ಮಂಗಳೂರು, ಮಾ.20: ಸಮಾಜದ ಕಟ್ಟುಪಾಡುಗಳ ಮಧ್ಯೆಯೇ ಛಲದಿಂದ ಮುನ್ನಡೆದು ಗುರಿ ಸಾಧಿಸಿದ ಮಹಿಳಾ ಸಾಧಕಿಯರ ಜೀವನದ ಬಗ್ಗೆ ತಿಳಿದುಕೊಂಡು ಅವರ ಆದರ್ಶಗಳನ್ನು ಪಾಲಿಸಿ, ಸಾಧನೆಗೈದಾಗ ಯಶಸ್ಸು ಲಭಿಸುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ಪ್ರಾದೇಶಿಕ ಕಛೇರಿ, ಜಂಟಿ ನಿರ್ದೇಶಕರಾದ ಡಾ. ಕವಿತಾ ಕೆ ಆರ್ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಅವರು ಡಾ. ಪಿ. ದಯಾನಂದ ಪೈ- ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿನ ಮಹಿಳಾ ವೇದಿಕೆ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ೨೦೨೬”ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಳೆದ ಶೈಕ್ಷಣಿಕ ವರ್ಷದ ಅಂತಿಮ ಪರೀಕ್ಷೆಗಳಲ್ಲಿ ರ್ಯಾಂಕ್ ಪಡೆದ ಪ್ರಗತಿ, ಪ್ರಿಯಾ, ಅಪೂರ್ವ ಹಾಗೂ ಅಮೃತಾ ಜೆ ಸುವರ್ಣ ಮತ್ತು ಅಧ್ಯಾಪಕಿ ಶರ್ಮಿಳಾ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿನಿಯರಿಗಾಗಿ ಜನಪದ, ಸಮಕಾಲೀನ ನೃತ್ಯ, ಏಕಪಾತ್ರಾಭಿನಯ, ಫ್ಯಾಶನ್ ಶೋ, ಗಾಯನ ಮುಂತಾದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕೇಶವಿನ್ಯಾಸ ಸ್ಪರ್ಧೆ, ಸ್ಮರಣಶಕ್ತಿ ಸ್ಪರ್ಧೆ, ಮಂಡಲಚಿತ್ರ ರಚನೆ ಸ್ಪರ್ಧೆ ಹಾಗೂ ಮೋಜಿನ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ಅಧ್ಯಾಪಕಿಯರಾದ ಸುವರ್ಣ ಮಾಲಿನಿ, ಡಾ.ಕೃಷ್ಣಪ್ರಭ, ಡಾ.ಮಾಲತಿ, ಡಾ. ಜ್ಯೋತಿಪ್ರಿಯ, ಶುಭಾ ಕೆ ಹೆಚ್ ಇವರು ಕಾರ್ಯಕ್ರಮವನ್ನು ಸಂಘಟಿಸಿದ್ದರು. ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ., ಐಕ್ಯೂಎಸಿ ಸಂಯೋಜಕರಾದ ದೇವಿಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದುಗ್ಗಪ್ಪ ಕಜೆಕಾರ್ ಮತ್ತು ಕಾಲೇಜಿನ ಎಲ್ಲಾ ಮಹಿಳಾ ಅಧ್ಯಾಪಕರು, ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.




By
ForthFocus™