Home ಅಂಕಣ ಗರಿಬಿಚ್ಚಿ ಕುಣಿಯುತ್ತಿರುವ ವಿಧಾನ ಪರಿಷತ್ ಚುನಾವಣೆ

ಗರಿಬಿಚ್ಚಿ ಕುಣಿಯುತ್ತಿರುವ ವಿಧಾನ ಪರಿಷತ್ ಚುನಾವಣೆ

404
0

ವಿಧಾನಸಭೆ ಚುನಾವಣೆ ಮುಗಿಯಿತು ಅನ್ನುವಾಗಲೇ ಲೇೂಕಸಭಾ ಚುನಾವಣೆ ಬಂದೇ ಬಿಟ್ಟಿತು. ಈ ಬಾರಿ ವಿಧಾನ ಪರಿಷತ್ ಚುನಾವಣೆ ತುಂಬಾ ಸಪ್ಪೆಯಾಗಬಹುದು ಅಂದುಕೊಂಡಿದ್ದೆ. ಆದರೆ ಈ ಎರಡು ಚುನಾವಣೆಗಳನ್ನು ಮೀರಿಸುವಷ್ಟು ರಾಜಕೀಯ ಸಂಚಲನ ಮೂಡಿಸುವಷ್ಟು ಕುತೂಹಲಕಾರಿ ವಾತಾವರಣ ಸೃಷ್ಟಿಸಿಯೇ ಬಿಟ್ಟಿದೆ. ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ. ಈ ಹಿಂದೆ ವಿಧಾನ ಪರಿಷತ್ ಚುನಾವಣೆ ನಡೆದದ್ದೇ ಗೊತ್ತಾಗುತ್ತಿರಲಿಲ್ಲ, ಅಷ್ಟರ ಮಟ್ಟಿಗೆ ರಾಜಕೀಯ ಗೌಪ್ಯತೆ ಕಾಪಾಡಿಗೊಂಡು ಬರುತ್ತಿತ್ತು. ಆದರೆ ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳನ್ನು ಬದಿಗೆ ಸರಿಸಿ ಸ್ವತಃ ಪದವೀಧರರು ಮತ್ತು ಶಿಕ್ಷಕರು ತಾವಾಗಿಯೇ ತಮ್ಮ ಅಭ್ಯರ್ಥಿಗಳ ಅರ್ಹತೆ ಯೇೂಗ್ಯತೆಗಳನ್ನು ಅಳೆದು ಮತ ಹಾಕಲು ಮುಂದಾಗಿ ನಿಂತಿರುವುದಂತು ಸತ್ಯ. ನಿಜಕ್ಕೂ ಹೇಳಬೇಕೆಂದರೆ ವಿಧಾ ನಪರಿಷತ್ ಚುನಾವಣೆಗಳು ನಡೆಯಬೇಕಾದದ್ದು ಹೀಗೆ?

ವಿಧಾನ ಪರಿಷತ್ ಅಂದರೆ ಅದೊಂದು ಹಿರಿಯರ ಸದನ ಚಿಂತಕರ ಚಾವಡಿ. ಪಕ್ಷ ರಾಜಕೀಯ ಮೀರಿ ಚುನಾವಣೆ ನಡೆಯಬೇಕಾದ ಸದನವದು. ಹಾಗಾಗಿಯೇ ಚುನಾವಣಾ ಬ್ಯಾಲೆಟ್ ಪೇಪರ್ ನಲ್ಲಿ ಅಭ್ಯರ್ಥಿಗಳ ಭಾವ ಚಿತ್ರ ಹೆಸರು ಬಿಟ್ಟರೆ ಪಕ್ಷಗಳ ಹೆಸರಾಗಲಿ ಚಿಹ್ನೆಗಳಾಗಲಿ ಇರುವುದೇ ಇಲ್ಲ. ಅಂದರೆ ಅಷ್ಟರಮಟ್ಟಿಗೆ ಪಕ್ಷ ರಾಜಕೀಯದಿಂದ ದೂರವಿರಬೇಕೆನ್ನುವುದು ಇದರ ಒಳಾರ್ಥ. ಈ ಬಾರಿ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರವಂತೂ ಪಕ್ಷ ರಾಜಕೀಯ ಮೀರಿ ನಡೆಯುವುದಂತು ಸತ್ಯ. ಅದು ಬಿಜೆಪಿ ಇರಬಹುದು ಕಾಂಗ್ರೆಸ್ ಇರಬಹುದು. ಈ ಎರಡು ಪಕ್ಷಗಳ ಹಿರಿಯ ನಾಯಕರುಗಳೇ ಪಕ್ಷ ಮೀರಿ ತಮ್ಮ ಸ್ವಂತ ಸಾಮರ್ಥ್ಯದಿಂದ ಗೆದ್ದು ಬಂದು ತಮ್ಮ ಪಕ್ಷ ನಿಷ್ಠೆಯನ್ನು ಪ್ರಕಟಿಸುತ್ತೇವೆ ಅನ್ನುವ ವಾಗ್ದಾನದೊಂದಿಗೆ ಚುನಾವಣಾ ಕಣಕ್ಕೆ ಧುಮುಕಿಯೇ ಬಿಟ್ಟಿದ್ದಾರೆ. ಇದನ್ನು ಬಂಡಾಯ ಅಭ್ಯರ್ಥಿ; ಪಕ್ಷ ವಿರೇೂಧಿ ಚಟುವಟಿಕೆ ಅನ್ನುವ ಹಾಗಿಲ್ಲ. ಯಾಕೆಂದರೆ ಇಲ್ಲಿ ಪಕ್ಷದ ಯಾವುದೇ ಚಿಹ್ನೆಯಾಗಲಿ ಹೆಸರಾಗಲಿ ಇಲ್ಲ. ಎಲ್ಲರೂ ಕೂಡಾ ತಮ್ಮ ತಮ್ಮ ಯೇೂಗ್ಯತೆಯನ್ನು ಪ್ರಬುದ್ಧ ಶಿಕ್ಷಿತ ಪದವೀಧರ ಮತದಾರರ ಎದುರು ಸಾಬೀತು ಪಡಿಸಬೇಕು. ಇಲ್ಲಿ ಪಕ್ಷ ಸಿದ್ಧಾಂತವಾಗಲಿ ನಾಯಕರುಗಳ ಮೇರು ಪ್ರತಿಭೆಗಳಾಗಲಿ ಮುಖ್ಯವಾಹಿನಿಗೆ ಬರುವುದೇ ಇಲ್ಲ, ಬರಬಾರದು. ಕೂಡ. ಪ್ರತಿಯೊಬ್ಬ ಮತದಾರರು ಕೇಳುವುದು ಇಷ್ಟೇ- ಗೆದ್ದು ಬಂದು ತಮ್ಮ ಕ್ಷೇತ್ರಕ್ಕೇನು ಮಾಡುತ್ತೀರಿ.?

ಹಾಗಾಗಿ ನನ್ನ ದೃಷ್ಟಿಯಲ್ಲಿ ಈ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷ ಮೀರಿ ಪ್ರತಿಯೊಬ್ಬರಿಗೂ ಸ್ಪರ್ಧಿಸಲು ಮುಕ್ತ ಅವಕಾಶ ನೀಡಿ ಗೆದ್ದು ಬನ್ನಿ ಅನಂತರೇ ನಿಮಗೆ ನಮ್ಮ ಪಕ್ಷದಲ್ಲಿ ಸ್ಥಾನಮಾನ ಅನ್ನುವ ಸ್ವಷ್ಟ ಸಂದೇಶವನ್ನು ನೀಡಬೇಕಿತ್ತು. ಈ ಬಾರಿ ಬಹುಚರ್ಚೆಗೆ ಬಂದಿರುವುದು ನೈರುತ್ಯ ಕ್ಷೇತ್ರ. ಅತೀ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ಶಿಕ್ಷಕರನ್ನು ಪದವೀಧರರನ್ನು ಹೊಂದಿರುವ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಯಾವುದೇ ಪ್ರಾತಿನಿಧ್ಯವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಸಿಗಲಿಲ್ಲ .ಹಾಗಾಗಿಯೇ ಆಯಾಯ ರಾಜಕೀಯ ಪಕ್ಷಗಳೊಳಗಿನ ಧುರೀಣರು ನಾವುಗಳೆ ಸ್ಪರ್ಧೆ ಮಾಡಿ ಈ ಎರಡು ಜಿಲ್ಲೆಗಳ ತಾಕತ್ತು ತೇೂರಿಸುತ್ತೇವೆ ಅನ್ನುವ ರೀತಿಯಲ್ಲಿ ಪಣತೊಟ್ಟು ನಿಂತಿದ್ದಾರೆ. ಈ ಬಾರಿ ಪದವೀಧರ ಮತ್ತು ಶಿಕ್ಷಕ ಮತದಾರರು ಕೂಡಾ ಇದೇ ರೀತಿಯಲ್ಲಿ ದೃಢ ಸಂಕಲ್ಪ ತೊಟ್ಟ ಹಾಗೆ ಕಾಣುತ್ತಿದೆ.

ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳು ಕೆಲವೊಂದು ಮಾನದಂಡವನ್ನುಅನುಸರಿಸಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಬಂದೇ ಬರುತ್ತದೆ. ಎಲ್ಲೋ ಕೂತು ಯಾವುದೋ ಒಬ್ಬ ಗುರುತು ಪರಿಚಯವಿಲ್ಲದ ಅಭ್ಯರ್ಥಿಯನ್ನು ಡಂಪ್ ಮಾಡುವ ಪರಿಪಾಠ ನಿಂತು ಹೋಗುತ್ತದೆ. ಇದು ಈ ಬಾರಿಯ ವಿಧಾನ ಪರಿಷತ್ ಚುನಾವಣೆ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ನೀಡುವ ಖಡಕ್ ಸಂದೇಶವಾಗುವ ಫಲಿತಾಂಶ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

 

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.