ಹಿರಿಯಡಕ, ಏ.21: ಸ್ವತಂತ್ರವಾದ ತೀರ್ಮಾನ ತೆಗೆದುಕೊಳ್ಳುವಲ್ಲಿ ಸಾಮಾನ್ಯವಾಗಿ ಸಮಸ್ಯೆ ಅನುಭವಿಸುವ ಇವತ್ತಿನ ವಿದ್ಯಾರ್ಥಿಗಳಿಗೆ ತಾಯ್ತಂದೆಗಳು ಅತ್ಯಂತ ಆಪ್ತವಾಗಿ ಮತ್ತು ಮುಕ್ತವಾಗಿ ಮನತೆರೆದು ಮಾತನಾಡುವ ಮೂಲಕ ಅತ್ಯುತ್ತಮವಾದ ಸಾಮಾಜಿಕ ಆವರಣವನ್ನು ನಿರ್ಮಾಣ ಮಾಡಿಕೊಡುವ ಜೊತೆಗೆ ಅವರ ಶೈಕ್ಷಣಿಕ ಬದುಕಿಗೆ ಸುಭದ್ರವಾದ ಬುನಾದಿಯನ್ನು ಹಾಕಿಕೊಡುವ ಅಗತ್ಯಯಿದೆ ಎಂದು ಎ.ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆ ಹಿರಿಯ ಮನಃಶಾಸ್ತ್ರಜ್ಞ ನಾಗರಾಜಮೂರ್ತಿ ಹೇಳಿದರು. ಅವರು ಹಿರಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವರ್ತಮಾನ ಕಾಲದ ವಾಸ್ತವವನ್ನು ಕುರಿತು ಹೆತ್ತವರು ಗಮನಹರಿಸುವ ಜೊತೆಗೆ ಯುವಮನಸ್ಸುಗಳಿಗೆ ಬದುಕಿನ ಸವಾಲನ್ನು ಎದುರಿಸಲು ಅಗತ್ಯವಾದ ವ್ಯಾವಹಾರಿಕ ಎಚ್ಚರವನ್ನು ಮೂಡಿಸಬೇಕಾದ ಅಗತ್ಯವಿದೆ ಎಂಬ ಕಿವಿ ಮಾತನ್ನೂ ಹೇಳಿದರು. ಇದೇ ಸಂದರ್ಭದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಯುವ ಸಮಾಲೋಚಕಿ ಭೀಮವ್ವ ವಕ್ರ ಅವರು ಉಡುಪಿ ಯುವಸ್ಪಂದನ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಸಿಗುವ ಸಮಾಲೋಚನಾ ಸೌಲಭ್ಯದ ಸ್ವರೂಪವನ್ನು ಪರಿಚಯಿಸಿದರು. ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ ಎಂ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ ಸ್ವಾಗತಿಸಿ, ಶಿಕ್ಷಕ- ರಕ್ಷಕ ಸಂಘದ ಸಂಚಾಲಕಿ ಮೀನಾಕ್ಷಿ ನಾಯ್ಕ ವಂದಿಸಿದರು. ಕನ್ನಡ ಉಪನ್ಯಾಸಕ ರವಿಚಂದ್ರ ಬಾಯರಿ ಕೆ. ನಿರೂಪಿಸಿದರು. ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಶಾಂತಾ ಪೆರ್ಡೂರು, ಕಾರ್ಯದರ್ಶಿಯಾಗಿ ಪ್ರಕಾಶ್ ಶೆಟ್ಟಿಗಾರ್ ಶಿವಪುರ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಾಯತ್ರಿ, ಶ್ರೀಮತಿ ಆಚಾರ್ಯ, ವಿಠ್ಠಲ ನಾಯ್ಕ, ಭಾಸ್ಕರ ಆಚಾರ್ಯ, ಗೋಪಾಲ ಹಾಗೂ ಸುರೇಖಾ ಬಂಗೇರ ಸರ್ವಾನುಮತದಿಂದ ಆಯ್ಕೆಗೊಂಡರು.




By
ForthFocus™