ಮಲ್ಪೆ, ಡಿ.30: ಕುವೆಂಪು ನಿಸರ್ಗದಲ್ಲಿ ದೇವರನ್ನು ಸ್ವರ್ಗವನ್ನು ಕಂಡವರು. ಲೌಕಿಕ ಬದುಕಿನ ಅನುಭವದೊಳಗೆ ಅಧ್ಯಾತ್ಮವನ್ನು ಕಂಡವರು. ಜಾತೀಯತೆ, ಧಾರ್ಮಿಕ ಆಂಧಶ್ರದ್ದೆ, ಜಾಗತಿಕ ಮಹಾಯುದ್ದದ ಕಾಲಘಟ್ಟದಲ್ಲಿ ಬದುಕಿದ ರಸಋಷಿ ಪ್ರಸ್ತುತ ಕಾಲಕ್ಕೆ ಅನ್ವಯಿಸುವ ವಿಶ್ವಮಾನವ ಸಂದೇಶವನ್ನು ಜಾಗತಿಕವಾಗಿ ಬಿತ್ತರಿಸಿದವರು. ಜಗತ್ತು ಒಂದೇ ಎನ್ನವುದು ಆರ್ಥಿಕತೆಯ, ಅನ್ನದ ಪರಿಭಾಷೆಯಾದರೆ, ಕುವೆಂಪುರವರು ಕಟ್ಟಿದ ವಿಶ್ವಮಾನವ ಪರಿಕಲ್ಪನೆ ಭಾವನಾತ್ಮಕವಾಗಿದ್ದು, ಸರ್ವಕಾಲಕ್ಕೂ ಪ್ರಸ್ತುತ. ಕುವೆಂಪು ಸಾಹಿತ್ಯವನ್ನು ಓದಿದರೆ ಸಾಲದು ಅದು ನಮ್ಮ ಭಾವ ಮತ್ತು ಬದುಕಿನಲ್ಲಿ ಸ್ಥಿರವಾಗಿ ನಿಲ್ಲಬೇಕು ಎಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಯೋಗೀಶ್ ಕೈರೋಡಿ ಅಭಿಪ್ರಾಯಪಟ್ಟರು.
ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಕನ್ನಡ ವಿಭಾಗದ ಆಶ್ರಯಲ್ಲಿ ಹಾಗೂ ಐಕ್ಯೂಎಸಿ ಘಟಕದ ಸಹಯೋಗದೊಂದಿಗೆ ರಸಋಷಿ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಸುಶ್ಮಿತಾ ಶೆಟ್ಟಿ, ಕೃಷ್ಣ ಜಿ ಜಿ., ಪ್ರವೀಣ ಇವರು ಕುವೆಂಪು ರವರ ಕುರಿತು ಮಾತನಾಡಿದರು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ ಗಾಂವಕರ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರತ್ನಮಾಲಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಾನಿ ಮತ್ತು ಬಳಗ ಪ್ರಾರ್ಥಿಸಿದರು. ಸುಶ್ಮಿತಾ ಶೆಟ್ಟಿ ವಂದಿಸಿದರು. ಭಾರತಿ ಕಾರ್ಯಕ್ರಮ ನಿರೂಪಿಸಿದರು. ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸಂದೇಶ್ ಎಂ.ವಿ., ದತ್ತ ಕುಮಾರ್, ಉಪನ್ಯಾಸಕರಾದ ಅರ್ಚನಾ, ಭವ್ಯ, ಶಾಲಿನಿ, ರಾಜೇಂದ್ರ, ಡಾ.ಮಹೇಶ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




By
ForthFocus™