ಬ್ರಹ್ಮಾವರ, ಫೆ.27: ಮೇಕೆಕಟ್ಟು ನಂದಿಕೇಶ್ವರ ದೇಗುಲದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಫೆ.27 ಶುಕ್ರವಾರ ಆಯೋಜಿಸಿದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್ ಬಾಲಾಜಿ ಮಾತನಾಡುತ್ತಾ, ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನವಿರುತ್ತದೆ. ಕುಡುಬಿ ಸಮುದಾಯಗಳ ಪಾರಂಪರಿಕ ಆಚರಣೆಗಳು, ಮೌಕಿಕ ಪರಂಪರೆ ಹಾಗೂ ಪ್ರದರ್ಶನ ಕಲೆಗಳ ಕುರಿತು ಪಠ್ಯವಾಗಬೇಕು ಹಾಗೂ ಪ್ರತ್ಯೇಕ ಕರ್ನಾಟಕ ಬುಡಕಟ್ಟು ಅಕಾಡೆಮಿ ಸ್ಥಾಪನೆಯಾಗಬೇಕೆಂದು ಸರ್ಕಾರವನ್ನು ಅಗ್ರಹಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ಮಾತನಾಡುತ್ತಾ, ಜನಪದ ಹಾಗೂ ಬುಡಕಟ್ಟು ಕಲಾವಿದರ ಕುರಿತು ಉಡುಪಿ ಜಿಲ್ಲಾದ್ಯಂತ ಸಮೀಕ್ಷೆ ಕೈಗೊಳ್ಳಲಾಗುವುದು. ದಶಮಾನೋತ್ಸವ ಅಂಗವಾಗಿ ಗ್ರಾಮ ಘಟಕಗಳನ್ನು ಸಹ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಹಿರಿಯ ಕುಡುಬಿ ಹೋಳಿ ಕಲಾವಿದರಾದ ಶೀನ ನಾಯ್ಕ್ ಮಂಡಕರ ಹಾಗೂ ರಾಮಣ್ಣ ನಾಯ್ಕ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು. ಕುಡುಬಿ ಸಮುದಾಯದ ನೃತ್ಯ ಪ್ರದರ್ಶನ ಹಾಗೂ ಕೋಲಾಟವನ್ನು ಏರ್ಪಡಿಸಲಾಗಿತ್ತು.
ದೇಗುಲದ ಟ್ರಸ್ಟಿ ರಾಜಾರಾಮ್ ಶೆಟ್ಟಿ, ಪ್ರತಾಪ್ ಶೆಟ್ಟಿ ಕೊಳ್ಕೆಬೈಲು, ಜಿಲ್ಲಾ ಪ್ರ. ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಸದಾನಂದ ಉಪಸ್ಥಿತರಿದ್ದರು.




By
ForthFocus™