ಉಡುಪಿ, ಮಾ.23: ಹನ್ನೊಂದನೇ ಶತಮಾನದ ಆದ್ಯ ವಚನಕಾರ, ನೇಕಾರ ಸಮುದಾಯದ ಆರಾಧ್ಯ ದೈವ ದೇವರ ದಾಸಿಮಯ್ಯ ಅವರು ಸರಳ ಭಾಷೆಯಲ್ಲಿ ಸರ್ವರೂ ಅರಿಯುವಂತೆ ವಚನಗಳನ್ನು ರಚಿಸುವ ಮೂಲಕ ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅವಿರತ ಶ್ರಮ ವಹಿಸಿದ್ದರು ಎಂದು ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಉಡುಪಿ ಇವರ ಸಹಯೋಗದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
12 ನೇ ಶತಮಾನದಲ್ಲಿ ಆರಂಭವಾದ ವಚನ ಚಳವಳಿಗಿಂತ ಮೊದಲೇ ಸರಳ ವಚನಗಳನ್ನು ರಚಿಸಿದ ಆದ್ಯ ವಚನಕಾರ ಎಂಬ ಹೆಗ್ಗಳಿಕೆಗೆ ದಾಸಿಮಯ್ಯ ಪಾತ್ರರಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಮೂಲವಾಗಿರುವ ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಂಡಿದೆ. ಇದಕ್ಕೆ ದೇವರ ದಾಸಿಮಯ್ಯ ಕಾರಣಕರ್ತರು ಎಂದರು. ಜಾತಿ, ಲಿಂಗ–ತಾರತಮ್ಯ, ಸ್ತ್ರೀ ಶೋಷಣೆ ವಿರೋಧಿಸಿದ್ದ ದಾಸಿಮಯ್ಯ ಸಮಾಜ ಸುಧಾರಕರು ಆಗಿದ್ದರು. ಶರಣರ ವಚನಗಳನ್ನು ಸರ್ವರೂ ಓದಿಕೊಂಡರೆ ನೈತಿಕತೆ ಬೆಳೆಯಲಿದೆ. ಇಂತಹ ಮಹನೀಯರುಗಳ ಆದರ್ಶಗಳು ಯುವಪೀಳಿಗೆಗೆ ಪ್ರೇರಣೆಯಾಗಲಿದ್ದು, ಮಾನವರಲ್ಲಿರುವ ದ್ವೇಷ, ಅಸೂಯೆ ಭಾವನೆಗಳನ್ನು ಹೋಗಲಾಡಿಸಲು ಇಂತಹ ದಾರ್ಶನಿಕರ ಸಂದೇಶಗಳು ದಾರಿದೀಪವಾಗಲಿವೆ ಎಂದರು.
ಶೋಭಾ ಹರಿಪ್ರಸಾದ್ ಉಡುಪಿ ಮಾತನಾಡಿ, ಭಾರತ ದೇಶದ ಸಾಹಿತ್ಯ ಸಾವಿರಾರು ವರ್ಷಗಳಿಂದ ಬೆಳೆದುಬಂದ ಜಗತ್ತಿನ ಹಳೆಯ ಸಾಹಿತ್ಯವಾಗಿದೆ. ಈ ಸಾಹಿತ್ಯವನ್ನು ಪ್ರಾಚೀನ ಕಾಲದ ಸಾಹಿತ್ಯ, ಮಧ್ಯಕಾಲೀನ ಸಾಹಿತ್ಯ ಹಾಗೂ ಆಧುನಿಕ ಸಾಹಿತ್ಯವೆಂದು ವಿಭಾಗಿಸಲಾಗಿದೆ. ಇದರಲ್ಲಿ ಮಧ್ಯಕಾಲೀನ ಸಾಹಿತ್ಯ 8 ರಿಂದ 18 ನೇ ಶತಮಾನದವರೆಗೆ ಬೆಳೆದುಬಂದ ಸಾಹಿತ್ಯವಾಗಿದ್ದು, ಇದರಲ್ಲಿ ವಚನ ಸಾಹಿತ್ಯ ಬಹಳ ಮಹತ್ತರ ಪಾತ್ರ ವಹಿಸುತ್ತದೆ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಈ ವಚನ ಸಾಹಿತ್ಯ ರಚನೆಗೊಂಡಿದ್ದವು ಎಂದರು.
ಸುಮಾರು ಹನ್ನೊಂದನೆ ಶತಮಾನದ ಉತ್ತರಾರ್ಧದಲ್ಲಿ ಹಲವಾರು ವಚನಕಾರರು ಬಂದು ಹೋಗಿದ್ದರು. ಅವರಲ್ಲಿ ಪ್ರಮುಖರಾದ ದೇವರ ದಾಸಿಮಯ್ಯ ಅವರು ಹಲವಾರು ವಚನಗಳನ್ನು ರಚಿಸಿದ್ದರೂ ಸಹ ಅವರ ಸುಮಾರು 200 ಕ್ಕೂ ಹೆಚ್ಚು ವಚನಗಳು ಕಾಣಸಿಗುತ್ತಿಲ್ಲ. 176 ವಚನಗಳು ಮಾತ್ರ ನಮಗೆ ದೊರಕಿದೆ. ಬಸವಾದಿ ವಚನಕಾರರಿಗೆ ಇವರ ವಚನಗಳು ಸ್ಪೂರ್ತಿದಾಯಕ ಎಂದೇ ಪರಿಗಣಿಸಲಾಗಿದೆ ಎಂದರು. ಅಂದಿನ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರಿನಲ್ಲಿ ಶಿವಶರಣೆಯರ ದಂಪತಿಗಳಿಗೆ ಜನಿಸಿದ ದೇವರ ದಾಸಿಮಯ್ಯ ಅವರು, ಆಧ್ಯಾತ್ಮದೆಡೆಗೆ ಜ್ಞಾನ ಹೆಚ್ಚಿಸಿಕೊಳ್ಳಲು ಆಂಧ್ರದ ಶ್ರೀಶೈಲಕ್ಕೆ ತೆರಳುತ್ತಾರೆ. ಅವರು ಪಡೆದ ಜ್ಞಾನವನ್ನು ಪ್ರಚಾರ ಮಾಡಲು ಹಲವೆಡೆ ತೆರಳಿದ ಸಂದರ್ಭದಲ್ಲಿ ಹಲವಾರು ಟೀಕೆಗಳಿಗೆ ಒಳಗಾದರೂ ಸಹ ತನ್ನ ಸರಳ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದರು ಎಂದ ಅವರು, ಅಂಧಕಾರದಿಂದ ಜ್ಞಾನದ ಕಡೆಗೆ ಅಂದಿನ ಶತಮಾನದಲ್ಲಿಯೇ ಹೋರಾಡಿದ ಹಿರಿಮೆ ದೇವರ ದಾಸಿಮಯ್ಯರದ್ದಾಗಿದೆ ಎಂದರು. ಪ್ರತಿಯೊಬ್ಬರೂ ಯಾವುದೇ ಕೆಲಸವನ್ನು ಮಾಡುವ ಮೊದಲು ಅದರ ಬಗ್ಗೆ ಜ್ಞಾನ ಹೊಂದಿರಬೇಕು. ಅನಗತ್ಯ ವಿಚಾರಗಳಿಗೆ ಗಮನಹರಿಸದೇ ತಮ್ಮ ಗುರಿಸಾಧನೆಯ ಕಡೆಗೆ ಗಮನವನ್ನು ಕೇಂದ್ರೀಕರಿಸಿಕೊಂಡಿಬೇಕು. ಕರಾವಳಿಯೆ ನೇಕಾರಿಕೆಗೆ ತನ್ನದೇ ಆದ ಹಿರಿಮೆ ಇದೆ. ನೇಕಾರ ವೃತ್ತಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸರಕಾರದ ವತಿಯಿಂದ ಸಿಗುವಂತಾಗಬೇಕು. ಕೈಮಗ್ಗದ ಕೆಲಸಗಾರರಿಗೆ ಹೆಚ್ಚಿನ ಮನ್ನಣೆ ದೊರೆಯುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ನೇಕಾರ ಸಮುದಾಯದ ಮೂಲ ಪುರುಷ ಹಾಗೂ 11 ನೇ ಶತಮಾನದ ವಚನಕಾರ ದೇವರ ದಾಸಿಮಯ್ಯ ಅವರು ತ್ರಿಪದಿಗಳ ರೂಪದಲ್ಲಿ ಬಹಳಷ್ಟು ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗಿಂತ ಮುಂಚಿನ ಕಾಲದ ವಚನಕಾರರಾಗಿದ್ದು, ಶರಣ ಚಳುವಳಿಗೆ ಭದ್ರ ಬುನಾದಿ ಹಾಕಿದವರಲ್ಲಿ ಪ್ರಮುಖರು. ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ವಚನಗಳನ್ನು ರಚಿಸಿ, ಸಮಸಮಾಜ ನಿರ್ಮಾಣದ ಸಂದೇಶ ನೀಡಿದ್ದಾರೆ ಎಂದರು.
ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಉಡುಪಿ ಇದರ ಅಧ್ಯಕ್ಷ ರವಿ ಶೆಟ್ಟಿಗಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮುದಾಯದಲ್ಲಿ ಸಾಧನೆಗೈದ ಗಿರೀಶ್ ಶೆಟ್ಟಿಗಾರ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು. ಸಮುದಾಯದ ಪದಾಧಿಕಾರಿಗಳು, ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಜಯರಾಮ ಶೆಟ್ಟಿಗಾರ್ ಮಣಿಪಾಲ ನಿರೂಪಿಸಿ, ಸಮುದಾಯದ ಕಾರ್ಯದರ್ಶಿ ಡಾ.ವೆಂಕಟರಾಯ್ ಶೆಟ್ಟಿಗಾರ್ ವಂದಿಸಿದರು.




By
ForthFocus™