Home ಸುದ್ಧಿಗಳು ರಾಜ್ಯ ಪುತ್ತಿಗೆ ಶ್ರೀ ನಡೆದಾಡುವ ಭಗವದ್ಗೀತೆ: ಪೇಜಾವರ ಶ್ರೀ

ಪುತ್ತಿಗೆ ಶ್ರೀ ನಡೆದಾಡುವ ಭಗವದ್ಗೀತೆ: ಪೇಜಾವರ ಶ್ರೀ

421
0

ಬೆಂಗಳೂರು: ಪುತ್ತಿಗೆ ಶ್ರೀಪಾದರು ನಡೆದಾಡುವ ಭಗವದ್ಗೀತೆ. ಭಗವಂತನ ಸಂದೇಶವನ್ನು ವಿದೇಶದ ಭಕ್ತರಿಗೂ ಸಾರಿದವರು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಬಸವನಗುಡಿ ರಾಮಕೃಷ್ಣ ಆಶ್ರಮದ ಸಮೀಪದ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಶ್ರೀ ಪುತ್ತಿಗೆ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರ ಬೆಂಗಳೂರು ಅಭಿಮಾನಿಗಳು ಮತ್ತು ಶಿಷ್ಯವೃಂದದವರು ಆಯೋಜಿಸಿದ್ದ ‘ಗುರು ವಂದನೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಗಳದ್ದು ಮೇರು ವ್ಯಕ್ತಿತ್ವ. ಅವರ ಮುಂದೆ ನಾವೆಲ್ಲರೂ ಕುಬ್ಜರಾಗಿ ಕಾಣುತ್ತೇವೆ. ಸುಜ್ಞಾನೇಂದ್ರತೀರ್ಥ ಅನಂತರದಲ್ಲಿ ಮಠವನ್ನು ಸಮರ್ಥವಾಗಿ ನಿರ್ವಹಿಸಿದರು ಎಂದರು.

ಆದರ್ಶ ಗುರು ಶಿಷ್ಯರು: ಪುತ್ತಿಗೆ ಶ್ರೀ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುತ್ತಿಗೆ ಮಠಾಧೀಶರು, ಪೇಜಾವರ ಶ್ರೀ ವಿಶ್ವೇಶತೀರ್ಥರು ಹಾಗೂ ವಿಶ್ವಪ್ರಸನ್ನ ಶ್ರೀಪಾದರು ಆದರ್ಶ ಗುರು ಶಿಷ್ಯರು. ಮೊದಲ ಬಾರಿಗೆ ಪರ್ಯಾಯ ಪೀಠಾರೋಹಣ ಅವಕಾಶ ಸಿಕ್ಕಾಗ, ತಮ್ಮ ಗುರುಗಳ ಪಂಚಮ ಪರ್ಯಾಯ ಪೂರ್ಣ ಆಗಬೇಕು ಅನ್ನುವ ಅಭಿಲಾಷೆಯನ್ನು ಹೊಂದಿದ್ದರು. ಅದರಂತೆ ಅವರು ನಡೆದುಕೊಂಡರು. ಆ ಮೂಲಕ ಇಡೀ ಗುರು-ಶಿಷ್ಯ ಪರಂಪರೆಗೆ ಮಾದರಿಯಾಗಿದ್ದಾರೆ ಎಂದರು.

ಇನ್ಫೋಸಿಸ್ ಫೌಂಡೇಶ್‌ನ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ಹೊಸ ವಿಚಾರವನ್ನು ಅಳವಡಿಸಿಕೊಳ್ಳಲು ನಾವು ಕೆಲವೊಮ್ಮೆ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಬೇಕಾಗುತ್ತದೆ. ಅಂತಹ ಮಹತ್ವದ ಕೆಲಸಕ್ಕೆ ಪುತ್ತಿಗೆ ಶ್ರೀಪಾದರು ಕೈ ಹಾಕಿದ್ದಾರೆ. ಸನಾತನ ಧರ್ಮದಲ್ಲಿ ವಿದೇಶ ಪ್ರಯಾಣಕ್ಕೆ ನಿಷೇಧವಿದೆ. ಆದರೆ ಶ್ರೀಗಳು ಈ ಧಾರ್ಮಿಕ ಕಟ್ಟುಪಾಡುಗಳನ್ನು ಬದಿಗಿಟ್ಟು ಶ್ರೀಕೃಷ್ಣನ ಸಂದೇಶವನ್ನು ಜಗತ್ತಿನಾದ್ಯಂತ ಸಾರಿದವರು ಎಂದರು.

ಶ್ರೀಪಾದರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ ಸಂಪಾದನೆಯ ‘ಅರವತ್ತು’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಶಾಸಕ ಎಲ್. ರವಿ ಸುಬ್ರಹ್ಮಣ್ಯ, ವಿಧಾನ ಪರಿಷತ್ ಸದಸ್ಯ ವೆಂಕಟೇಶ್, ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ಶ್ರೀಪಾದರ ಬೆಂಗಳೂರು ಅಭಿಮಾನಿಗಳ ಸಂಘದ ಅಧ್ಯಕ್ಷ ಪ್ರೊ. ಕೆ. ಇ. ರಾಧಾಕೃಷ್ಣ ಉಪಸ್ಥಿತರಿದ್ದರು.

ಗೋಡಂಬಿ ಬಾದಾಮಿಗಳಿಂದ ಸಿದ್ಧಪಡಿಸಿದ್ದ ಪೇಟ ಶ್ರೀಪಾದರಿಗೆ ತೊಡಸಿದ ಪೇಜಾವರ ಶ್ರೀ
ವಿಶ್ವದಾದ್ಯಂತ ಶ್ರೀಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥಶ್ರೀಪಾದರ ಷಷ್ಟ್ಯಬ್ಧಪೂರ್ತಿ ಪರ್ವಕಾಲದ ನಿಮಿತ್ತವಾಗಿ ಬೆಂಗಳೂರಿನ ಭಕ್ತ ವೃಂದದವರು ಅತ್ಯಂತ ವೈಭವದಿಂದ ಅಭಿನಂದನೆಯನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಶ್ರೀ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಅಲಂಕರಿಸಿದ್ದ ಗೋಡಂಬಿ ಬಾದಾಮಿಗಳಿಂದ ಸಿದ್ಧಪಡಿಸಿದ್ದ ಪೇಟವನ್ನು ಪುತ್ತಿಗೆ ಶ್ರೀಪಾದರಿಗೆ ತೊಡಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.