Sunday, April 26, 2026
Sunday, April 26, 2026

ಮಹಿಳಾ ವಾದಕ್ಕೆ ಭಾರತವೂ ತವರೂರು: ಬಿ.ಎಂ ರೋಹಿಣಿ

ಮಹಿಳಾ ವಾದಕ್ಕೆ ಭಾರತವೂ ತವರೂರು: ಬಿ.ಎಂ ರೋಹಿಣಿ

Date:

ಉಡುಪಿ, ಮಾ.11: ಮಹಿಳಾ ಪರ ಚಿಂತನೆಗಳು ಕೇವಲ ಪಾಶ್ಚಿಮಾತ್ಯ ರಾಷ್ಟ್ರಗಳ ಕಲ್ಪನೆಯಲ್ಲ ಭಾರತೀಯ ತಾತ್ವಿಕ ಚಿಂತನೆಗಳಲ್ಲು ಮಹಿಳಾ ಪರ ಹೋರಾಟದ ಧ್ವನಿಗಳಿವೆ. ನಮ್ಮ ದೇಶದ ಪುರಾಣ ಮತ್ತು ಇತಿಹಾಸಗಳನ್ನು ವಾಸ್ತವಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದರೆ ಇದನ್ನು ಕಾಣಬಹುದು. ಈ ಚಿಂತನೆಯು ನಮ್ಮ ದೇಶದ ಸ್ತ್ರೀಯರಲ್ಲಿ ಆತ್ಮಭಿಮಾನವನ್ನು ಹೆಚ್ಚಿಸಿ ಸಂವಿಧಾನವು ಪ್ರತಿಪಾದಿಸುವ ಸಮಾನತೆಯನ್ನು ಪ್ರತಿಪಾದಿಸಲು ದಾರಿಯಾಗುತ್ತದೆ ಎಂದು ಚಿಂತಕಿ ಲೇಖಕಿ ಬಿ.ಎಂ ರೋಹಿಣಿ ಹೇಳಿದರು. ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣಾ ಸಪ್ತಾಹ -೨೦೨೬ ರ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅತಿಥಿಯಾಗಿ ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಸಭಾಪತಿ ಬಸರೂರು ರಾಜೀವ ಶೆಟ್ಟಿ, ಒಂದೂವರೆ ಶತಮಾನದಿಂದಲೇ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಹಿಳಾ ಸಮಾನತೆಯನ್ನು ಪ್ರತಿಪಾದಿಸಿದೆ. ಡಾ.ಶಿವರಾಮ ಕಾರಂತರ ದೃಷ್ಟಿಕೋನ ಇದಕ್ಕೆ ಪೂರಕವಾಗಿದೆ ಎಂದರು. ಆಶಯ ಭಾಷಣ ಮಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಯುವ ಜನತೆಗೆ ಮಹಿಳಾ ಸಬಲೀಕರಣದ ಮಹತ್ವವನ್ನು ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಜನ್ ಕೆ.ಜಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ದಿಶಾ ಪ್ರಾರ್ಥಿಸಿದರು. ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಬಿ.ಎಂ ರೋಹಿಣಿ ಕಾರಂತರ ಮಹಿಳಾ ಪರ ಚಿಂತನೆಗಳು ಮತ್ತು ಪ್ರೊ.ದಿವ್ಯರಾಣಿ ಪ್ರದೀಪ್ ಮಹಿಳಾ ಸಬಲೀಕರಣದ ಸವಾಲುಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಮಹಿಳಾ ಸಂಘದ ಸಂಚಾಲಕಿ ವಿದ್ಯಾ ಡಿ ಸನ್ಮಾನ ಪತ್ರ ವಾಚಿಸಿದರು. ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಸ್ಥಾಪಕಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ರೆಡ್ ಕ್ರಾಸ್ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ರಮಾದೇವಿ ಉಪಸ್ಥಿತರಿದ್ದರು. ಜಿಲ್ಲಾ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ನಿಕೇತನ ವಂದಿಸಿ, ಉಪನ್ಯಾಸಕಿ ತ್ರಿವೇಣಿ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

error: Content is protected !!