ಉಡುಪಿ, ಮಾ.13: ಡಾ.ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕರಾವಳಿಯ ಬದುಕನ್ನು ಚಿತ್ರಿಸಿದ್ದಾರೆ. ಇಲ್ಲಿಯ ಬದುಕಿನ ಜಾತಿ ವ್ಯವಸ್ಥೆ ಲಿಂಗ ಅಸಮಾನತೆ ಮತ್ತು ಪ್ರಕೃತಿ ಮನುಷ್ಯನ ಸಂಬಂಧದ ಚಿತ್ರಣಗಳಿವೆ ಈ ದೃಷ್ಟಿಯಿಂದ ಅವರ ಕಾದಂಬರಿಗಳು ಕರಾವಳಿ ಬದುಕಿನ ಚಾರಿತ್ರಿಕ ದಾಖಲೆಗಳಾಗಿವೆ ಇದಕ್ಕೆ ಅವರ ಚೋಮನದುಡಿ ಕಾದಂಬರಿ ಒಳ್ಳೆಯ ಉದಾಹರಣೆ ಎಂದು ಸೈಂಟ್ ಸಿರಿಯನ್ ಕಾಲೇಜು ಬ್ರಹ್ಮಾವರ ಸಹ ಪ್ರಾಧ್ಯಪಕಿ ಡಾ.ವಿದ್ಯಾಲತಾ ಡಿ ಹೇಳಿದರು.
ಅವರು ಮಂಗಳವಾರ ಕೋಟ ಪಡುಕೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣಾ ಸಪ್ತಾಹ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದರು.
ಆಶಯ ಭಾಷಣ ಮಾಡಿದ ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು, ಸಂವಿಧಾನಿಕ ಮೌಲ್ಯವನ್ನು ಕಾರಂತರು ತಮ್ಮ ಕೃತಿಗಳಲ್ಲಿ ಹೇಳಿದ್ದಾರೆ. ಕಾರಂತರನ್ನು ಕೇಂದ್ರವಾಗಿಟ್ಟುಕೊಂಡು ಯುವ ಸಮೂಹಕ್ಕೆ ಸಂವಿಧಾನಿಕ ಮೌಲ್ಯಗಳನ್ನು ತಲುಪಿಸುವುದು ಟ್ರಸ್ಟಿನ ಮುಖ್ಯ ಉದ್ದೇಶವಾಗಿದೆ ಎಂದರು.
ಕಾಲೇಜಿನ ಪ್ರಾಧ್ಯಾಪಕ ರಮೇಶ್ ಆಚಾರ್, ಉಡುಪಿ ಜಿಲ್ಲಾ ಲೇಖಕಿಯರ ಮತ್ತು ವಾಚಕಿಯರ ಸಂಘದ ಸಂಘಟನಾ ಕಾರ್ಯದರ್ಶಿ ಶಾಲಿನಿ ಯು ಬಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ರಾಮಚಂದ್ರ ಭಟ್ ಸ್ವಾಗತಿಸಿ, ಕನ್ನಡ ವಿಭಾಗದ ಸಹ ಪ್ರಾಧ್ಯಪಕ ಡಾ. ಪ್ರಕಾಶ್ ನಿರೂಪಿಸಿ, ವಂದಿಸಿದರು.




By
ForthFocus™