ಉಡುಪಿ, ಸೆ.7: ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ 2024-25ನೇ ಸಾಲಿನ 47ನೇ ವಾರ್ಷಿಕ ಮಹಾಸಭೆ ಭಾನುವಾರ ಬ್ಯಾಂಕಿನ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣರವರ ಅಧ್ಯಕ್ಷತೆಯಲ್ಲಿ ಉಡುಪಿ ಪುರಭವನದಲ್ಲಿ ಜರುಗಿತು. ಬ್ಯಾಂಕಿನ ಅಧ್ಯಕ್ಷರಾದ ಯಶ್ಪಾಲ್ ಎ ಸುವರ್ಣರವರು ಸರ್ವ ಸದಸ್ಯರನ್ನು ಸ್ವಾಗತಿಸಿ, ಬ್ಯಾಂಕ್ ನಿರಂತರ 15 ವರ್ಷಗಳಿಂದ ಅತಿ ಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸದಸ್ಯರು ಮತ್ತು ಗ್ರಾಹಕರ ವಿಶ್ವಾಸ ಹಾಗೂ ಸಹಕಾರದಿಂದ ಬ್ಯಾಂಕ್ ಈ ಬಾರಿ ಸಾರ್ವಕಾಲಿಕ ಗರಿಷ್ಠ ಲಾಭವನ್ನು ದಾಖಲಿಸುವ ಮೂಲಕ ಆರ್ಥಿಕವಾಗಿ ಸದೃಢವಾಗಿದೆ ಎಂದರು. ಕೇಂದ್ರ ಸರಕಾರ ಸಹಕಾರಿ ಕ್ಷೇತ್ರವನ್ನು ಸಶಕ್ತೀಕರಣಗೊಳಿಸಲು ಮುಂದಡಿಯಿಟ್ಟರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಬ್ಯಾಂಕಿನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸಲು ಬದ್ಧವಾಗಿದ್ದು, ಮುಂಬರುವ ದಿನಗಳಲ್ಲಿ ನೂತನ ಶಾಖೆಯನ್ನು ಬೆಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಆರಂಭಿಸುವ ಬಗ್ಗೆ ಆಡಳಿತ ಮಂಡಳಿಯು ಕಾರ್ಯಪ್ರವೃತ್ತವಾಗಿದ್ದು, ಶೀಘ್ರದಲ್ಲಿಯೇ ಉಡುಪಿ ಮತ್ತು ಗಂಗೊಳ್ಳಿ ಶಾಖೆ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದರು. ಮಹಾಲಕ್ಷ್ಮೀ ಬ್ಯಾಂಕ್ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ 100 ಕೋಟಿ ಪಾಲು ಬಂಡವಾಳ, 1000 ಕೋಟಿ ಠೇವಣಿ ಸಂಗ್ರಹ ಹಾಗೂ 1 ಲಕ್ಷ ಗ್ರಾಹಕರನ್ನು ಹೊಂದುವ ಮೂಲಕ ರಾಜ್ಯದ ಮಾದರಿ ಪಟ್ಟಣ ಸಹಕಾರಿ ಬ್ಯಾಂಕಾಗಿ ಗುರುತಿಸಿಕೊಳ್ಳುವ ಧ್ಯೇಯ ಆಡಳಿತ ಮಂಡಳಿ ಹೊಂದಿದೆ.
ಮುಖ್ಯ ಅತಿಥಿಯಾಗಿದ್ದ ನಾಡೋಜ ಡಾ ಜಿ. ಶಂಕರ್ ಮಾತನಾಡಿ ಯಶ್ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ನಿರಂತರವಾಗಿ ಲಾಭದಾಯಕ ಸಂಸ್ಥೆಯಾಗಿ ಮೂಡಿಬರುತ್ತಿರುವುದು ಅಭಿನಂದನಾರ್ಹವಾಗಿದ್ದು, ಬ್ಯಾಂಕಿನ ಕಾರ್ಯಚಟುವಟಿಕೆಗಳಿಗೆ ಸದಾ ಸಹಕಾರದ ಆಶಯ ವ್ಯಕ್ತಪಡಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಸಮಾಜು ಮುಖಿ ಕಾರ್ಯಗಳು ಸಹಕಾರಿ ಸಂಸ್ಥೆಗಳಿಗೆ ಮಾದರಿ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮೀನುಗಾರ ಸಮುದಾಯದಿಂದ ಪ್ರವರ್ತಿತ ಮಹಾಲಕ್ಷ್ಮೀ ಬ್ಯಾಂಕ್ ಇಂದು ರಾಷ್ಟ್ರಮಟ್ಟದಲ್ಲಿ ಸಾಧನೆಯನ್ನು ಮಾಡುವ ಮೂಲಕ ಕರಾವಳಿ ಜನತೆಯ ಹೆಮ್ಮೆಯ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವುದು ಸಂತಸ ತಂದಿದೆ ಎಂದರು. ಬ್ಯಾಂಕಿನ ನಿವ್ವಳ ಲಾಭದಲ್ಲಿ ಸಹಕಾರ ಶಿಕ್ಷಣ ನಿಧಿಗೆ ರೂ. 13,73,436/ ರ ಚೆಕ್ನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ಅಧ್ಯಕ್ಷ ಯಶ್ಪಾಲ್ ಸುವರ್ಣ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ನಾರಾಯಣ ಕರ್ಕೇರ, ನಿಕಟಪೂರ್ವ ಅಧ್ಯಕ್ಷರಾದ ದಯಾನಂದ ಸುವರ್ಣ ರವರನ್ನು ಅಭಿನಂದಿಸಲಾಯಿತು. 216 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವದಾಖಲೆ ಮಾಡಿರುವ ವಿದುಷಿ ದೀಕ್ಷಾ, ಯೋಗ ರತ್ನ ಪುರಸ್ಕೃತೆ ತನುಶ್ರೀ ಪಿತ್ರೋಡಿ, ಆಪತ್ಭಾಂದವ ಈಶ್ವರ ಮಲ್ಪೆ,, ರಾಷ್ಟ್ರಮಟ್ಟದ ಬಾಕ್ಸಿಂಗ್ಪಟು ಮಾನ್ಸಿ ಜೆ. ಸುವರ್ಣ, ಸಿ. ಎ. ಪರೀಕ್ಷೆ ತೇರ್ಗಡೆಗೊಂಡ ಶಮಾ ಕುಂದರ್, ಶ್ರೇಯಾ ಶಶಿಧರ್ ಹಾಗೂ ರ್ಯಾಂಕ್ ವಿಜೇತೆ ಚೈತ್ರಾಲಿ ಯವರಿಗೆ ಬ್ಯಾಂಕಿನ ವತಿಯಿಂದ ನಗದು ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ. ಕುಂದರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಮೀನುಗಾರ ಮುಖಂಡರಾದ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್, ರಾಮಚಂದ್ರ ಕುಂದರ್, ಶಿವಪ್ಪ ಟಿ. ಕಾಂಚನ್, ಮೋಹನ್ ಬೆಂಗ್ರೆ, ಉದಯ ಹಟ್ಟಿಯಂಗಡಿ, ಅನಿಲ್ ಬೆಂಗ್ರೆ, ಚೇತನ್ ಬೆಂಗ್ರೆ, ಸತೀಶ್ ಕುಂದರ್, ರತ್ನಾಕರ ಸಾಲ್ಯಾನ್, ದಯಾನಂದ ಕುಂದರ್, ಭಾಸ್ಕರ ಬೈಕಂಪಾಡಿ, ಬ್ಯಾಂಕಿನ ಉಪಾಧ್ಯಕ್ಷರಾದ ವಾಸುದೇವ ಸಾಲ್ಯಾನ್, ನಿರ್ದೇಶಕರುಗಳಾದ ಶಶಿಕಾಂತ ಬಿ ಕೋಟ್ಯಾನ್, ಶೋಭೇಂದ್ರ ಸಸಿಹಿತ್ಲು, ಕೆ. ಸಂಜೀವ ಶ್ರೀಯಾನ್, ವಿನಯ ಕರ್ಕೇರ, ನಾರಾಯಣ ಟಿ ಅಮೀನ್, ಸುರೇಶ್ ಬಿ ಕರ್ಕೇರ, ಶಿವರಾಮ ಕುಂದರ್, ವನಜಾ ಜೆ ಪುತ್ರನ್, ವನಜ ಕಿದಿಯೂರು, ಸದಾನಂದ ಬಳ್ಕೂರು, ವೃತ್ತಿಪರ ನಿರ್ದೇಶಕರಾದ ಮಂಜುನಾಥ ಎಸ್. ಕೆ, ಸಿ.ಎ. ಅಜಿತ್ ಕುಮಾರ್ ಹಾಗೂ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕರಾದ ಶರತ್ ಕುಮಾರ್ ಶೆಟ್ಟಿ ಎನ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಾರಿಕಾ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.




By
ForthFocus™