Home ಸುದ್ಧಿಗಳು ಪ್ರಾದೇಶಿಕ ಅಸಂಘಟಿತ ಕಾರ್ಮಿಕರು ತಮ್ಮ ಸಮಗ್ರ ವಿವರ ಇ ಶ್ರಮ್ ನಲ್ಲಿ ತಪ್ಪದೇ ನೊಂದಾಯಿಸಿ: ಜಿಲ್ಲಾಧಿಕಾರಿ

ಅಸಂಘಟಿತ ಕಾರ್ಮಿಕರು ತಮ್ಮ ಸಮಗ್ರ ವಿವರ ಇ ಶ್ರಮ್ ನಲ್ಲಿ ತಪ್ಪದೇ ನೊಂದಾಯಿಸಿ: ಜಿಲ್ಲಾಧಿಕಾರಿ

1113
0

ಉಡುಪಿ: ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ನಿವಾರೋಣಾಪಾಯ ಸೇರಿದಂತೆ ಸಾಮಾಜಿಕ ಭದ್ರತೆಗಳನ್ನು ರೂಪಿಸಲು ಇ ಶ್ರಮ್ ಯೋಜನೆ ನೊಂದಣಿ ನಡೆಯುತ್ತಿದ್ದು, ವಲಸೆ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರುಗಳು ತಪ್ಪದೇ ನೊಂದಣಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ತಿಳಿಸಿದರು.

ಅವರು ಬುಧವಾರ, ಕಾರ್ಮಿಕ ಸಮಗ್ರ ರಾಷ್ಟ್ರ‍ೀಯ ದತ್ತಾಂಶ ಇ ಶ್ರಮ್ ಯೋಜನೆಯ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರ ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ನಿರ್ವಹಣೆ, ಸಾಮಾಜಿಕ ಭದ್ರತೆ, ಹಾಗೂ ಕಲ್ಯಾಣ ಯೋಜನೆಗಳನ್ನು ರೂಪಿಸಲು ಅಸಂಘಟಿತ ಕಾರ್ಮಿಕರ ದತ್ತಾಂಶವನ್ನು ಕ್ರೂಢೀಕರಿಸಿದ್ದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಲು ಇ-ಶ್ರಮ್ ನೊಂದಣಿ ಸಹಾಯವಾಗಲಿದೆ ಎಂದರು.

ನೊಂದಣಿ ದತ್ತಾಂಶದಿಂದ ಸರ್ಕಾರವು ಅಸಂಘಟಿತ ಕಾರ್ಮಿಕರ ವಿವಿಧ ವರ್ಗದವರಿಗೆ ವಿಶೇಷ ನೀತಿ ನಿಯಮ ಯೋಜನೆ ರೂಪಿಸಲು ಸಾಧ್ಯ, ಅಸಂಘಟಿತ ಕಾರ್ಮಿಕರು ನೊಂದಣಿ ಮಾಡಿಕೊಳ್ಳುವುದರಿಂದ ಶೀಘ್ರದಲ್ಲಿಯೇ ಸರ್ಕಾರದ ಹಲವು ಯೋಜನೆಗಳನ್ನು ಪಡೆಯಬಹುದಾಗಿದೆ ಅಲ್ಲದೇ ನೊಂದಾಯಿಸಿದವರಿಗೆ 1 ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ಅಪಘಾತದಿಂದ ಮರಣ ಹೊಂದಿದರೆ ಅಥವಾ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ 2 ಲಕ್ಷ ರೂ ಪರಿಹಾರ, ಭಾಗಶ: ಅಂಗ ವೈಕಲ್ಯತೆಗೆ 1 ಲಕ್ಷ ರೂ ಪರಿಹಾರ ಪಡೆಯಬಹುದಾಗಿದೆ ಎಂದರು.

16-59 ವಯೋಮಾನದ ಭವಿಷ್ಯ ನಿಧಿ ಅಥವಾ ಇಎಸ್‌ಐ ಫಲಾನುಭವಿಗಳಲ್ಲದವರು ಉಚಿತವಾಗಿ ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಹೋಗಿ ನೊಂದಾಯಿಸಿ ಸ್ಥಳದಲ್ಲಿಯೇ ಗುರುತಿನ ಚೀಟಿಯನ್ನು ಪಡೆಯಬಹುದಾಗಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು , ಕೃಷಿ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಮನಗೆಲಸ ಕಾರ್ಮಿಕರು, ಚಾಲಕರು, ಟೈಲರ್ ಗಳು, ಬೀದಿ ಬದಿಯ ವ್ಯಾಪಾರಿಗಳು ಸೇರಿದಂತೆ ಒಟ್ಟು 379 ವರ್ಗಗಳ ಕಾರ್ಮಿಕರು ಇ -ಶ್ರಮ್ ನಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದರು.

ನೊಂದಣಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕರ ಸಹಾಯವಾಣಿ 155214 ಅಥವಾ ಇ- ಶ್ರಮ್ ಸಹಾಯವಾಣಿ 14434 ಗೆ , ದೂರುಗಳಿದ್ದಲ್ಲಿ http://URL:www.gms.eshram.gov.in  ಸಂಪರ್ಕಿಸಬಹುದಾಗಿದೆ ಎಂದರು.

ಅಸಂಘಟಿತ ವಲಯ ಕಾರ್ಮಿಕರಿಗೆ ವಯೋವೃದ್ದ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು “ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್” ಎಂಬ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಮಾಸಿಕ 15000 ಒಳಗಿನ ಆದಾಯ ಹೊಂದಿ, 18-40 ವರ್ಷದೊಳಗಿನವರು ಈ ಯೋಜನೆಯಡಿ ನೊಂದಾಯಿಸಿಕೊಳ್ಳಬಹುದಾಗಿದೆ. ಕಾರ್ಮಿಕರು ಪ್ರತಿ ತಿಂಗಳು 55 ರೂ ವಂತಿಗೆ ಪಾವತಿ ಮಾಡುವುದರ ಮೂಲಕ, 60 ವರ್ಷದ ನಂತರ ವಾರ್ಷಿಕ 36000 ರೂ ಪಿಂಚಣಿ ಪಡೆಯಬಹುದಾಗಿದೆ.

ವ್ಯಾಪಾರಿ, ಲಘು ವ್ಯಾಯಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳು 60 ವರ್ಷ ಪೂರ್ಣಗೊಂಡ ನಂತರ ಮಾಸಿಕ 3000 ಪಿಂಚಣಿ ಸೌಲಭ್ಯ ಒಗದಿಸುವ ಮೂಲಕ ಅವರುಗಳಿಗೆ ಆರ್ಥಿಕ ಭದ್ರತೆಯನ್ನು ನೀಡಲು “ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿ ರಾಷ್ಟ್ರ‍ೀಯ ಪಿಂಚಣಿ“ ವಂತಿಗೆ ಆಧಾರಿತ ಯೋಜನೆ ಜಾರಿಗೆ ತಂದಿದ್ದು 18-40 ವರ್ಷದೊಳಗಿನ ವಾರ್ಷಿಕ ವಹಿವಾಟು 1.5 ಕೋಟಿ ಒಳಗಿರುವ ಆದಾಯ ತೆರಿಗೆ ಪಾವತಿಸದವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಈ ಎರಡೂ ಪಿಂಚಣಿ ಯೋಜನೆಗಳನ್ನು ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಹಾಗೂ ನಾಮ ನಿರ್ದೇಶಿತರ ವಿವರಗಳೊಂದಿಗೆ ಮಾಸಿಕ ವಂತಿಗೆ ಪಾವತಿಯೊಂದಿಗೆ ನೊಂದಾಯಿಸಕೊಳ್ಳಬಹುದಾಗಿದೆ.

ಜಿಲ್ಲೆಯಲ್ಲಿ ಕಳೆದ 2 ತಿಂಗಳಿಂದ ನಡೆದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಸಮೀಕ್ಷೆಯಲ್ಲಿ ಕಂಡು ಬಂದ ಬಾಲ ಕಾರ್ಮಿಕರಿಗೆ ಹಾಗೂ ಕಿಶೋರ ಕಾರ್ಮಿಕರಿಗೆ ಪುರ್ನವಸತಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಅವರುಗಳನ್ನು ಶಾಲೆಗೆ ಹೋಗುವಂತೆ ಕ್ರಮವಹಿಸಬೇಕು ಮಾಲೀಕರುಗಳಿಗೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಕಾರ್ಮಿಕ ಅಧಿಕಾರಿ ಕುಮಾರ್, ನಗರಾಭಿವೃಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಹಾಗೂ ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.