ಉಡುಪಿ, ಫೆ.16: ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶಿವರಾತ್ರಿ ಪ್ರಯುಕ್ತ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಶಿವರಾತ್ರಿ ಜಾಗರಣೆಯಲ್ಲಿ ಶ್ರೀಪಾದರು ಎಳ್ಳು ಗಂಟು ದೀಪವನ್ನು ಉರಿಸಿ ಲೋಕಕ್ಕೆ ಬರುವ ಕಂಟಕಗಳು ನಾಶವಾಗಲಿ ಎಂದು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಅಶ್ವಥ್ ಭಾರದ್ವಾಜ್ ಇವರು ರಂಗೋಲಿ ಬಿಡಿಸುವಲ್ಲಿ ಸಹಕರಿಸಿದರು. ಹೆರ್ಗ ರವೀಂದ್ರ ಭಟ್ ಹಾಗೂ ಕಲ್ಯ ಅಶೋಕ ಆಚಾರ್ಯ ಶಿವರಾತ್ರಿಯ ಮಹಿಮೆ ಹಾಗೂ ಶಿವರಾತ್ರಿಯ ಆಚರಣೆಯ ಮಹತ್ವಗಳ ಬಗ್ಗೆ ಪ್ರವಚನ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷಿತಿಜ ಬೆಂಗಳೂರು ಹಾಗೂ ಬಳಗದವರಿಂದ ಯಕ್ಷಗಾನ ಭರತನಾಟ್ಯ ಡ್ಯುಯೆಟ್, ಮಧೂರು ಬಾಲಸುಬ್ರಮಣ್ಯಂ ಹಾಗೂ ಬಳಗದವರಿಂದ ಸಂಗೀತ ಕಾರ್ಯಕ್ರಮ, ಶ್ರೀಕಾಂತ್ ನಾಯಕ್ ಹಾಗೂ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಘ ಸಂಸ್ಥೆಗಳ ಸದಸ್ಯರಿಂದ ರುದ್ರ ಪಾರಾಯಣ ವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು.
ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ ಹಾಗೂ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷರಾದ ಸಂದೀಪ್ ಮಂಜ, ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷರಾದ ರಘುಪತಿ ರಾವ್ ಹಾಗೂ ಮಾಜಿ ಅಧ್ಯಕ್ಷರಾದ ವಿಷ್ಣು ಪಾಡಿಗಾರ್ ಹಾಗೂ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಸದಸ್ಯರು, ತುಶಿಮಾದ ಅಧ್ಯಕ್ಷರಾದ ಜಯರಾಮ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಶೀರೂರು ಮಠದ ವಿದ್ವಾಂಸರಾದ ಸುದರ್ಶನ್ ಆಚಾರ್ಯ ಹಾಗೂ ಸಗ್ರಿ ಆನಂದತೀರ್ಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.




By
ForthFocus™