Home ಸುದ್ಧಿಗಳು ಪ್ರಾದೇಶಿಕ ಅದ್ಧೂರಿಯ 29 ನೇ ಆಳ್ವಾಸ್ ವಿರಾಸತ್‌ಗೆ ತೆರೆ

ಅದ್ಧೂರಿಯ 29 ನೇ ಆಳ್ವಾಸ್ ವಿರಾಸತ್‌ಗೆ ತೆರೆ

210
0

ವಿದ್ಯಾಗಿರಿ(ಮೂಡುಬಿದಿರೆ), ಡಿ.18: ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ, ವೇದಘೋಷಗಳ ನಿನಾದ, ಭಜನೆಗಳು, ಪುಷ್ಪ ಪಲ್ಲಕ್ಕಿಗಳು, ಪ್ರೇಕ್ಷಕರ ಜಯಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥ ಎಡದಿಂದ ಬಲಕ್ಕೆ ಸಂಚರಿಸಿ ಸ್ವಸ್ಥಾನಕ್ಕೆ ಮರಳಿ, ಧ್ವಜ ಅವರೋಹಣದೊಂದಿಗೆ ನಾಲ್ಕು ದಿನಗಳ ಕಾಲ ನಡೆದ ವೈಭವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 29ನೇ ವಿರಾಸತ್ ಗೆ ಭಾನುವಾರ ರಾತ್ರಿ ತೆರೆಬಿತ್ತು. ಲೋಕ ಮಾರ್ಗದರ್ಶಕರಾದ ರಾಮ-ಕೃಷ್ಣರ ಮೂರ್ತಿ ಪ್ರತಿಷ್ಠಾಪಿಸಿದ ಸಾಂಸ್ಕೃತಿಕ ರಥವನ್ನು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಎಡದಿಂದ ಬಲಕ್ಕೆ ಎಳೆಯಲಾಯಿತು. ಇದಕ್ಕೂ ಮೊದಲು ಕಿರು ರಥದಲ್ಲಿ ಗಣಪತಿ, ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾಸರಸ್ವತಿ ಮೂರ್ತಿಗಳನ್ನು ಕರೆ ತರಲಾಯಿತು.

ರಥಯಾತ್ರೆಯಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. 15 ಅರ್ಚಕರು ಮಂತ್ರ ಘೋಷ ಮಾಡಿದರು. ತಟ್ಟಿರಾಯ, ಅಪ್ಸರೆಯರು, ಕಳಶ ಹಿಡಿದ ಯುವತಿಯರು, ಹುಲಿರಾಯ, ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಬಿರುದಾವಳಿ, ಚಾಮರಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು. ಹರಿದ್ವಾರದಿಂದ ಬಂದ ವಿಪುಲ್ ಶರ್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿದಾಗ ಶ್ರದ್ಧೆ ಭಕ್ತಿಯ ಪ್ರಜ್ವಲನವಾಯಿತು. ಭಕ್ತರು ಜಯಕಾರ ಹಾಕಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಗಣ್ಯರು
ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಕಲಾಸಕ್ತರು ನಮಿಸಿ, ಭವ್ಯ ನೆನಪಿನ ಬುತ್ತಿಯೊಂದಿಗೆ ಹೆಜ್ಜೆ ಹಾಕಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.