ಉಡುಪಿ, ಜ.5: ವಿದ್ಯಾಪೋಷಕ್ ಪ್ರಥಮ ಪಿ.ಯು. ವಿದ್ಯಾರ್ಥಿನಿ, ಉಳ್ಳೂರಿನ ತೃಪ್ತಿಗೆ (ಲತಾ ಮತ್ತು ಕೃಷ್ಣ ಇವರ ಪುತ್ರಿ) ದೀಪಾ ಮತ್ತು ಅರುಣ ಕುಮಾರ್ ಇವರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ‘ಶ್ರೀ ಸಿದ್ಧಿವಿನಾಯಕ’ ಮನೆಯನ್ನು ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ದೀಪ ಬೆಳಗಿಸಿ ಉಧ್ಘಾಟಿಸಿದರು. ಶ್ರೀ ಸಿದ್ಧಿವಿನಾಯಕ ಕ್ಯಾಶ್ಯು ಇಂಡಸ್ಟ್ರೀಸ್ ಮಾಲಕ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ನಾನೇನು ದೊಡ್ಡ ಶ್ರೀಮಂತನಲ್ಲ. ಸಾಲದಲ್ಲೆ ಮನೆ ಕಟ್ಟಲು ಆರಂಭಿಸಿದ್ದು, ನನ್ನ ನೂತನ ಮನೆಯ ಪ್ರವೇಶಕ್ಕೂ ಮೊದಲು ಕಷ್ಟದಲ್ಲಿರುವವರಿಗೊಂದು ಸೂರು ನಿರ್ಮಿಸಿ ಕೊಡಬೇಕೆಂದು ಸಂಕಲ್ಪಿಸಿದ್ದೆ. ಅರ್ಹ ಫಲಾನುಭವಿಯನ್ನು ಆಯ್ದು ಆ ಅವಕಾಶ ಕಲ್ಪಿಸಿದ ಕಲಾರಂಗಕ್ಕೆ ಕೃತಜ್ಞನಾಗಿದ್ದೇನೆಂದು ಹೇಳಿದರು.
ಶಾಸಕ ಕಿರಣ ಕುಮಾರ್ ಕೊಡ್ಗಿಯವರು ಮಾತನಾಡಿ, ವಾಟ್ಸಪ್ ಸಂದೇಶವನ್ನು ಅಷ್ಟಾಗಿ ನೋಡದ ನಾನು ಸದಾ ರಚನಾತ್ಮಕ ಕೆಲಸದಲ್ಲೇ ನಿರತವಾಗಿರುವ ಕಲಾರಂಗದ ಗ್ರೂಪ್ ನಲ್ಲಿ ಬರುವ ಸುದ್ದಿಯನ್ನು ನೋಡುತ್ತೇನೆ. ಅದರಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವಿರುತ್ತದೆ ಎಂದರು. ವಿಠ್ಠಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕ ಕೊರ್ಗಿ ವಿಠ್ಠಲ ಶೆಟ್ಟಿಯವರು ಸತತ ಪರಿಶ್ರಮದಿಂದ ದೊಡ್ಡ ಸಾಧನೆ ಮಾಡಿದ ಅರಣ್ ಕುಮಾರರನ್ನು ಅಭಿನಂದಿಸಿದರು.
ತೆಕ್ಕಟ್ಟೆ ರೋಟರಿ ಅಧ್ಯಕ್ಷರಾದ ಮಲ್ಯಾಡಿ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ, ಸ್ನೇಹಿತ ಅರಣ್ ಕುಮಾರ್ ಕಲಾರಂಗದ ಕುರಿತು ಹೇಳಿದ್ದರು. ಸಂಸ್ಥೆಯ ಸಾಮಾಜಿಕ ಬದ್ಧತೆ, ಕಳಕಳಿ ಇಂದು ಪ್ರತ್ಯಕ್ಷ ಅನುಭವಾಯಿತು ಎಂದು ಸಂತಸ ವ್ಯಕ್ತಪಡಿಸಿದರು. ಪಂಚಾಯತ್ ಉಪಾಧ್ಯಕ್ಷೆ ಬೇಬಿ ವೇದಿಕೆಯಲ್ಲಿದ್ದರು.
ಅರುಣ ಕುಮಾರರ ಸ್ನೇಹಿತರು, ಪಂಚಾಯತ್ ಸದಸ್ಯರಾದ ರಾಮಚಂದ್ರ ಶೇರಿಗಾರ್, ಜಯಶ್ರೀ ಶೆಟ್ಟಿ ಹಾಗೂ ಯಕ್ಷಗಾನ ಕಲಾರಂಗದ ಎಸ್.ವಿ. ಭಟ್, ಕೆ. ಸದಾಶಿವ ರಾವ್, ಯು. ವಿಶ್ವನಾಥ ಶೆಣೈ, ಭುವನ ಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಸಂತೋಷ ಕುಮಾರ್ ಶೆಟ್ಟಿ, ಕಿಶೋರ್.ಸಿ. ಉದ್ಯಾವರ, ಗಣಪತಿ ಭಟ್, ಜಯರಾಮ ಪಡಿಯಾರ್, ಅಜಿತ್ ಕುಮಾರ್, ವಿಶ್ವನಾಥ, ವೈಷ್ಣವಿ, ಸನಕ ಕಡೆಕಾರ್ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.




By
ForthFocus™