Home ಸುದ್ಧಿಗಳು ಪ್ರಾದೇಶಿಕ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ವಾರ್ಷಿಕ ಮಹಾಸಭೆ

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ವಾರ್ಷಿಕ ಮಹಾಸಭೆ

349
0

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಇದರ ೨೦೨೦-೨೧ ನೇ ಸಾಲಿನ ವಾರ್ಷಿಕ ಮಹಾಸಭೆಯು ಮಂಗಳೂರಿನ ಪಾಂಡೇಶ್ವರದ ಎಮ್ಮೆಕೆರೆ ರಮಾ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಯಶ್ಪಾಲ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಫೆಡರೇಶನ್ ಮಹಾಸಭೆಗೆ 49 “ಬಿ” ವರ್ಗದ ಸದಸ್ಯರು ಮತು 760 “ಸಿ” ವರ್ಗದ ಸದಸ್ಯರು ಮತ್ತು ಸರಕಾರದ ಪ್ರತಿನಿಧಿಗಳು ಹಾಜರಿದ್ದರು. ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಸ್ವಾಗತಿಸಿ, ಸದಸ್ಯರಿಗೆ ಸಂಸ್ಥೆಯ
ಚಟುವಟಿಕೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡಿದರು.

ಸಭೆಯಲ್ಲಿ ರಾಜ್ಯ ಸರಕಾರದ ಮತ್ಸ್ಯಾಶ್ರಯ ಯೋಜನೆಯನ್ನು ಪ್ರಾಥಮಿಕ ಮೀನುಗಾರಿಕ ಸಹಕಾರಿ ಸಂಘಗಳ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಯೋಜನೆಯ ನೋಡಲ್ ಏಜೆನ್ಸಿಯಾಗಿ
ಫೆಡರೇಶನ್ ನೇಮಕ, ಸಾಂಪ್ರದಾಯಿಕ ನಾಡದೋಣಿಗಳ ಔಟ್ ಬೋರ್ಡ್ ಇಂಜಿನ್ ಖರೀದಿಯ ಸ್ಥಗಿತಗೊಳಿಸಿರುವ ಸಹಾಯಧನವನ್ನು ಪುನರಾರಂಭ ಹಾಗೂ ಕೇಂದ್ರ ಪುರಸ್ಕೃತ ಉಳಿತಾಯ ಪರಿಹಾರ ಯೋಜನೆಯನ್ನು ಎಪಿಲ್
ಕಾರ್ಡ್ದಾರ ಮೀನುಗಾರರಿಗೂ ವಿಸ್ತರಿಸುವಂತೆ ಹಾಗೂ ಡೀಸೆಲ್ ಸಬ್ಸಿಡಿಯ ಬಾಕಿ ಹಣವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸುವಂತೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.

ಫೆಡರೇಶನ್ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮೀನುಗಾರಿಕಾ ಕಾಲೇಜಿನಲ್ಲಿ ಮೀನುಗಾರಿಕೆಯ ಬಗ್ಗೆ ವ್ಯಾಸಂಗ ಮಾಡುವ ಸದಸ್ಯರ ಮಕ್ಕಳ ವ್ಯಾಸಂಗ ವೆಚ್ಚ ಭರಿಸುವುದು, ಸದಸ್ಯರಿಗೆ ಆರೋಗ್ಯ ಕಾರ್ಡು ಸೌಲಭ್ಯ ಒದಗಿಸುವುದು, ಸದಸ್ಯ ಸಹಕಾರಿ ಸಂಘಗಳ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಗಾರ, ಮೀನುಗಾರಿಕೆ ಮತ್ತು ಮೀನಿನ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಉದ್ದೇಶದಿಂದ ಮತ್ಸ್ಯಮೇಳ ಆಯೋಜನೆ, ಸದಸ್ಯರಿಗೆ ಫೆಡರೇಶನಿನ
ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ಏರ್ಪಡಿಸುವುದು, ಕಾಪು ಮತ್ತು ಹಂಗಾರಕಟ್ಟೆ ಕೇಂದ್ರಗಳಲ್ಲಿ ನೂತನವಾಗಿ ಬ್ಯಾಂಕಿಂಗ್ ವಿಭಾಗಗಳನ್ನು ತೆರೆಯುವುದು, ಕೇಂದ್ರ ಸರಕಾರದ ಆತ್ಮನಿರ್ಭರ ಭಾರತದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು ಮತ್ತು ಸದಸ್ಯ ಮೀನುಗಾರರಿಗೆ ಕಿಸಾನ್ ಕ್ರೆಡಿಟ್‌ ಕಾರ್ಡು ಸೌಲಭ್ಯ ಒದಗಿಸುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿದ್ದು, ಕೆಲವೊಂದು ಆಯ್ದ ಕೇಂದ್ರಗಳಲ್ಲಿ ಫೆಡರೇಶನ್ ವತಿಯಿಂದ ಮತ್ಸ್ಯ ಕ್ಯಾಂಟಿನ್ ಆರಂಭಿಸಿ ಕಾರ್ಮಿಕ ಹಾಗೂ ವಿದ್ಯಾರ್ಥಿಗಳಿಗೆ ಮಿತ ದರದಲ್ಲಿ ಮೀನು ಊಟ ಒದಗಿಸುವ ಬಗ್ಗೆ ನಿರ್ಧರಿಸಲಾಯಿತು.

ಫೆಡರೇಶನ್ ವತಿಯಿಂದ ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಸಹಕಾರಿ ಸಂಸ್ಥೆಗಳಿಗೆ, ಮೀನುಗಾರ ಸಂಘಗಳಿಗೆ ಮತ್ತು ಎಲ್ಲಾ ವರ್ಗದ ಮೀನುಗಾರರಿಗೆ ಅನುಕೂಲವಾಗುವ ಉದ್ದೇಶದಿಂದ ಆಧುನೀಕೃತ ಮೀನುಗಾರಿಕೆ ಮತ್ತು ಮೀನಿನ ಉತ್ಪನ್ನಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನೀಡುವ ಉದ್ದೇಶದಿಂದ ತರಬೇತಿ ಕೇಂದ್ರದ ಸ್ಥಾಪನೆ ಹಾಗೂ ಸಮುದ್ರ ಮೀನುಗಾರಿಕೆಯ ಜೊತೆಗೆ ಒಳನಾಡಿನ ಸಿಹಿ ನೀರಿನ ಮೀನುಗಾರಿಕೆಯನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ವೈಜ್ಞಾನಿಕ ರೀತಿಯಲ್ಲಿ ಒಳನಾಡಿನ ಮೀನು ಮರಿ ಉತ್ಪಾದನೆಯ ಬಗ್ಗೆ ಮತ್ತು ಮೀನು ಸಾಕಣಿಯ ಬಗ್ಗೆ ಅಧ್ಯಯನ ಮಾಡಿರುವ ಮತ್ತು ಪರಿಣಿತರ ಸಹಕಾರವನ್ನು ಪಡೆದು ಮೀನು ಮರಿ ಉತ್ಪಾದನೆ ಮತ್ತು ಬಿತ್ತನೆಯ ಬಗ್ಗೆ ಹೊಸ ಯೋಜನೆಯನ್ನು ರೂಪಿಸಲಾಗಿದ್ದು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಕಾರದಿಂದ ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಪ್ರಧಾನ ಕಚೇರಿ ಹಾಗೂ ಸಮುದಾಯ ಭವನ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ನಡೆಸುವುದಾಗಿ ತಿಳಿಸಿದರು.

ಮಹಾಸಭೆಯಲ್ಲಿ ಮೀನುಗಾರಿಕಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ತುಷಾರ್‌ರವರಿಗೆ ಸಂಸ್ಥೆಯ ವತಿಯಿಂದ ವ್ಯಾಸಂಗದ ವೆಚ್ಚದ ಚೆಕ್ ವಿತರಿಸಲಾಯಿತು. ಫೆಡರೇಶನಿನ 2020-21 ನೇ ವಾರ್ಷಿಕ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಹಾಸಭೆಯಲ್ಲಿ ಮಂಡಿಸಿದರು.

ಸದಸ್ಯರು ಸಂಸ್ಥೆಯ ಅಭಿವೃದ್ಧಿಯ ಚಟುವಟಿಕೆಗಳ ಬಗ್ಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರುಗಳಿಗೆ ಮಹಾಸಭೆಯಲ್ಲಿ ಅಭಿನಂದನೆಯನ್ನು ಸಲ್ಲಿಸಿದರು.

ಕೆ.ಎಂ.ಸಿ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಬಗ್ಗೆ ಹರ್ಷ ವ್ಯಕ್ತಪಡಿಸಿ, ಆಡಳಿತ ಮಂಡಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಪುರುಷೋತ್ತಮ ಅಮೀನ್, ವ್ಯವಸ್ಥಾಪಕ ನಿರ್ದೇಶಕರಾದ ಹರೀಶ್‌ ಕುಮಾರ್ ಹಾಗೂ ಫೆಡರೇಶನಿನ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.