ಉಡುಪಿ, ಏ.2: ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯು ಇಂದು ನಗರದ ಮಿಷನ್ ಕಂಪೌಂಡ್ ಬಳಿಯ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು. ನಿವೃತ್ತ ಮಹಿಳಾ ಪೊಲೀಸ್ ನಿರೀಕ್ಷಕಿ ಸುಜಾತ ವಿ ಸಾಲಿಯಾನ್ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಧ್ವಜ ದಿನಾಚರಣೆಯು ಪೊಲೀಸ್ ಇಲಾಖೆಯ ಮಹತ್ವದ ದಿನವಾಗಿದೆ. ಕರ್ನಾಟಕ ಪೊಲೀಸ್ ಪಡೆಯು ಅಧಿಕೃತವಾಗಿ ರಚನೆಯಾದ ನೆನಪಿಗಾಗಿ ಈ ದಿನವನ್ನು ರಾಜ್ಯದ ಎಲ್ಲೆಡೆ ಆಚರಿಸಲಾಗುತ್ತಿದೆ. ಈ ಧ್ವಜವು ಶಿಸ್ತು, ಕರ್ತವ್ಯ ನಿಷ್ಠೆ, ಕಾನೂನು ಪಾಲನೆ ಹಾಗೂ ರಕ್ಷಣೆಯ ಸಂಕೇತವಾಗಿದೆ ಎಂದರು. ಪ್ರತೀ ವರ್ಷ ಪೊಲೀಸ್ ಧ್ವಜ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡುವುದರೊಂದಿಗೆ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿರುವ ಹೆಸರು ಕರ್ನಾಟಕ ಪೊಲೀಸರಿಗೆ ಇದೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿಯೂ ಉಡುಪಿ ಜಿಲ್ಲೆಯ ಪೊಲೀಸರು ಮೊದಲನೇ ಸ್ಥಾನದಲ್ಲಿ ಇದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು. ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆರೋಗ್ಯ ರಕ್ಷಣೆ ಯೋಜನೆಯನ್ನು ಪ್ರಾರಂಭಿಸಿದ್ದು, ಯೋಜನೆಯಡಿ ನಿವೃತ್ತ ಪೊಲೀಸ್ ಅಧಿಕಾರಿ / ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ 1.5 ಲಕ್ಷ ರೂ., ತುರ್ತು ಸಂದರ್ಭದಲ್ಲಿ 3 ಲಕ್ಷ ರೂ. ಮಂಜೂರು ಮಾಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 3 ಜನ ನಿವೃತ್ತ ಪೊಲೀಸ್ ಸಿಬ್ಬಂದಿಗಳು ಈ ಯೋಜನೆಯ ಪ್ರಯೋಜನ ಪಡೆದಿರುವುದಾಗಿ ತಿಳಿಸಿದರು. ಪ್ರತೀ ವರ್ಷ ಸುಮಾರು ರೂ. 13 ಲಕ್ಷ ಕ್ಕೂ ಅಧಿಕ ಮೊತ್ತ ಮಂಜೂರು ಆಗುತ್ತಿದ್ದು, ಇನ್ನೂ ಹೆಚ್ಚಿನ ಮೊತ್ತ ಮಂಜೂರಾತಿಗಾಗಿ ಅನುದಾನದ ಕೊರತೆ ಇದ್ದು, ಪ್ರಧಾನ ಕಛೇರಿಗೆ ರೂ. 15 ಲಕ್ಷಗಳ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿವೃತ್ತ ಕಲ್ಯಾಣ ಖಾತೆಯಿಂದ ಸುಮಾರು 13,08,050 ರೂ. ವೈದ್ಯಕೀಯ ಧನಸಹಾಯ ನೀಡಲಾಗಿದೆ. ಯಾವುದೇ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಹವಾಲುಗಳಿದ್ದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವೈದ್ಯಕೀಯ ಧನ ಸಹಾಯವನ್ನು ವಿತರಿಸಲಾಯಿತು.
ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು, ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಎಎಸ್ಪಿ ಸುಧಾಕರ್ ನಾಯಕ್ ವಂದಿಸಿದರು.




By
ForthFocus™