ಉಡುಪಿ, ಫೆ.18: ಸಿನೆಮಾಗಳ ಗುಣಮಟ್ಟ ಸುಧಾರಿಸಬೇಕಾದರೆ ಪ್ರೇಕ್ಷಕರ ಅಭಿರುಚಿಯನ್ನು ತಿದ್ದುವ ಅಗತ್ಯವಿದೆ. ಇಂದಿನ ಹೆಚ್ಚಿನ ಸಿನೆಮಾ ಮತ್ತು ಧಾರವಾಹಿಗಳು ಅವಾಸ್ತವ ಘಟನೆಗಳನ್ನು ಚಿತ್ರಿಸುತ್ತವೆ. ಇವು ಪ್ರೇಕ್ಷಕರ ಭೌತಿಕ ಚಿಂತನೆಯಲ್ಲಿ ಬದಲಾವಣೆ ಮಾಡುವುದಿಲ್ಲ. ಕಾರಂತರ ಕೃತಿಗಳಂತೆ ವಾಸ್ತವವಾದಿ ಚಿಂತನೆಯನ್ನು ಬೆಳೆಸುವ ಸಿನೆಮಾಗಳನ್ನು ನೋಡುವ ಅಭಿರುಚಿ ಪ್ರೇಕ್ಷಕರಲ್ಲಿ ಬೆಳೆಸುವ ಅಗತ್ಯವಿದೆ ಈ ದೃಷ್ಟಿಯಿಂದ ಈ ಕಾರ್ಯಕ್ರಮವು ಮಾದರಿಯಾಗಿದೆ ಎಂದು ಖ್ಯಾತ ನಿರ್ದೇಶಕ ಪಿ ಶೇಷಾದ್ರಿ ಹೇಳಿದರು. ಅವರು ಸೋಮವಾರ ಮಣಿಪಾಲ ಮಾಹೆಯ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಮಣಿಪಾಲ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಯನ್ಸಸ್ ಹ್ಯುಮಾನಿಟೀಸ್ ಆಂಡ್ ಆರ್ಟ್ಸ್ ವಿಭಾಗದ ಸಹಯೋಗದಲ್ಲಿ ನಡೆದ ಕಾರಂತರ ಚಲನಚಿತ್ರ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ಖ್ಯಾತ ನಿರ್ದೇಶಕ ಪದ್ಮಶ್ರೀ ಡಾ.ಗಿರೀಶ್ ಕಾಸರವಳ್ಳಿ ಮಾತನಾಡಿ, ಕಾಲೇಜುಗಳಲ್ಲಿ ಸಿನೆಮಾ ಕ್ಲಬ್ಗಳನ್ನು ಸ್ಥಾಪಿಸಿ ವಿರಾಮ ಸಂದರ್ಭದಲ್ಲಿ ಕಲಾತ್ಮಕ ಸಿನೆಮಾಗಳನ್ನು ನೋಡುವ ಅವಕಾಶ ಕಲ್ಪಿಸಬೇಕು ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಈ ರೀತಿಯ ಕಾರ್ಯಕ್ರಮಗಳನ್ನು ಮುಂದೆಯೂ ಹಮ್ಮಿಕೊಳ್ಳಲಾಗುವುದು ಎಂದರು. ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಉಪಸ್ಥಿತರಿದ್ದರು.
ಮಾಹೆಯ ಮಾನವಿಕ ವಿಭಾಗದ ಮುಖ್ಯಸ್ಥೆ ಗಾಯತ್ರಿ ಪ್ರಭು ಸ್ವಾಗತಿಸಿ, ಭಾಷಾ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ. ಪೃಥ್ವಿರಾಜ್ ಕವತ್ತಾರು ಕಾರ್ಯಕ್ರಮದ ವಿವರ ನೀಡಿದರು. ಸೌಮ್ಯ ಕಾರ್ಯಕ್ರಮ ನಿರ್ವಹಿಸಿ, ಯಜುಷಾ ವಂದಿಸಿದರು.




By
ForthFocus™