ಬೆಳಗಾವಿ, ಡಿ.19: ರೈತರು ಪೂರೈಸುವ ಕಬ್ಬು ತೂಕದಲ್ಲಿ ಮೋಸ ಮಾಡಿದ್ದು ಸಾಬೀತಾದಲ್ಲಿ ಅಂತಹ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ಹೇಳಿದ್ದಾರೆ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರು ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಸಚಿವರು ಮಾತನಾಡಿದರು.
ಕಬ್ಬು ಬೆಳೆಗಾರರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಒಟ್ಟು 81 ಸಕ್ಕರೆ ಕಾರ್ಖಾನೆಗಳಿದ್ದು, ಅಲ್ಲಿ ಡಿಜಿಟಲ್ ವೇ ಬ್ರಿಡ್ಜ್ಗಳಿವೆ. ಸರ್ಕಾರದಿಂದಲೇ ಈ ವರ್ಷ 12 ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರ ಅಳವಡಿಕೆಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ.
ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡುವ ಯಂತ್ರದಲ್ಲಿ ಮೋಸ ಆಗುತ್ತಿರುವ ಬಗ್ಗೆ ಯಾವುದೇ ರೈತರು ಇದುವರೆಗೂ ದೂರು ಸಲ್ಲಿಸಿಲ್ಲ. ರೈತರು ದೂರು ಸಲ್ಲಿಸಿ, ಬಳಿಕ ಇದು ಸಾಬೀತಾದಲ್ಲಿ ಅಂತಹ ರೈತರಿಗೆ 2 ಲಕ್ಷ ರೂ. ಬಹುಮಾನ ಕೊಡುತ್ತೇವೆ ಎಂದು ಸರ್ಕಾರ ಘೋಷಿಸಿತ್ತು. ಇದೀಗ ಈ ಬಹುಮಾನ ಮೊತ್ತವನ್ನು 5 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ. ಒಂದು ವೇಳೆ ತೂಕದಲ್ಲಿ ಮೋಸ ಮಾಡುವ ಯಾವುದೇ ದೂರು ಸಾಬೀತಾದಲ್ಲಿ, ಅಂತಹ ಕಾರ್ಖಾನೆಯವರು ಯಾರೇ ಆಗಿರಲಿ, ಎಷ್ಟೇ ದೊಡ್ಡವರಾಗಿರಲಿ, ನಿಶ್ಚಿತವಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಂತಹ ಕಾರ್ಖಾನೆ ನಿಲ್ಲಿಸುವ ಕ್ರಮಕ್ಕೂ ಮುಂದಾಗುತ್ತೇವೆ. ಕಾರ್ಖಾನೆಗಳ ಒಳಗೆ ನಾವು ಆಧುನಿಕ ತೂಕದ ಯಂತ್ರ ಅಳವಡಿಕೆಗೆ ಮುಂದಾಗಿದ್ದು, ಕಾರ್ಖಾನೆಯವರು ಅನುಮತಿ ನೀಡುತ್ತಿಲ್ಲ. ಇದರಿಂದ ಸಮಸ್ಯೆ ಉಂಟಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.




By
ForthFocus™