Home ಸುದ್ಧಿಗಳು ಪ್ರಾದೇಶಿಕ ಉಡುಪಿ ಪ್ರವಾಸಿಗರ ಆಕರ್ಷಣೀಯ ಜಿಲ್ಲೆಯಾಗಬೇಕು: ಶಾಸಕ ರಘುಪತಿ ಭಟ್

ಉಡುಪಿ ಪ್ರವಾಸಿಗರ ಆಕರ್ಷಣೀಯ ಜಿಲ್ಲೆಯಾಗಬೇಕು: ಶಾಸಕ ರಘುಪತಿ ಭಟ್

720
0

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲವಾದ ಅವಕಾಶಗಳಿದ್ದು, ಇವುಗಳನ್ನು ಬಳಸಿಕೊಂಡು, ವಿವಿಧ ಪ್ರವಾಸಿ ಯೋಜನೆಗಳನ್ನು ಅಭಿವೃದಿಗೊಳಿಸಿ ಜಿಲ್ಲೆಯನ್ನು ಪ್ರವಾಸಿಗರ ಆಕರ್ಷಣೀಯ ತಾಣವನ್ನಾಗಿ ಮಾಡಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ದಿ ಸಮಿತಿ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಇವರ ಸಹಯೋಗದೊಂದಿಗೆ ‘ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ’ ಎಂಬ ಸಂದೇಶದೊಂದಿಗೆ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋವಿಡ್‌ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರವೂ ಸಹ ನಷ್ಠ ಅನುಭವಿಸಿದೆ. ಆದರೆ ಪ್ರಸ್ತುತ ಪ್ರವಾಸಿಗರು ಪ್ರವಾಸಿ ಕ್ಷೇತ್ರಗಳಿಗೆ ಆಗಮಿಸುತ್ತಿದ್ದು, ಉಡುಪಿಯಲ್ಲಿ ಬೀಚ್ ಟೂರಿಸಂ, ಟೆಂಪಲ್ ಟೂರಿಸಂ ಮತ್ತು ಹೆಲ್ತ್ ಟೂರಿಸಂಗೆ ವಿಫುಲವಾದ ಅವಕಾಶಗಳಿವೆ. ಜಿಲ್ಲೆಯಲ್ಲಿನ ಹೊಸ ಪ್ರವಾಸಿ ತಾಣಗಳನ್ನು ಅಭಿವೃದ್ದಿಪಡಿಸಲು ಇದು ಸಕಾಲ. ಇಂತಹ ತಾಣಗಳನ್ನು ಮುನ್ನೆಲೆಗೆ ತರಬೇಕಿದೆ ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು ಟೂರಿಸಂ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಈ ಕಾರ್ಯಪಡೆಯ ಸಭೆಗಳನ್ನು ನಡೆಸಿ, ಸಭೆಯ ನಿರ್ಣಯಗಳ ಕುರಿತು ಸರಕಾರಕ್ಕೆ ವರದಿಯನ್ನು ಕಳುಹಿಸಬೇಕು ಎಂದು ಶಾಸಕರು ಹೇಳಿದರು.

ಕಾಪು ಬೀಚ್‌ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪ್ರವಾಸಿ ಮಿತ್ರ ಲಕ್ಷ್ಮೀನಾರಾಯಣ ರಾವ್ ಅವರನ್ನು ಅಭಿನಂದಿಸಲಾಯಿತು.

ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿದ್ದು, ವೈವಿಧ್ಯತೆಯಿಂದ ಕೂಡಿರುವ ಹಲವು ತಾಣಗಳಿವೆ. ಇವುಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ದಿಗೊಳಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸ್ಥಳೀಯ ಉತ್ಪನ್ನಗಳ ಬಗ್ಗೆ ಪ್ರದರ್ಶನ ಏರ್ಪಡಿಸಬೇಕು. ಹೋಂ ಸ್ಟೇ ಮೂಲಕ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿದ್ದು, ಹೋಂ ಸ್ಟೇ ಮಾಡಲು ಎನ್.ಓ.ಸಿ ಅಗತ್ಯವಿದ್ದು ಇದರಲ್ಲಿನ ಷರತ್ತುಗಳನ್ನು ಸರಳೀಕರಣಗೊಳಿಸಲಾಗುವುದು.

ಆತಿಥ್ಯ ವ್ಯವಸ್ಥೆಗೆ ಸಂಬಂಧಿಸಿದಂತೆ ಉಡುಪಿ ಪ್ರಸಿದ್ದಿ ಹೊಂದಿದ್ದು, ಈ ಕ್ಷೇತ್ರದಲ್ಲಿನ ಪರಿಣಿತರ ಕಾರ್ಯಾಗಾರ ಏರ್ಪಡಿಸಲಾಗುವುದು. ಉಡುಪಿ ಜಿಲ್ಲೆಗೆ ಆಗಮಿಸಿದ ಪ್ರವಾಸಿಗರು ಇಲ್ಲಿಂದ ತಮ್ಮ ಜೀವನದ ಅತ್ಯುತ್ತಮ ನೆನಪುಗಳೊಂದಿಗೆ ಮರಳುವಂತೆ ಪ್ರವಾಸಿ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಮಾತನಾಡಿ, ಕೇರಳ ಮತ್ತು ಗೋವಾ ಮಧ್ಯೆ ಇರುವ ಕರ್ನಾಟಕದ ಕರಾವಳಿಯಲ್ಲಿ 100 ಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಜೊತೆಗೆ ಇಲ್ಲಿನ ಪಾರಂಪರಿಕತೆಯನ್ನೂ ಪರಿಚಯಿಸುವ ಅಗತ್ಯವಿದೆ.

ಇಲ್ಲಿನ ಕರಕುಶಲ ವಸ್ತುಗಳು ಮತ್ತು ಸಂಸ್ಕೃತಿ ಕುರಿತು ಹೋಟೆಲ್ ರೆಸಾರ್ಟ್ಗಳಲ್ಲಿ ಪ್ರದರ್ಶನ ಮಾಹಿತಿ ಇರಬೇಕು. ಪ್ರಮುಖವಾಗಿ ಎಲ್ಲೆಡೆ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಈಗಾಗಲೇ ಕಸ ಹಾಕುವ ಜಾಗವನ್ನು ಗುರುತಿಸಿ ಅಲ್ಲಿ ಸ್ವಚ್ಛತೆ ಮೂಡಿಸಲಾಗುತ್ತಿದೆ. ಜಿಲ್ಲೆಯನ್ನು ಬ್ಲಾಕ್ ಸ್ಪಾಟ್ ಮುಕ್ತ ಮಾಡಲಾಗುತ್ತಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಮತ್ತು ಕೊಡುಗೆ ಅತ್ಯಗತ್ಯ ಎಂದರು.

ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿ, ಅಲ್ಲಿನ ಪ್ರವಾಸಿ ತಾಣಗಳು ಮತ್ತು ಅವುಗಳ ಅಭಿವೃದ್ದಿ ಕುರಿತು ಪ್ರವಾಸ ಕಥನ ಉಪನ್ಯಾಸ ನೀಡಿದ ಕೆ.ಎಂ.ಸಿ. ಮಣಿಪಾಲದ ಮೂಳೆ ವಿಭಾಗದ ಮುಖ್ಯಸ್ಥ ಮತ್ತು ಉಪನ್ಯಾಸಕ ಡಾ.ಕಿರಣ್ ಕೆವಿ ಆಚಾರ್ಯ ಮಾತನಾಡಿ, ಸ್ಥಳೀಯ ಪ್ರವಾಸಿ ತಾಣಗಳನ್ನು, ವಿದೇಶಗಳ ರೀತಿಯಲ್ಲಿ, ವಿವಿಧ ಬಗೆಯ ಪ್ರವಾಸಿ ಸ್ಥಳಗಳನ್ನಾಗಿ ಅಭಿವೃದ್ದಿಗೊಳಿಸಬಹುದಾದ ಕುರಿತು ಮಾಹಿತಿ ನೀಡಿದರು.

ನಗರಸಭಾ ಅಧ್ಯಕ್ಷರಾದ ಸುಮಿತ್ರಾ ನಾಯಕ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಪೌರಾಯುಕ್ತ ಉದಯ್ ಶೆಟ್ಟಿ, ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.