ಉಪ್ಪೂರು, ಫೆ.21: ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಇತ್ತೀಚೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪೂರು ಇಲ್ಲಿ ಉದ್ಘಾಟನೆಗೊಂಡಿತು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಎಲ್ಲಾ ಶಿಬಿರಾರ್ಥಿಗಳು ಶಿಬಿರದಲ್ಲಿ ಕಲಿತ ಉತ್ತಮ ವಿಚಾರಗಳನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಪಿ ಇವರು ಮಾತನಾಡಿ, ಸೇವೆಯನ್ನೇ ಸದುದ್ದೇಶವಾಗಿ ಇಟ್ಟುಕೊಂಡ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನೀವೆಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ತುಂಬಾ ಸಂತೋಷದ ವಿಚಾರ. ಯುವಜನತೆ ಸ್ವಯಂಪ್ರೇರಣೆಯಿಂದ ಸಮಾಜಸೇವೆಯತ್ತ ಆಸಕ್ತರಾಗುವುದು ಅಭಿವೃದ್ಧಿಯ ಲಕ್ಷಣ, ವ್ಯಕ್ತಿತ್ವ ವಿಕಸನಕ್ಕೂ ಇಂತಹ ಶಿಬಿರಗಳು ಕಾರಣವಾಗುತ್ತವೆ ಎಂದರು.
ಉಡುಪಿ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಪ್ರವೀಣ ಕುಮಾರ್ ಗುರ್ಮೆ ಮಾತನಾಡಿ, ಯುವಜನತೆ ಇಂತಹ ಶಿಬಿರಗಳಿಂದ ಕಲಿಯುವುದು ಸಾಕಷ್ಟು ಇರುತ್ತವೆ, ಜವಾಬ್ದಾರಿಗಳನ್ನು ಅರಿತುಕೊಳ್ಳಲು, ಪ್ರಬುದ್ಧತೆಯತ್ತ ಸಾಗಲು ಸಹಕಾರಿಯಾಗುತ್ತವೆ. ಈ ಶಿಬಿರಗಳಲ್ಲಿ ಮಾಡಿದ ಕೆಲಸ ಕಾರ್ಯಗಳು ಅವಿಸ್ಮರಣೀಯವಾಗಿರುತ್ತವೆ ಎಂದರು. ವೇದಿಕೆಯಲ್ಲಿ ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ರಾಜೇಂದ್ರ, ಯುವಜನ ಮಂಡಲ (ರಿ.) ಉಪ್ಪೂರು ಇದರ ಉಪಾಧ್ಯಕ್ಷ ಸುರೇಶ್ ಜತ್ತನ್, ಸ.ಹಿ.ಪ್ರಾ.ಶಾಲೆ ಉಪ್ಪೂರು ಇಲ್ಲಿನ ಮುಖ್ಯೋಪಾಧ್ಯಾಯಿನಿ ಚೆಲುವಕುಮಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮೇಘನ, ಅಂಗನವಾಡಿ ಶಿಕ್ಷಕಿ ಕುಮುದ, ಉಪಸ್ಥಿತರಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವಕರ ವಹಿಸಿದ್ದರು.
ಎನ್ ಎಸ್ ಎಸ್ ಶಿಬಿರಾಧಿಕಾರಿ ಪ್ರಸಾದ್ ಎಚ್ ಎಂ ಸ್ವಾಗತಿಸಿ, ಸುಷ್ಮಾ ಟಿ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶಿಬಿರಾರ್ಥಿ ದೀಕ್ಷಾ ನಿರ್ವಹಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಸಂದೇಶ್ ಕುಮಾರ್ ಎಂ.ವಿ., ರಾಜಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ, ರಾಜ್ಯಶಾಸ್ತ್ರ ಸಹಪ್ರಾಧ್ಯಾಪಕರಾದ ಪ್ರಶಾಂತ ನೀಲಾವರ, ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ಜಿ ನಾಯಕ್, ಸ.ಹಿ.ಪ್ರಾ ಶಾಲೆಯ ಶಿಕ್ಷಕರಾದ ಪ್ರಶಾಂತ ಶೆಟ್ಟಿ, ಉಪಸ್ಥಿತರಿದ್ದರು. ಒಟ್ಟು ಏಳು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಸುಮಾರು 100 ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದು, ಶ್ರಮದಾನದ ಮೂಲಕ ಶಾಲಾ ಆವರಣ ಸ್ವಚ್ಛತೆ, ಶಾಲಾ ಉದ್ಯಾನ ನಿರ್ಮಾಣ, ತೆಂಗಿನ ಮರಗಳಿಗೆ ಕಟ್ಟೆ ನಿರ್ಮಾಣ, ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಇವುಗಳೊಂದಿಗೆ ರಂಗತರಬೇತಿ, ಜಾಗತಿಕ ಅವಕಾಶಗಳು, ಡಿಜಿಟಲ್ ಸಾಕ್ಷರತೆ, ಕಾರ್ಯಕ್ರಮ ಸಂಘಟನೆ ಮತ್ತು ನಿರ್ವಹಣಾ ಕೌಶಲದಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.




By
ForthFocus™