ಬೆಳಗಾವಿ, ಡಿ.16: ಕಳೆದ 19 ವರ್ಷಗಳಿಂದ ಮನೆ ನಿರ್ಮಾಣದ ಸಂದರ್ಭದಲ್ಲಿ ರೂ. 10 ಲಕ್ಷ ಮೀರಿದ ಅಂದಾಜು ಪಟ್ಟಿಯ ಮೇಲೆ ಶೇಕಡಾ 1 ರಷ್ಟು ಮೊತ್ತವನ್ನು ಕಾರ್ಮಿಕ ಕಲ್ಯಾಣ ಸುಂಕವೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕಟ್ಟಡ ನಿರ್ಮಾಣದಾರರು ಪಾವತಿಸುತ್ತಿದ್ದು, ಇದು 2006ನೇ ಇಸವಿಯ ಅಧಿಸೂಚನೆವಾಗಿದ್ದು, 19 ವರ್ಷಗಳ ಕಾಲಾಂತರದಲ್ಲಿ ಕಟ್ಟಡ ನಿರ್ಮಾಣ ವೆಚ್ಚವು ಸಾಕಷ್ಟು ಹೆಚ್ಚಾಗಿದ್ದು, ಬಡವರು ಮತ್ತು ಕೆಳ ಮಧ್ಯಮ ವರ್ಗದ ಜನರು ಇದರಿಂದ ಆರ್ಥಿಕವಾಗಿ ತೊಂದರೆಗೊಳಗಾಗಿದ್ದಾರೆ. ಪ್ರಸ್ತುತ ದಿನಾಂಕ : 21- 11- 2025 ರಂದು ಕೇಂದ್ರ ಸರ್ಕಾರದ ಅಧಿಸೂಚನೆಯನ್ವಯ ಜಾರಿಗೊಳಿಸಿದ 1 (6) ನೇ ಕಾರ್ಮಿಕ ಸಂಹಿತೆಯಲ್ಲಿ ಸಾಮಾಜಿಕ ಭದ್ರತಾ ಸಂಹಿತೆ ಅಡಿಯಲ್ಲಿ ರೂ. 50.00 ಲಕ್ಷದ ಒಳಗಿನ ವಾಸದ ಮನೆ ನಿರ್ಮಾಣ ಕಾಮಗಾರಿಗಳಿಗೆ ಕಾರ್ಮಿಕ ಕಲ್ಯಾಣ ಸುಂಕವನ್ನು ಪಾವತಿಸಲು ವಿನಾಯಿತಿಯನ್ನು ನೀಡಲಾಗಿರುತ್ತದೆ.
ಬಡವರು ಮತ್ತು ಕೆಳ ಮಧ್ಯಮ ವರ್ಗದ ಜನರು ಸಾಲ ಮಾಡಿ ಮನೆ ನಿರ್ಮಾಣ ಮಾಡುತ್ತಿರುವ ಸಂಧರ್ಭದಲ್ಲಿ ರೂ. 10,000 ದಿಂದ 50,000 ದವರೆಗಿನ ಕಾರ್ಮಿಕ ಕಲ್ಯಾಣ ಸುಂಕವು ಹೊರೆಯಾಗಿ ಪರಿಣಮಿಸಿದ್ದು, ಇದೀಗ ಕೇಂದ್ರ ಸರಕಾರದ ಅಧಿಸೂಚನೆಯನ್ವಯ ಸಾಮಾಜಿಕ ಭದ್ರತಾ ಸಂಹಿತೆ ಅಡಿ 50.00 ಲಕ್ಷ ಮೀರದ ವಾಸದ ಮನೆಗಳಿಗೆ ಕಾರ್ಮಿಕ ಕಲ್ಯಾಣ ಸುಂಕವನ್ನು ಪಾವತಿಸಲು ವಿನಾಯಿತಿ ನೀಡಲಾಗಿದೆ. ಇದರಿಂದಾಗಿ, ಬಡವರು ಮತ್ತು ಕೆಳ ಮಧ್ಯಮ ವರ್ಗದ ಸ್ವಂತ ವಾಸದ ಮನೆ ನಿರ್ಮಾಣ ಮಾಡುವ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗಲಿದೆ.
ಸದ್ರಿ ವಿನಾಯಿತಿಯನ್ನು ರಾಜ್ಯ ಕಾರ್ಮಿಕ ಇಲಾಖೆಯು ಆದೇಶ ಹೊರಡಿಸುವ ಮೂಲಕ ಅನುಷ್ಠಾನಗೊಳಿಸಿ, ರಾಜ್ಯದ ಬಡವರು ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವಂತೆ ಶಾಸಕರು ಕಾರ್ಮಿಕ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.




By
ForthFocus™