ಕೋಟ, ಆ.3: ಜಿಲ್ಲಾ ಪೋಲಿಸ್ ಇಲಾಖೆ ಗ್ರಾಮಗಳ ವ್ಯಾಪ್ತಿಯಲ್ಲಿ ರಕ್ಷಣಾ ಕವಚವಾಗಿ ದೃಷ್ಠಿ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಿದೆ. ಈ ಕಾರ್ಯಕ್ಕೆ ಜನಸಾಮಾನ್ಯರ ಸಹಕಾರ ಅಗತ್ಯವಾಗಿದೆ ಎಂದು ಉಡುಪಿ ಜಿಲ್ಲಾ ಪೋಲಿಸ್ ಇಲಾಖೆಯ ಡಿವೈಎಸ್ ಪಿ ಪ್ರಭು ಡಿ.ಟಿ ಹೇಳಿದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಹಕಾರದೊಂದಿಗೆ ಜಿಲ್ಲಾ ಪೋಲಿಸ್ ಇಲಾಖೆಯ ಯೋಜನೆಯಾದ ದೃಷ್ಠಿ ಯೋಜನೆ ಅನುಷ್ಠಾನದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕೋಟ ಠಾಣಾ ವ್ಯಾಪ್ತಿಯಲ್ಲಿ 60 ರಿಂದ 70 ಸಾವಿರ ಜನಸಂಖ್ಯೆಗೆ 38 ಪೋಲಿಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ ಪ್ರಕರಣಗಳನ್ನು ಬೇಧಿಸಲು ಈ ಯೋಜನೆ ಅಗತ್ಯ, ಈ ಯೋಜನೆ ಅನುಷ್ಠಾನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಯಲಿದ್ದು ಸಾಲಿಗ್ರಾಮ ಹಾಗೂ ತೆಕ್ಕಟ್ಟೆ ವ್ಯಾಪ್ತಿಯ ಎರಡು ವಿಭಾಗಗಳಾಗಿ ಮಾರ್ಪಾಡುಗೊಳಿಸಿ ಜಂಬೋ ಸ್ಟಾರ್ ಸೆಕ್ಯೂರಿಟಿ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆಯೊಂದಿಗೆ ಇಲಾಖೆ ಒಡಂಬಡಿಕೆಯ ಮೇರೆಗೆ ನಿವೃತ್ತ ಸೈನಿಕರಿಗೆ ತರಬೇತಿ ನೀಡಿ ಅವರ ಕಾರ್ಯವೈಖರಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿ ಕೊಡಲಾಗುತ್ತದೆ. ಸಾರ್ವಜನಿಕರಿಂದ ಅಲ್ಪ ದೇಣಿಗೆ ಆ ಸಂಸ್ಥೆ ಸಂಗ್ರಹಿಸಲಿದೆ ಎಂದು ಪ್ರಭು ಡಿ.ಟಿ ಮಾಹಿತಿ ನೀಡಿದರು.
ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಯಿತು. ಜಂಬೂ ಸೆಕ್ಯೂರಿಟಿ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ ವಿಜಯ ಫರ್ನಾಂಡೀಸ್ ತಮ್ಮ ಸಂಸ್ಥೆ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಗ್ರಾಮಸ್ಥರಿಗೆ ಮನದಟ್ಟು ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ವಹಿಸಿದ್ದರು. ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ ಇದ್ದರು. ಕೋಟ ಆರಕ್ಷಕ ಠಾಣಾಧಿಕಾರಿ ಪ್ರವೀಣ್ ಕುಮಾರ್ ನಿರ್ವಹಿಸಿದರು. ಕೋಟ ಠಾಣೆಯ ಮಹಿಳಾ ಪಿಎಸ್ ಐ ಸುಧಾ ಪ್ರಭು ವಂದಿಸಿದರು.




By
ForthFocus™