Saturday, February 7, 2026
Saturday, February 7, 2026

ಕೊಪ್ಪ: ನಾರ್ವೆ ಶ್ರೀ ಚಂಡಿಕೇಶ್ವರಿ ದೇವಾಲಯದಲ್ಲಿನ ಶಾಸನದ ಮರು ಅಧ್ಯಯನ

ಕೊಪ್ಪ: ನಾರ್ವೆ ಶ್ರೀ ಚಂಡಿಕೇಶ್ವರಿ ದೇವಾಲಯದಲ್ಲಿನ ಶಾಸನದ ಮರು ಅಧ್ಯಯನ

Date:

ಕೊಪ್ಪ, ಜ.6: ಕೊಪ್ಪ ತಾಲೂಕಿನ ನರಸೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ‘ಶ್ರೀ ಚಂಡಿಕೇಶ್ವರಿ’ ದೇವಾಲಯದ ಹೊರ ಆವರಣದಲ್ಲಿನ ಶಾಸನ ಸಹಿತ ಸ್ಮಾರಕಶಿಲೆಯನ್ನು ದೇವಾಲಯದ ಆಡಳಿತ ಮಂಡಳಿಯ ಮನವಿಯ ಮೇರೆಗೆ, ಕುವೆಂಪು ವಿಶ್ವವಿದ್ಯಾನಿಲಯ ವಸ್ತುಸಂಗ್ರಹಾಲಯದ ಕ್ಯುರೇಟರ್ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ನ. ಸುರೇಶ್ ಕಲ್ಕೆರೆ ಮರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.

ಈ ಶಾಸನ ಸಹಿತ ಸ್ಮಾರಕ ಶಿಲೆಯ ಮಾಹಿತಿಯನ್ನು ಎಪಿಗ್ರಾಫಿಯ ಕರ್ನಾಟಿಕ, ಸಂಪುಟ-12 ರಲ್ಲಿ ಪ್ರಕಟ ಮಾಡಿದ್ದರು ಸಹ ಪ್ರಸ್ತುತ ಅಧ್ಯಯನದಿಂದ ಹೆಚ್ಚಿನ ಮಾಹಿತಿಗಳು ಬೆಳಕಿಗೆ ಬಂದಿದ್ದು, ಕೊಪ್ಪ ತಾಲೂಕಿನ ಇತಿಹಾಸಕ್ಕೆ ಹೊಸ ವಿಚಾರಗಳು ಸೇರ್ಪಡೆಗೊಂಡಿದೆ ಎಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲಿನ ಅಧ್ಯಯನದಲ್ಲಿ ಶಾಸನದಲ್ಲಿ ಗಂಗೆಮ್ಬ, ಭೀರವೂರ, ಕಲಿಮರ ಈ ಪದಗಳ ಉಲ್ಲೇಖವಿದ್ದು ಇದೊಂದು ರಕ್ತ ಶಿಲಾಶಾಸನ ಎಂದು ಹೇಳಲಾಗಿದ್ದು, ಆದರೆ ಮರು ಅಧ್ಯಯನದಿಂದ ಈ ಶಾಸನ ಸಹಿತ ಸ್ಮಾರಕಶಿಲೆಯು ‘ಸಿಡಿತಲೆ ಕಲ್ಲು’ ಎಂದು ಕಂಡುಬಂದಿದೆ. ಅಂದರೆ ಒಬ್ಬ ವೀರನು ರಾಜ/ರಾಜ್ಯಕ್ಕಾಗಿ ತನ್ನ ಸ್ವಇಚ್ಛೆಯಿಂದ ಶಿರವನ್ನು ಕಡಿದು ಪ್ರಾಣ ತ್ಯಾಗ ಮಾಡಿರುವುದು. ಇದನ್ನು ಬೇರೆ ಬೇರೆ ರೂಪದಲ್ಲಿಯೂ ತೋರಿಸಿರುತ್ತಾರೆ. ಪ್ರಸ್ತುತ ಇಲ್ಲಿರುವ ಸಿಡಿತಲೆ ಸ್ಮಾರಕ ಶಿಲೆಯು ಸುಮಾರು ಮೂರುವರೆ ಅಡಿ ಎತ್ತರ ಹಾಗೂ ಎರಡು ಅಡಿ ಅಗಲವನ್ನು ಹೊಂದಿದ್ದು, 8ನೇ ಶತಮಾನ ದ ಅಂದರೆ ರಾಷ್ಟ್ರಕೂಟ ಕಾಲ ದ ಕನ್ನಡ ಲಿಪಿಯ ಶಾಸನವನ್ನು ಒಳಗೊಂಡಿದೆ. ಹಾಗಾಗಿ ಈ ಪ್ರದೇಶದಲ್ಲಿ ರಾಷ್ಟ್ರಕೂಟರ ಸಮಕಾಲೀನ ರಾಜವಂಶ/ಸಾಮಂತ ಅರಸರು ಆಳ್ವಿಕೆ ಮಾಡಿರುವುದು ದೃಢಪಡುತ್ತದೆ.

‘ಸ್ವಸ್ತಿಶ್ರೀ’ ಎಂಬ ಶುಭಸೂಚಕದಿಂದ ಪ್ರಾರಂಭವಾಗುವ ಈ ಶಾಸನಸಹಿತ ಸಿಡಿತಲೆ ಸ್ಮಾರಕ ಶಿಲೆಯು, ದೇವರ ರೂಪವಾದ ಅರಸರಿಗೆ/ದೇವತಿ ಅರಸರಿಗೆ ‘ಗಂಗ’ ಎಂಬ ವೀರನು, ತನ್ನ ಶಿರವನ್ನು ಸ್ವ ಇಚ್ಛೆಯಿಂದ ಊರ ಭಟರ ಮುಂದೆ ಹರಕೆ ರೂಪದಲ್ಲಿ ಸಮರ್ಪಿಸಿದ್ದು, ಈತ ಮಾಡಿದ ಈ ಪ್ರಾಣ ಬಲಿದಾನದ ನೆನಪು ಅಜರಾಮರವಾಗಿ ಉಳಿಯಲೆಂದು ಕಲಿಮರರು ಅಂದರೆ ಯುದ್ಧಕಲೆಯ ಪಾಂಡಿತ್ಯವನ್ನು ಬಲ್ಲವರು/ಈತನ ಪರಿವಾರದವರೇ ವೀರನ (ಗಂಗನ) ಮೂರ್ತಿಯನ್ನು ಕೆತ್ತಿಸಿ, ಅದರಲ್ಲಿ ಶಾಸನವನ್ನು ಬರೆಸಿ ಇಲ್ಲಿ ನೆಟ್ಟರು/ ಇಟ್ಟರು ಎಂದು ತಿಳಿಸುತ್ತದೆ.

ಈ ಸ್ಮಾರಕ ಶಿಲೆಯ ಮೇಲ್ಭಾಗದಲ್ಲಿನ ಪಟ್ಟಿಕೆಯಲ್ಲಿ ಶಿರವನ್ನು ಹರಕೆ ರೂಪದಲ್ಲಿ ಕೊಟ್ಟಂತ ವೀರನಾದ ಗಂಗನು ಇಹಲೋಕದಿಂದ ಪರಲೋಕಕ್ಕೆ ಸೇರಿದ ಎಂಬುದನ್ನು ಸಾಂಕೇತಿಕವಾಗಿ ಮಂಟಪದಲ್ಲಿ ಕುಳಿತಿರುವಂತೆ ತೋರಿಸಲಾಗಿದೆ.

ದೇವಾಲಯದ ಹೊರ ಆವರಣದಲ್ಲಿ ಸ್ಥಳೀಯರು ‘ಸಿಡಿಕಟ್ಟೆ’ ಎಂದು ಕರೆಯುವ ಕಲ್ಲಿನಿಂದ ನಿರ್ಮಾಣ ಮಾಡಿದ ಒಂದು ವೃತ್ತಾಕಾರದ ಕಟ್ಟೆಯಿದ್ದು, ಇಲ್ಲಿ ವೀರನಾದ ಗಂಗನು ಶಿರವನ್ನು ಕೊಟ್ಟಿರಬಹುದೆಂದು ಅಥವಾ ಆತ ಶಿರವನ್ನು ಕೊಟ್ಟ ಜಾಗದಲ್ಲಿ ನಂತರದಲ್ಲಿ ಈ ಕಟ್ಟೆಯನ್ನು ಕಟ್ಟಿಸಿರಬಹುದೆಂದು ಊಹಿಸಬಹುದು. ಸ್ಥಳೀಯರು ಅಭಿಪ್ರಾಯ ಪಡುವಂತೆ ದೇವಾಲಯದ ಉತ್ಸವದ ಸಂದರ್ಭದಲ್ಲಿ ಹಿಂದಿನ ಕಾಲದಲ್ಲಿ ಇಲ್ಲಿ ‘ಸಿಡಿ ಆಚರಣೆ’ ನಡೆಯುತ್ತಿದ್ದು, ಅದು ನಂತರದಲ್ಲಿ ನಿಂತುಹೋಯಿತೆಂದು ಹೇಳುತ್ತಾರೆ. ಹಾಗಾಗಿ ಈ ಸಿಡಿಕಟ್ಟೆಯನ್ನು ಸಿಡಿ ಆಚರಣೆಯ ಅವಧಿಯಲ್ಲಿಯೂ ಮಾಡಿರಬಹುದೆಂಬ ಅನುಮಾನವನ್ನು ಅಲ್ಲಗಳೆಯುವಂತಿಲ್ಲ.

ದೇವಾಲಯ ಇರುವ ಪರಿಸರದ ವ್ಯಾಪ್ತಿಯಲ್ಲಿ ಬೃಹತ್ ಶಿಲಾಯುಗ ದ ಕುರುಹುಗಳು ಪತ್ತೆಯಾಗಿದ್ದು, ಹಾಗಾಗಿ ಈ ನೆಲೆಯು ಪ್ರಾಚೀನ ಕಾಲದಿಂದಲೂ ಮಾನವನ ಅವಾಸ ಸ್ಥಾನವಾಗಿತ್ತು ಎಂದು ಊಹಿಸಬಹುದು. ಮಾತ್ರವಲ್ಲದೆ ಸುಮಾರು 15-16ನೇ ಶತಮಾನ ಕ್ಕೆ ಸಂಬಂಧಿಸಿದ ಪ್ರಾಚೀನ ದೇವಾಲಯದ ಶಿಲಾ ಕಂಬಗಳು, ವೀರಗಲ್ಲು, ಮಾಸ್ತಿಕಲ್ಲು ಹಾಗೂ ಕೋಣನ ತಲೆ ಸ್ಮಾರಕ ಶಿಲೆಯನ್ನು ಕಾಣಬಹುದು.

ಇಲ್ಲಿರುವ ಕೋಣನ ತಲೆಯನ್ನು ಕೃಷಿ ಉಪಯೋಗಿ ಜೀವಿ ಎನಿಸಿರುವ ದನ-ಕರುಗಳು, ಕೋಣಗಳಿಗೆ ರೋಗ-ರುಜಿನಗಳು ಬಂದಂತ ಸಂದರ್ಭದಲ್ಲಿ ಅಥವಾ ಬಾರದೇ ಇರಲು, ಇಲ್ಲವೇ ಹಸು, ಕರು ಹಾಕದೇ ಇದ್ದಾಗ ಇಲ್ಲಿರುವ ಕೋಣನ ತಲೆಗೆ ಹರಕೆ ಎನಿಸಿಕೊಂಡರೆ ಅಥವಾ ಹಾಲಿನ ಅಭಿಷೇಕ ಮಾಡಿದರೆ ಅವುಗಳು ಬೇಗನೇ ಗುಣಮುಖವಾಗುತ್ತವೆ ಎಂದು ಸ್ಥಳೀಯರು ನಂಬಿಕೆಯಿಂದ ಪೂಜಿಸಿಕೊಂಡು ಬರುತ್ತಿರುವ ಪದ್ಧತಿ ಈಗಲೂ ರೂಢಿಯಲ್ಲಿದೆ.

ಇಲ್ಲಿರುವ ಎಲ್ಲಾ ಸ್ಮಾರಕ ಶಿಲೆಗಳನ್ನು ದೇವಾಲಯದ ಆಡಳಿತ ಮಂಡಳಿಯವರು/ಅರ್ಚಕರು/ಸ್ಥಳೀಯರು ಗಂಧ-ಪುಷ್ಪ, ಎಣ್ಣೆ-ಧೂಪದಿಗಳಿಂದ ಪೂಜಿಸಿ, ಸಂರಕ್ಷಿಸಿಕೊಂಡು ಬಂದಿರುವುದು ಶ್ಲಾಘನೀಯ ಕಾರ್ಯ. ಹಾಗಾಗಿ ಈ ಸ್ಮಾರಕ ಶಿಲೆಗಳು ಇಂದಿಗೂ ಸಹ ಸುಸ್ಥಿತಿಯಲ್ಲಿದೆ.

ಈ ಶಾಸನಸಹಿತ ಸ್ಮಾರಕಶಿಲೆಯ ಮರು ಅಧ್ಯಯನದಲ್ಲಿ ಕಿಶನ್ ಕುಮಾರ್, ಶ್ರೇಯಾ ಶ್ರುತೇಶ್ ಆಚಾರ್ಯ ಹಾಗೂ ಆಶ್ಲೇಷ್ ಆಚಾರ್ಯ ಮೂಡುಬೆಳ್ಳೆ ಹಾಗೂ ದೇವಾಲಯದ ಆಡಳಿತ ಮಂಡಳಿ ಮತ್ತು ಸ್ಥಳೀಯರು ಸಹಕಾರ ನೀಡಿರುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್ ಆಯ್ಕೆ

ಉಡುಪಿ, ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹದಿನಾರನೇ ಕನ್ನಡ...

ತೆಂಕನಿಡಿಯೂರು ರೂ. 58.5 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

ಮಲ್ಪೆ, ಫೆ.6: ತೆಂಕನಿಡಿಯೂರು ಗ್ರಾಮದಲ್ಲಿ ರೂ. 58.50 ಲಕ್ಷ ವೆಚ್ಚದವಿವಿಧ ರಸ್ತೆ...

ಕೋಟ ನಾಗಮಂಡಲೋತ್ಸವದ ಚಪ್ಪರ ಮುಹೂರ್ತ

ಕೋಟ, ಫೆ.೬: ಕೋಟದ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕ:ಪವಿತ್ರ ನಾಗಮಂಡಲೋತ್ಸವಕ್ಕೆ...

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ

ಉಡುಪಿ, ಫೆ.6: ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಉಪಯೋಗಕ್ಕೆ ಅಗತ್ಯವಿರುವ ಎಲ್ಲಾ ರೀತಿಯ...
error: Content is protected !!