭುವನಪ್ರಸಾದ್ ಹೆಗ್ಡೆ, ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸ್ವಾಗತ ಸಮಿತಿ ಕಾರ್ಯದರ್ಶಿ ಸತೀಶ್ ಕೊಡವೂರು, ಕಾನೂನು ಸಲಹೆಗಾರ ವಿನಯ್ ಆಚಾರ್ಯ ಮುಂಡ್ಕೂರು, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್ ಉಪಸ್ಥಿತರಿದ್ದರು.




By
ForthFocus™