ಬಾರಕೂರು, ಮಾ. 19: ಬಾರಕೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಏನ್.ಎಸ್.ಎಸ್, ರೆಡ್ ರಿಬ್ಬನ್ ಕ್ಲಬ್, ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ಏಡ್ಸ್ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ. ಭಾಸ್ಕರ ಶೆಟ್ಟಿ ಸಲ್ವಾಡಿ ಅವರು, ಏಡ್ಸ್ ಬಗ್ಗೆ ಅರಿವು ಮೂಡಿಸುವುದರ ಮೂಲಕ ತಡೆಗಟ್ಟುವುದರಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದುದು. ಏಡ್ಸ್ ಸಂತ್ರಸ್ತರನ್ನು ಗೌರವಪೂರ್ಣವಾಗಿ ನೋಡಿಕೊಂಡು ಅವರ ಬದುಕುವ ಹಕ್ಕನ್ನು ಕಾಪಾಡುವುದು ನಮ್ಮ ಉದ್ದೇಶವಾಗಿರಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಉಡುಪಿ ಜಿಲ್ಲಾ ಮೇಲ್ವಿಚಾರಕರಾದ ಮಹಾಬಲೇಶ್ವರ್ ಬಿ ಅವರು, ಏಡ್ಸ್ ಪಿಡುಗಿನ ಹಿನ್ನಲೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಯುವ ಸಮುದಾಯ ಈ ಪಿಡುಗಿಗೆ ಗುರಿಯಾಗುವ ಸಾಧ್ಯತೆಗಳು ಮತ್ತು ಏಡ್ಸ್ ಬಗ್ಗೆ ವಹಿಸಬೇಕಾದ ಜಾಗ್ರತಿ ಬಗ್ಗೆ ಮನವರಿಕೆ ಮಾಡಿದರು. ರಕ್ತದಾನ ಮಾಡಲು ಮುಂದಾಗುವ ಮೊದಲು ನೀವು ಒಳ್ಳೆಯ ದೈಹಿಕ ಸದೃಢತೆಯ ಜೊತೆಗೆ ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎಂದು ಹೇಳಿದರು. ದ್ವಿತೀಯ ಬಿ.ಸಿ.ಎ. ವಿದ್ಯಾರ್ಥಿನಿ ರಕ್ಷಿತಾ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಧಾಕೃಷ್ಣನಾಯಕ್ ವಂದಿಸಿದರು. ಬಿ.ಕಾಂ ವಿದ್ಯಾರ್ಥಿನಿ ಚೈತ್ರ ಕಾರ್ಯಕ್ರಮ ನಿರೂಪಿಸಿದರು.




By
ForthFocus™