ಕೋಟ, ಫೆ.25: ವಿದ್ಯಾರ್ಥಿ ಜೀವನವು ಕೇವಲ ಓದುವ ಹಂತವಲ್ಲ, ಬದಲಾಗಿ ಜವಾಬ್ದಾರಿ, ಕೌಶಲ್ಯ ಮತ್ತು ಮೌಲ್ಯಗಳನ್ನು ಕಲಿಯುವ ಕಾಲವಾಗಿದೆ. ಈ ಅವಧಿಯಲ್ಲಿ ರೂಢಿಸಿಕೊಳ್ಳುವ ಶಿಸ್ತು, ಸಮಯ ಪರಿಪಾಲನೆ, ಜ್ಞಾನಾರ್ಜನೆ ಮತ್ತು ಸಂಸ್ಕಾರಗಳು ವ್ಯಕ್ತಿಯ ವೃತ್ತಿ ಬದುಕು ಹಾಗೂ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಅಭಿಪ್ರಾಯಪಟ್ಟರು. ಸರ್ಕಾರಿ ಪದವಿಪೂರ್ವ ಕಾಲೇಜು ಮಣೂರು ಪಡುಕರೆ ಇಲ್ಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗೀತಾನಂದ ಫೌಂಡೇಶನ್ ವತಿಯಿಂದ ೧೬ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ವತಿಯಿಂದ ಆನಂದ ಕುಂದರ್ ಅವರನ್ನು ಸನ್ಮಾನಿಸಲಾಯಿತು. ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರಮೇಶ ಆಚಾರ್ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕರ್ನಾಟಕ ಬ್ಯಾಂಕ್ ಕೋಟ ಇವರು ಕೊಡುಗೆಯಾಗಿ ನೀಡಿದ ೫ ಕಂಪ್ಯೂಟರ್ಗಳನ್ನು ಬ್ಯಾಂಕಿನ ಪ್ರಬಂಧಕ ಗುರುರಾಜ ಸರಳಾಯ ಅವರು ಕಾಲೇಜಿಗೆ ಹಸ್ತಾಂತರಿಸಿದರು. ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ರಾಮ ಗೆಳೆಯರ ಬಳಗ, ಕೋಡಿ ಕನ್ಯಾಣ ಇವರು ನೀಡಿದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಪುಸ್ತಕಗಳ ಕಪಾಟೊಂದನ್ನು ಕೊಡುಗೆಯಾಗಿ ನೀಡಿದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಭುವನ, ಅಶ್ವಿನಿ, ಗೌತಮಿ, ಪ್ರಥ್ವಿ, ಸಿಂಚನಾ ಬಿ ಹಾಗೂ ಅನುಜ್ ಶುಭ ಹಾರೈಸಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ವೈಷ್ಣವಿ, ಚರಣ ಮೂರ್ತಿ, ಯಶ್ಮಿತಾ, ಭೂಮಿಕಾ, ದಿಗಂತ್ ತಮ್ಮ ವಿದ್ಯಾಭ್ಯಾಸದ ದಿನಗಳನ್ನು ಸ್ಮರಿಸಿ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು. ಉಪನ್ಯಾಸಕರು ವಿದ್ಯಾರ್ಥಿಗಳ ಮುಂದಿನ ಪರೀಕ್ಷೆ ಹಾಗೂ ಜೀವನಕ್ಕೆ ಶುಭ ಹಾರೈಸಿದರು. ಪ್ರಾಚಾರ್ಯ ಡೆನಿಸ್ ಬಾಂಜಿ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತ ಕೋರಿದರು. ವಿದ್ಯಾರ್ಥಿ ಪ್ರಜ್ವಲ್ ವಿದ್ಯಾರ್ಥಿ ವೇತನ ವಿಜೇತರ ಪಟ್ಟಿ ವಾಚಿಸಿದರು. ದಿಗಂತ್ ಜಿ ಮತ್ತು ಶೃದ್ಧಾ ಕಾರ್ಯಕ್ರಮ ನಿರ್ವಹಿಸಿದರು. ಫಾತಿಮಾತುಲ್ ಸನಾ ವಂದಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜು, ಮಣೂರು ಪಡುಕರೆ ಇಲ್ಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಶುಭಾಶಯ ಕೋರಿದರು. ಪ್ರಾಚಾರ್ಯ ಡೆನಿಸ್ ಬಾಂಜಿ ಕೆ., ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರಮೇಶ ಆಚಾರ್, ಬ್ಯಾಂಕಿನ ಪ್ರಬಂಧಕ ಗುರುರಾಜ ಸರಳಾಯ ಇದ್ದರು.




By
ForthFocus™