ಸಾಲಿಗ್ರಾಮ, ಆ.15: 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಾಲಿಗ್ರಾಮ ಕಯಾಕಿಂಗ್ ತಂಡ ವಿಭಿನ್ನವಾಗಿ ರಾಷ್ಟ್ರಪ್ರೇಮವನ್ನು ಮೆರೆಯುವ ಪ್ರಯತ್ನ ಮಾಡಿದೆ. ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ಪ್ರಕೃತಿ ವಿಸ್ಮಯಗಳನ್ನು ತೋರಿಸಿ ಜನರಲ್ಲಿ ಪ್ರಕೃತಿ ಪ್ರೇಮವನ್ನು ಬಿತ್ತುವ ಕೆಲಸ ಮಾಡುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡ ಈ ಬಾರಿಯೂ ವಿಭಿನ್ನ ಪ್ರಯತ್ನ ನಡೆಸುತ್ತಾ ಬಂದಿದೆ.
ಅಂದೊಮ್ಮೆ ಸೀತಾ ನದಿಯ ಮಧ್ಯದಲ್ಲಿ ಕಯಾಕಿಂಗ್ ಮೂಲಕ ತೆರಳಿ ಅಲ್ಲಿ ಧ್ವಜಸ್ತಂಭ ನೆಟ್ಟು ಧ್ವಜಾರೋಹಣ ನಡೆಸಿದ ತಂಡ, ಮುಂದೆ ನದಿಯ ಮಧ್ಯದಲ್ಲಿ ಕಾಂಡ್ಲಾ ಮರದ ನಡುವೆ ಕಾಂಡ್ಲಾ ನದಿಗೆ ಸೇತುವೆ ರಚಿಸಿ ಧ್ವಜಾರೋಹಣ ಮಾಡಿ ಅನ್ನವಿತ್ತ ಪ್ರಕೃತಿಯಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸುವ ಪ್ರಯತ್ನ ಮಾಡಿತ್ತು.
ಈ ಬಾರಿ ಹೊಸತನ ಎಂಬಂತೆ ಬದುಕ ಕೊಟ್ಟ ನಾಡ ಮಣ್ಣಲಿ, ಬಂಧಗಳ ಸೇತುವೆ ಕಟ್ಟಿ, ದೇಶಭಕ್ತಿಯ ನೂಲ ಬಿಗಿದು, ನಾಡ ಹೆಮ್ಮೆ ಮೇಲೇಳುವಂತೆ, ನೀರ ಆರ್ಭಟಕೆ ಸುಂದರವಾದ ಮರದ ಸೇತುವೆಯೊಂದನ್ನು ಕಟ್ಟಿ ಅದರಲ್ಲಿ ಧ್ವಜವನ್ನು ಮೇಲೇರಿಸಿ ಹೊಸ ರೀತಿಯ ಆಚರಣೆಯನ್ನು ಮೆರೆದಿದೆ.
ಪ್ರತೀ ಬಾರಿಯೂ ನವೀನ ಆಲೋಚನೆಗಳ ಮೂಲಕ ಕಾರ್ಯನಿರ್ವಹಿಸಿ ಸಮಾಜಕ್ಕೆ ಮಾದರಿಯಾಗಿ ಪ್ರಕೃತಿ ಮಡಿಲಲ್ಲಿ ಭಾರತಾಂಬೆಯನ್ನು ನಿಲ್ಲಿಸಿ ಜನರಿಗೆ ಪ್ರಕ್ರತಿ ಪ್ರೇಮದ ಜೊತೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಲು ಸಂದೇಶ ನೀಡುತ್ತಿದೆ. ಸಾಲಿಗ್ರಾಮ ಕಯಾಕಿಂಗ್ ನ ಮುಖ್ಯಸ್ಥರಾದ ಮಿಥುನ್ ಕುಮಾರ್ ಮೆಂಡನ್ ಮತ್ತು ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.




By
ForthFocus™