ಬಾರಕೂರು, ಜೂ.9: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರು ಇಲ್ಲಿಯ ಎನ್.ಸಿ.ಸಿ., ರೇಂಜರ್ಸ್ ರೋವರ್ಸ್, ಯೂತ್ ರೆಡ್ ಕ್ರಾಸ್ ಮತ್ತು ಐಕ್ಯೂಎಸಿ ವತಿಯಿಂದ ಪರಿಸರ ದಿನಾಚರಣೆ ಗುರುವಾರ ನಡೆಯಿತು. ಕಾಲೇಜು ವಠಾರದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ಕೆ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಗೋಪಾಲ ನಾಯ್ಕ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಯುವಜನರು ಪರಿಸರ ಸ್ನೇಹಿ ಜೀವವನ್ನು ಮೈಗೂಡಿಸಿಕೊಂಡು ಪರಿಸರ ರಕ್ಷಣೆಗೆ ಕ್ರಿಯಾಶೀಲ ಪ್ರಯತ್ನಗಳನ್ನು ಮಾಡಿದರೆ ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ. ಭಾಸ್ಕರ ಶೆಟ್ಟಿ ಸಳ್ವಾಡಿ, ಎಷ್ಟು ಸಾವಿರ ಸಸಿಗಳನ್ನು ವಿತರಿಸಲಾಗಿದೆ ಎಂಬುದು ಮುಖ್ಯವಲ್ಲ ಬದಲಾಗಿ ನೆಟ್ಟಿರುವ ಎಷ್ಟು ಸಸಿಗಳನ್ನು ಹೆಮ್ಮರವಾಗಿ ಬೆಳೆಸಲು ಪೂರಕವಾಗಿ ಕಾರ್ಯನಿರ್ವಹಿಸುವುದು ಮುಖ್ಯ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕೊಡುಗೆಗಳನ್ನು ನೀಡಿದರೆ ಬದಲಾವಣೆ ಸಾಧ್ಯ ಎಂದರು.
ಎನ್.ಸಿ.ಸಿ. ಸಂಯೋಜಕ ಲಕ್ಷಿತ್ ಪೂಜಾರಿ, ದೈಹಿಕ ಶಿಕ್ಷಣ ನಿರ್ದೇಶಕಿ ಸುಮತಿ, ಎನ್.ಸಿ.ಸಿ., ರೇಂಜರ್ಸ್ ರೋವರ್ಸ್ ಮತ್ತು ಯೂತ್ ರೆಡ್ ಕ್ರಾಸ್ ಘಟಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




By
ForthFocus™