ಬಸ್ರೂರು, ಏ.1: ಶ್ರೀ ಶಾರದಾ ಕಾಲೇಜು ಬಸ್ರೂರಿನ ಬೋಧಕ ಮತ್ತು ಬೋಧಕೇತರ ಸಂಘದ ಆಶ್ರಯದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ಇವರಿಗೆ ಬೀಳ್ಕೊಡುಗೆ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾಲೇಜು ಟ್ರಸ್ಟ್ ಅಧ್ಯಕ್ಷರಾದ ಕೆ. ಜಯಕರ ಶೆಟ್ಟಿ ಕಾಲೇಜಿಗೆ ಪ್ರಾಂಶುಪಾಲರ ಸಹಕಾರ ಮತ್ತು ಪ್ರೋತ್ಸಾಹದ ಬಗ್ಗೆ ಮಾತನಾಡುತ್ತಾ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿ ಸಂಚಾಲಕರಾದ ಅನುಪಮ ಎಸ್. ಶೆಟ್ಟಿ ಮಾತನಾಡಿ, ನೀವು ನಮ್ಮ ಸಂಸ್ಥೆಯನ್ನು ಬಿಡುತ್ತಿದ್ದರೂ ನಮ್ಮ ಹೃದಯದಲ್ಲಿ ಸದಾ ಉಳಿಯುತ್ತೀರಿ. ನಿಮ್ಮ ಮುಂದಿನ ಜೀವನದ ಪ್ರತಿಯೊಂದು ಹೆಜ್ಜೆಯೂ ಯಶಸ್ಸಿನಿಂದ ತುಂಬಿರಲಿ. ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದರು.
ಕಾಲೇಜಿನ ಟ್ರಸ್ಟಿ ಸದಸ್ಯರಾದ ಸುಭಾಶ್ಚಂದ್ರ ಶೆಟ್ಟಿ, ಗಣೇಶ ಕಾಮತ್, ಅರುಣ್ ಕುಮಾರ್ ಶೆಟ್ಟಿ, ಗಣೇಶ ಶೆಟ್ಟಿ ಮೊಳಹಳ್ಳಿ, ಜಿ.ಎಂ. ಚೆರಿಯಬ್ಬ ಉಪಸ್ಥಿತರಿದ್ದರು. ಕಾಲೇಜಿನಿಂದ ಬೀಳ್ಕೊಡುತ್ತಿರುವ ೩೬ ವರ್ಷಗಳ ಸೇವೆ ಸಲ್ಲಿಸಿದ ಡಾ. ಚಂದ್ರಾವತಿ ಶೆಟ್ಟಿ, ಇವರನ್ನು ಸನ್ಮಾನಿಸಲಾಯಿತು. ಬೋಧಕ ಸಂಘದ ಅಧ್ಯಕ್ಷರಾದ ಕುಮಾರ ಪಿ., ಸ್ವಾಗತಿಸಿ, ಉಪನ್ಯಾಸಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಸೂರಜ್ ಕುಮಾರ್ ಶೆಟ್ಟಿ ವಂದಿಸಿದರು.




By
ForthFocus™