ಸಾಲಿಗ್ರಾಮ, ಫೆ.23: ಸಂಘಟನೆಗಳ ನಿರಂತರ ಸಾಮಾಜಿಕ ಕಾರ್ಯ ಅಸಾಮಾನ್ಯವಾದದ್ದು. ಈ ನಿಟ್ಟಿನಲ್ಲಿ ಗೆಳೆಯರ ಬಳಗ ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮನೆಮನಗಳನ್ನು ತಲುಪಿದೆ. ಇದು ಅತ್ಯಂತ ಪ್ರಶಂಸನೀಯ ಎಂದು ಮುಂಬೈ ಓಎನ್ಜಿಸಿ ಚೀಫ್ ನಿವೃತ್ತ ಜನರಲ್ ಮ್ಯಾನೇಜರ್ ಬನ್ನಾಡಿ ನಾರಾಯಣ ಆಚಾರ್ ಹೇಳಿದರು ಶನಿವಾರ ಕಾರ್ಕಡ ಶಾಲಾ ವಠಾರದಲ್ಲಿ ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಇದರ 37 ನೇ ವಾರ್ಷಿಕೋತ್ಸವ, ಸನ್ಮಾನ, ದತ್ತಿನಿಧಿ ವಿತರಣೆ, ಪ್ರತಿಭಾ ಪುರಸ್ಕಾರ, ಅಶಕ್ತರ ಮತ್ತು ವಿಕಲಚೇತನರ ಸಹಾಯನಿಧಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಕ್ಷಗುರು ಕೃಷ್ಣಮೂರ್ತಿ ಉರಾಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ ಜಯರಾಮ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಮಂಡಳಿಯ ಸದಸ್ಯ ಗಣೇಶ್ ನೆಲ್ಲಿಬೆಟ್ಟು, ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕರಾದ ವಸಂತಿ ಅಚ್ಯುತ್ ಪೂಜಾರಿ, ಚಂದ್ರಪೂಜಾರಿ. ಪಿ. ಇವರುಗಳನ್ನು ಅಭಿನಂದಿಸಲಾಯಿತು. ಶೈಕ್ಷಣಿಕ ಸಾಧಕಿ ಶರ್ಮದಾ, ಶೌರ್ಯ ಪ್ರಶಸ್ತಿ ಪುರಸ್ಕೃತ ಧೀರಜ್ ಐತಾಳ್, ಕರಾಟೆಯ ಸಾಧಕಿ ಸಂಹಿತ ಆಚಾರ್ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೆಳೆಯರ ಬಳಗದ ಸ್ಥಾಪಕ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಇವರಿಗೆ ಬಳಗದ ವತಿಯಿಂದ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಅಶಕ್ತರಿಗೆ ಸಹಾಯ, ದತ್ತಿನಿಧಿ ವಿತರಣೆ ಜರಗಿತು.
ಮುಖ್ಯ ಅಭ್ಯಾಗತರಾಗಿ ಎಂ.ಜಿ.ಎಮ್ ಕಾಲೇಜು ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ, ಬಿಎಸ್ ಎನ್ ಎಲ್ ನಿವೃತ್ತ ಡಿಜಿಎಂ ಕೆ.ಜಿ. ಸೂರ್ಯನಾರಾಯಣ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ವಿವೇಕ ಹಿಂದಿನ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ಸುಧಾಕರ. ಪಿ., ನಿವೃತ್ತ ಅಂಚೆ ಪಾಲಕ ಪಾರಂಪಳ್ಳಿ ಸದಾಶಿವ ಮಧ್ಯಸ್ಥ, ನ್ಯೂ ಕಾರ್ಕಡ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಉಪಸ್ಥಿತರಿದ್ದರು.
ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ಶಶಿಧರ ಮಯ್ಯ ನಿರೂಪಿಸಿದರು. ಕಾರ್ಯದರ್ಶಿ ಶೀನ ಕೆ ವರದಿ ವಾಚಿಸಿದರು. ಬಳಗದ ಸದಸ್ಯರಾದ ನಾಗರಾಜ್ ಉಪಾಧ್ಯಾ, ಶೇಖರ್, ಕೆ. ಶ್ರೀಕಾಂತ್ ಐತಾಳ, ಸನ್ಮಾನ ಪತ್ರ ವಾಚಿಸಿದರು. ಸ್ಥಳೀಯ ಪ್ರತಿಭೆಗಳಿಂದ ಗಾನ ಮತ್ತು ನೃತ್ಯ ವೈವಿಧ್ಯ ಹಾಗೂ ಕಲಾ ಸ್ಪೂರ್ತಿ ಹವ್ಯಾಸಿ ತಂಡದವರ ಮದಿ ಮನಿ ನಾಟಕ ಜನಮನ ರಂಜಿಸಿತು. ಕೆ. ಚಂದ್ರಕಾಂತ ನಾಯರಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.