ಕೋಟ, ಮಾ.22: ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಯಕ್ಷಮಿತ್ರರು ನಡೆಸಿದ ಸನ್ಮಾನ ಅರ್ಥಪೂರ್ಣ ಎಂದು ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಹೇಳಿದರು. ಶನಿವಾರ ಸಾಸ್ತಾನದ ಪಾಂಡೇಶ್ವರ ಯಡಬೆಟ್ಟು ಯಕ್ಷಮಿತ್ರರು ಆಯೋಜಿಸಿದ ಪಂಚಮ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬರನ್ನು ಗೌರವಿಸಿ ಅವರು ಮಾತನಾಡಿದರು. ಅಕ್ಷರ ದೇಗುಲವನ್ನು ಕಟ್ಟಿ ಸಮಾಜಕ್ಕೆ ತನ್ನನ್ನು ಸಮರ್ಪಿಸಿಕೊಂಡ ಹಾಜಬ್ಬ ಎನ್ನುವ ನಿಸ್ವಾರ್ಥ ಸೇವಾರ್ಥಿ ತನ್ನ ಸರ್ವಸ್ವವನ್ನೂ ಈ ಸಮಾಜಕ್ಕೆ ಧಾರೆ ಎರೆದಿದ್ದಾರೆ. ಯಕ್ಷಮಿತ್ರರು ಇಂಥ ಸಾಧಕರನ್ನು ಗೌರವಿಸಿರುವುದು ಶ್ಲಾಘನೀಯ ಎಂದರು.
ಪಾಂಡೇಶ್ವರ ಕಳಿಬೈಲು ಶ್ರೀ ಕ್ಷೇತ್ರದ ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ, ಸಾಸ್ತಾನ ಗೋಳಿಗರಡಿ ದೈವಸ್ಥಾನದ ಪಾತ್ರಿ ಶಂಕರ್ ಪೂಜಾರಿ, ಯಕ್ಷ ಮಿತ್ರರ ಬಳಗದ ಕರಿಯ ದೇವಾಡಿಗ, ಅಣ್ಣಯ್ಯ ದೇವಾಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮೊದಲು ಸಾಸ್ತಾನ ಗೋಳಿಗರಡಿ ದೈವಸ್ಥಾನದಿಂದ ಅದ್ಧೂರಿಯ ಚಂಡೆ, ಕೀಲು ಕುದುರೆ, ಕುಣಿತ ಭಜನೆಯೊಂದಿಗೆ ಮೆರವಣಿಗೆ ಮೂಲಕ ದೇವರ ಪೆಟ್ಟಿಗೆಯನ್ನು ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ತರಲಾಯಿತು. ಶ್ರೀ ಆದು ಧೂಮಾವತಿ ಶ್ರೀದೇವಿ ಬೈದೇತಿ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆಯಕ್ಷಗಾನ ಪ್ರದರ್ಶನಗೊಂಡಿತು. ನಾಗೇಶ್ ಯಡಬೆಟ್ಟು ಸಹಕರಿಸಿದರು. ಶ್ರೀಷ ಪಾಂಡೇಶ್ವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.




By
ForthFocus™