Home ಅಂಕಣ ಕಲೆಯನ್ನು ಆರಾಧಿಸಿ ಜನಮನ ಗೆದ್ದಿರುವ ಸ್ಯಾಕ್ಸೋಫೋನ್ ವಾದಕಿ ವೈಷ್ಣವಿ ಭಟ್

ಕಲೆಯನ್ನು ಆರಾಧಿಸಿ ಜನಮನ ಗೆದ್ದಿರುವ ಸ್ಯಾಕ್ಸೋಫೋನ್ ವಾದಕಿ ವೈಷ್ಣವಿ ಭಟ್

ಉಡುಪಿ ಬುಲೆಟಿನ್ ಸಾಧಕರ ಪ್ರಪಂಚ

970
0

ರಾವಳಿ ಮಾತ್ರವಲ್ಲದೇ ರಾಜ್ಯಾದ್ಯಂತ ತನ್ನ ಸೃಜನಶೀಲವಾದ ಸ್ಯಾಕ್ಸೋಫೋನ್ ವಾದನೆಯ ಮೂಲಕ ವೈಷ್ಣವಿ ಭಟ್ ಜನಮನ ಗೆದ್ದಿದ್ದಾರೆ. ಮಂಗಳೂರಿನ ರಥಬೀದಿಯ ನಿವಾಸಿ ಮುಲ್ಕಿ ವರದರಾಜ ಭಟ್, ಎಂ. ವಿಜಯಶ್ರೀ ಭಟ್ ದಂಪತಿ ಪುತ್ರಿ ವೈಷ್ಣವಿ ಭಟ್ ಅವರ ವಿಶೇಷ ಸಂದರ್ಶನದ ಸಂಪೂರ್ಣ ವಿವರ ಈ ತಿಂಗಳ ಉಡುಪಿ ಬುಲೆಟಿನ್ ಸಾಧಕರ ಪ್ರಪಂಚದಲ್ಲಿ..

ಪ್ರ: ಸ್ಯಾಕ್ಸೋಫೋನ್ ಬಗ್ಗೆ ಆಸಕ್ತಿ ಹೇಗೆ ಹುಟ್ಟಿತು?
ಉ: ಬಾಲ್ಯದಿಂದಲೇ ಮದುವೆ ಮತ್ತು ಇತರೆ ಸಮಾರಂಭಗಳಲ್ಲಿ ನಡೆಯುತ್ತಿದ್ದ ಸ್ಯಾಕ್ಸೋಫೋನ್ ನ ಇಂಪಾದ ಧ್ವನಿಯತ್ತ ನಾನು ಆಕರ್ಷಿತಳಾಗಿದ್ದೆ. ಅದು ಸ್ಯಾಕ್ಸೋಫೋನ್ ಎಂದು ಗೊತ್ತಿರಲಿಲ್ಲ. ಬಾಲ್ಯದಿಂದಲೇ ಆ ಸಂಗೀತ ಉಪಕರಣದ ಬಗ್ಗೆ ಕುತೂಹಲ ಮತ್ತು ಅದರ ಬಗ್ಗೆ ಅರಿಯುವ ಆಸಕ್ತಿ ಬೆಳೆಯಿತು.

ಸ್ಯಾಕ್ಸೋಫೋನ್ ವಾದನ ಕಠಿಣ ಎಂದು ಆಗ ಗೊತ್ತಾಯಿತು, ಆದರೂ ಅದನ್ನು ಹೇಗೆ ಬಳಸುತ್ತಾರೆ ಎಂಬ ಪ್ರಶ್ನೆ ಕಾಡುತ್ತಿತ್ತು. ದಿ. ವಿದ್ವಾನ್ ಅನಂತರಾಮ್ ಅವರು ನಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದರಿಂದ ನಮ್ಮ ಕೌಟುಂಬಿಕ ಕಾರ್ಯಕ್ರಮಗಳಿಗೆ ಸ್ಯಾಕ್ಸೋಫೋನ್ ವಾದನಕ್ಕೆ ಅವರನ್ನು ಆಮಂತ್ರಿಸಲಾಗುತ್ತಿತ್ತು. ದಿ. ವಿದ್ವಾನ್ ಅನಂತರಾಮ್ ಅವರ ಪುತ್ರ ಹರೀಶ್ ಅವರಿಂದ ಸ್ಯಾಕ್ಸೋಫೋನ್ ವಾದನವನ್ನು 2015 ರಲ್ಲಿ ಕಲಿಯುವ ಭಾಗ್ಯವನ್ನು ನನ್ನ ಅಜ್ಜ ಕಲ್ಪಿಸಿದ್ದರು. ಸ್ಯಾಕ್ಸೋಫೋನ್ ಕಲಿಯಲು ತಯಾರಿದ್ದೀಯಾ ಎಂದು ನನ್ನ ಅಜ್ಜ ಹೇಳಿದ ತಕ್ಷಣ ನಾನು ಒಪ್ಪಿಗೆಯನ್ನು ಸೂಚಿಸಿದೆ. ಮರುದಿನವೇ ಸ್ಯಾಕ್ಸೋಫೋನ್ ಕಲಿಯಲು ಆರಂಭಿಸಿದೆ. ಹೀಗೆ ಸ್ಯಾಕ್ಸೋಫೋನ್ ಲೋಕಕ್ಕೆ ನನ್ನ ಪಾದಾರ್ಪಣೆ ಆಯ್ತು.

ಪ್ರ: ಸ್ಯಾಕ್ಸೋಫೋನ್ ಕಲಿಯಲು ಮನೆಯಲ್ಲಿ ಪ್ರೋತ್ಸಾಹ ಹೇಗಿತ್ತು?
ಉ: ಕಲಾ ಆರಾಧನೆಗೆ ಮನೆಯಲ್ಲಿ ನನಗೆ ವಿಶೇಷವಾದ ಪ್ರೋತ್ಸಾಹ ಸಿಕ್ಕಿದೆ. ನಾನು ಮೂರು ವರ್ಷದವಳಾಗಿದ್ದಾಗ ನನ್ನ ತಾಯಿ ನನಗೆ ಭರತನಾಟ್ಯ ತರಗತಿಗೆ ಕಳುಹಿಸಿದ್ದಳು. ನನ್ನ ಕಲಾಸಕ್ತಿಗೆ ಅವರು ಹೆಚ್ಚಿನ ಆದ್ಯತೆಯನ್ನು ನೀಡಿರುವುದು ನನ್ನ ಕಲಾ ಆರಾಧನೆಗೆ ಇಂಧನವಾಗಿ ಪರಿಣಮಿಸಿದೆ. ಹೆತ್ತವರು ಮಾತ್ರವಲ್ಲದೇ ನನ್ನ ಕುಟುಂಬ ನನಗೆ ವಿಶೇಷವಾದ ಉತ್ತೇಜನ ನೀಡಿದೆ. ಸ್ಯಾಕ್ಸೋಫೋನ್ ತರಗತಿಗೆ ಹೋಗಲು ಮನಸ್ಸಿಲ್ಲದ್ದ ಸಮಯದಲ್ಲಿ ನನ್ನ ಹೆತ್ತವರು ನನ್ನಲ್ಲಿ ಸ್ಪೂರ್ತಿ ಮತ್ತು ಉತ್ಸಾಹ ತುಂಬಿದ ಕಾರಣ ನನಗೆ ಸಾಧನೆ ಮಾಡಲು ವೇದಿಕೆ ಸಿದ್ಧವಾಯಿತು.

ಪ್ರ: ಇಲ್ಲಿಯವರೆಗೆ ಎಷ್ಟು ಕಾರ್ಯಕ್ರಮಗಳನ್ನು ನೀಡಿರುವಿರಿ?
ಉ: ಮದುವೆ, ಹುಟ್ಟುಹಬ್ಬದ ಸಮಾರಂಭ, ಆರತಕ್ಷತೆ, ಗಣೇಶ ಚತುರ್ಥಿ, ದಸರಾ ಸೇರಿದಂತೆ ರಾಜ್ಯದ ಹಲವೆಡೆ ಕಳೆದ ಎರಡು ವರ್ಷದ ಅವಧಿಯಲ್ಲಿ ಸುಮಾರು 200 ಕಾರ್ಯಕ್ರಮಗಳನ್ನು ನೀಡಿದ್ದೇನೆ. 2022 ರಲ್ಲಿ ಮಡಿಕೇರಿ ಮಹಿಳಾ ದಸರಾದಲ್ಲಿಯೂ ಕಾರ್ಯಕ್ರಮ ನೀಡಿದ್ದೇನೆ.

ಪ್ರ: ಸಾಮಾಜಿಕ ಜಾಲತಾಣವನ್ನು ಯಾವ ರೀತಿ ಉಪಯೋಗಿಸುತ್ತಿದ್ದೀರಿ?
ಉ: ಕಳೆದ ವರ್ಷ ನನ್ನದೇ ಆದಂತಹ ಯೂಟ್ಯೂಬ್ ಚ್ಯಾನಲ್ (ವೈಷ್ಣವಿ ಭಟ್ ಸ್ಯಾಕ್ಸೋಫೋನ್) ಆರಂಭಿಸಿದ್ದೇನೆ. ಇದರಿಂದ ನನಗೆ ಹೆಚ್ಚಿನ ಜನರನ್ನು ತಲುಪಲು ಪರಿಣಾಮಕಾರಿ ವೇದಿಕೆ ಲಭಿಸಿದೆ.

ಪ್ರ: ಪ್ರತಿದಿನ ಸ್ಯಾಕ್ಸೋಫೋನ್ ಅಭ್ಯಾಸ ಮಾಡ್ತೀರಾ?
ಉ: ಲೆಕ್ಕಪರಿಶೋಧಕರಲ್ಲಿ ನಾನು ಆರ್ಟಿಕಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರೂ ಪ್ರತಿದಿನ ಒಂದರಿಂದ ಎರಡು ಗಂಟೆಗಳ ಕಾಲ ಸ್ಯಾಕ್ಸೋಫೋನ್ ಅಭ್ಯಾಸ ಮಾಡುತ್ತೇನೆ.

ಪ್ರ: ಸಮಾಜದಿಂದ ಬೆಂಬಲ ಹೇಗಿದೆ?
ಉ: ಸ್ಪಂದನಾ ವಾಹಿನಿಯಲ್ಲಿ ನಡೆದ ‘ಪ್ರತಿಭೆಯ ಪ್ರತಿ ಹೆಜ್ಜೆ’ ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸಲಾಯಿತು. ಆಲ್ ಇಂಡಿಯಾ ರೇಡಿಯೋ ಮಂಗಳೂರು ಕೊಂಕಣಿ ಸಂದರ್ಶನ ನೀಡಿದ್ದೇನೆ.

ಪ್ರ: ಚಿತ್ರಕಲೆಯಲ್ಲಿಯೂ ಕೈಚಳಕ ತೋರಿಸಿದ್ದೀರಿ. ಸಮಯವನ್ನು ಯಾವ ರೀತಿ ನಿರ್ವಹಣೆ ಮಾಡುತ್ತೀರಿ?
ಉ: ಬಾಲ್ಯದಿಂದಲೂ ನಾನು ನೃತ್ಯ, ಸಂಗೀತ, ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ವೃತ್ತಿಯನ್ನು ನಾನು ಖುಷಿಯಿಂದ ನಿರ್ವಹಿಸುವ ಹಾಗೆ ನನ್ನ ಕಲಾ ಆರಾಧನೆಯನ್ನು ಪ್ರೀತಿಸುತ್ತೇನೆ. ಕೆಲಸದ ಒತ್ತಡಗಳಿಂದ ಹೊರಬರಲು ಕಲಾ ಆರಾಧನೆಯನ್ನು ಕೈಗೆತ್ತಿಕೊಳ್ಳುವುದರಿಂದ ಸಮಯದ ಪರಿಣಾಮಕಾರಿಯಾದ ನಿರ್ವಹಣೆ ಮತ್ತು ಮನಸ್ಸಿಗೆ ಖುಷಿ ನೀಡುತ್ತದೆ.

ಪ್ರ: ಕಲಾಸಕ್ತರಿಗೆ ನಿಮ್ಮ ಸಂದೇಶ?
ಉ: ನಾವು ಏನನ್ನು ಮಾಡುತ್ತೇವೋ ಅದನ್ನು ಪ್ರೀತಿಸಬೇಕು. ಇಲ್ಲದಿದ್ದರೆ ನಾವು ಮಾಡುವುದನ್ನು ಪ್ರೀತಿಸಲು ಆರಂಭಿಸಬೇಕು. ನಮಗೆ ಗೊತ್ತಿರುವ ವಿದ್ಯೆಯ ಅಧ್ಯಯನವನ್ನು ನಾವು ಮೊಟಕುಗೊಳಿಸಬಾರದು. ನಾವು ಕಲಿತ ವಿದ್ಯೆ ನಮ್ಮ ಜೀವನದಲ್ಲಿ ಬೆಳಕನ್ನು ತೋರಿಸುತ್ತದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.