ಉಡುಪಿ, ಅ.5: ಕಲಾವಿದರಿಗೆ ಸಮಾಜದ ಜನರ ಜತೆಗೆ ಆಧುನಿಕ ಕೃತಕ ಬುದ್ಧಿಮತ್ತೆ(ಎಐ) ಸವಾಲಿದ್ದು ಹೆತ್ತವರು ಮಕ್ಕಳಿಗೆ ಸಂತಸದ ಕಲಿಕೆಯ ವಾತಾವರಣ ರೂಪಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು. ಅವರು ಕುಂಜಿಬೆಟ್ಟು ಕಟ್ಟೆ ಆಚಾರ್ಯ ಮಾರ್ಗದಲ್ಲಿರುವ ಇನಾಯತ್ ಆರ್ಟ್ ಗ್ಯಾಲರಿಯಲ್ಲಿ ಅರೇಬಿಕ್ ಕ್ಯಾಲಿಗ್ರಫಿ ಕಲಾ ಪ್ರದರ್ಶನ ಮತ್ತು ಗಾಂಧಿ ಜಯಂತಿ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಸಂತಸದಿಂದ ಮಾಡಿದ ಕೆಲಸ ಯಾವತ್ತೂ ಭಾರವಾಗದು. ನೀರು, ಗೊಬ್ಬರ, ಬೆಳಕು, ಗಾಳಿಯಿಂದ ಬೀಜ ಮೊಳಕೆಯೊಡೆದು, ಹೆಮ್ಮರವಾಗಿ ಫಲ ನೀಡುವಂತೆ ಮಕ್ಕಳಲ್ಲಿರುವ ಕಲೆಯ ಪ್ರತಿಭೆ, ಸಾಮರ್ಥ್ಯ ಅಭಿವ್ಯಕ್ತಿಗೆ ಅವಕಾಶ, ಪೋಷಣೆ ಅಗತ್ಯ ಎಂದು ಹೇಳಿದರು.

ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ ಎಚ್.ಕೆ.ಗಂಗಾಧರ, ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೇಕ್ ವಾಹಿದ್ ದಾವೂದ್, ಉದ್ಯಮಿ ಯ.ವಿಶ್ವನಾಥ್ ಶೆಣೈ ಮಾತನಾಡಿದರು. ಡಾ ಕಿರಣ ಆಚಾರ್ಯ, ಕೃಷ್ಣಮೂರ್ತಿ ರಾವ್, ಬೆಂಗಳೂರಿನ ಮೊಹಮ್ಮದ್ ಸಹಿನ್, ಇಂದ್ರಾಳಿ ಮಸೀದಿಯ ಖಾಸ್ಮಿ ಮೌಲಾನಾ ಮಸಿಯುಲ್ಲಾ ಖಾನ್, ಇನಾಯತ್ ಆರ್ಟ್ ಗ್ಯಾಲರಿಯ ಲಿಯಾಕತ್ ಅಲಿ ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲ್ ಸ್ವಾಗತಿಸಿ, ವಂದಿಸಿದರು.




By
ForthFocus™