ಕೋಟ, ಏ.13: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಳನ ಕಲ್ಲು ಇಲ್ಲಿ ನಿವೃತ್ತರಾದ ಗಂಗಮ್ಮ ಎಸ್ ಶೆಟ್ಟಿ ಮತ್ತು ಕೊಳನಕಲ್ಲು ಶಾಲೆಯಲ್ಲಿ ಸೇವೆ ಸಲ್ಲಿಸಿ ಬೇರೆ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಮತ್ತು ನಿವೃತ್ತರಾದ ಶಿಕ್ಷಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದ, ಶಿಕ್ಷಣ ಪ್ರೇಮಿ, ಶಾಲೆಯ ವಿದ್ಯಾರ್ಥಿಗಳಿಗೆ 13 ವರ್ಷಗಳಿಂದ ಕಲಿಕೋಪಕರಣವನ್ನು ನೀಡುತ್ತಾ ಬಂದಿರುವ ಹೈದರಾಬಾದ್ ಹೊಟೇಲ್ ಉದ್ಯಮಿ ಚಂದ್ರಶೇಖರ್ ಶೆಟ್ಟಿ ಅವರು ಕನ್ನಡ ಮಾಧ್ಯಮ ಶಾಲೆಗಳು ಗ್ರಾಮೀಣ ಪ್ರದೇಶದ ಅಸ್ಮಿತೆಯ ಸಂಕೇತ. ಈ ಶಾಲೆಗಳು ಉಳಿದರೆ ಹಳ್ಳಿಗಳಲ್ಲಿ ಕಲೆ ಸಾಂಸ್ಕೃತಿಕ ವಾತಾವರಣ ರೂಪಗೊಳ್ಳುತ್ತದೆ. ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಗ್ರಾಮೀಣ ಪ್ರದೇಶದ ಈ ಶಾಲೆಗಳು ಸಹಕಾರಿಯಾಗಿದೆ. ದಾನಿಗಳೆಲ್ಲರೂ ತನ್ನೂರಿನ ಶಾಲೆಗಳ ಉಳಿವಿಕೆಗೆ ಉದಾರದೇಣಿಗೆಯನ್ನು ನೀಡಬೇಕು, ಆ ಮೂಲಕ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಪ್ರವರ್ಧಮಾನಕ್ಕೆ ಬರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿಎಂಸಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆದ್ಲಾಯ ವಹಿಸಿದ್ದರು.
ಸಮಾರಂಭದಲ್ಲಿ ಸೇವಾ ನಿವೃತ್ತರಾದ ಗಂಗಮ್ಮ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸೇವೆ ಸಲ್ಲಿಸಿದ ಶಿಕ್ಷಕರನ್ನು ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ, ಹಿರಿಯ ನಿವೃತ್ತ ಮುಖ್ಯ ಶಿಕ್ಷಕರಾದ ಸುಬ್ಬಣ್ಣ ಶೆಟ್ಟಿ, ರಘುರಾಮಶೆಟ್ಟಿ ದೊಡ್ಮನೆ, ಕೆಪಿಎಸ್ ಬಿದ್ಕಲ್ಕಟ್ಟೆಯ ಉಪ ಪ್ರಾಂಶುಪಾಲರಾದ ಕರುಣಾಕರ್ ಶೆಟ್ಟಿ, ಹಾಲಾಡಿ ವೃತ್ತದ ಶಿಕ್ಷಣ ಸಂಯೋಜಕರಾದ ಶೇಖರ್ ಯು., ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಕನ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಹೇಶ್ ಮೊಗವೀರ ಉಪಸ್ಥಿತರಿದ್ದರು.
ಹಿರಿಯ ನಿವೃತ್ತ ಮುಖ್ಯ ಶಿಕ್ಷಕರಾದ ಸೂರಪ್ಪ ಹೆಗಡೆಯವರು ಸ್ವಾಗತಿಸಿ, ಪ್ರದೀಪಚಂದ್ರ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ವಂಡ್ಸೆ ಹೋಬಳಿಯ ಸಮೂಹ ಸಂಪನ್ಮೂಲ ವ್ಯಕ್ತಿ ನಾಗಾರಾಜ ಶೆಟ್ಟಿ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸ್ವಪ್ನ ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.




By
ForthFocus™