ಕುಂದಾಪುರ, ಏ.9: ಸಮಾಜಕ್ಕೆ ಅಗತ್ಯವಿರುವುದು ಸುಶಿಕ್ಷಿತರಿಗಿಂತ ಸುಸಂಸ್ಕೃತರು. ಹೀಗಾಗಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಉತ್ತಮ ನಡವಳಿಕೆ ಮತ್ತು ವ್ಯಕ್ತಿತ್ವವೇ ಮೌಲ್ಯ. ಇದು ಜೀವನದ ಅಂತ್ಯದವರೆಗೂ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ಪ್ರಸಿದ್ಧ ಯಕ್ಷಗಾನ ಪ್ರಸಂಗಕರ್ತರು, ಅರ್ಥಧಾರಿಗಳು ಹಾಗೂ ಆಸೆಮ್ಸ್ ಶಿಕ್ಷಣ ಸಂಸ್ಥೆ, ಕಲ್ಮಾಡಿ ಇಲ್ಲಿನ ಪ್ರಾಂಶುಪಾಲರಾದ ಪ್ರೊ. ಪವನ್ ಕಿರಣ್ಕೆರೆ ಹೇಳಿದರು.
ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಜೀವನ ಮೌಲ್ಯ ಸರಣಿ ಉಪನ್ಯಾಸದ 7ನೇ ಮಾಲಿಕೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೌಲ್ಯಗಳು ಜೀವನದಲ್ಲಿ ಅತಿ ಮುಖ್ಯವಾಗಿದ್ದು ವಿದ್ಯಾರ್ಥಿಗಳು ಅದನ್ನು ಮೈಗೂಡಿಸಿಕೊಳ್ಳಬೇಕೆಂಬುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ, ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೇಯಾ ಖಾರ್ವಿ ಪ್ರಾರ್ಥಿಸಿ, ಅಶ್ವತ್ ಸ್ವಾಗತಿಸಿ, ಆಶಿಕ್ ವಂದಿಸಿ, ಪ್ರದೀಪ್ ಅತಿಥಿಗಳನ್ನು ಪರಿಚಯಿಸಿ, ರಾಕೇಶ್ ನಿರೂಪಿಸಿದರು.




By
ForthFocus™