ಉಡುಪಿ, ಜ.18: ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರು ಶ್ರೀಕೃಷ್ಣನ ಪೂಜಾ ಕೈಂಕರ್ಯ ಮತ್ತು ಸರ್ವಜ್ಞ ಪೀಠವೇರಿದ ಅತ್ಯಂತ ಕಿರಿಯ ಯತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನಸುಕಿನ ಜಾವ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಜೋಡುಕಟ್ಟೆಯಿಂದ ಆಗಮಿಸಿದ ಪರ್ಯಾಯ ಮೆರವಣಿಗೆ ಅದ್ಭುತ ಸಂಭ್ರಮದ ಕ್ಷಣಗಳಿಗೆ ಸಾಕಗಷಿಯಾಯಿತು.

ಇದಕ್ಕೂ ಮುನ್ನ ವೇದವರ್ಧನ ತೀರ್ಥರು ದಂಡತೀರ್ಥದಲ್ಲಿ ಪುಣ್ಯಸ್ನಾನಗೈದು ಜೋಡುಕಟ್ಟೆಗೆ ಆಗಮಿಸಿದರು.

ಬಳಿಕ ಮೆರವಣಿಗೆಯಲ್ಲಿ ಸಾಗಿಬಂದು ಮೊದಲಿಗೆ ಕನಕನಕಿಂಡಿಯ ಮೂಲಕ ಶ್ರೀ ಕೃಷ್ಣ ದರ್ಶನ ಪಡೆದರು. ಬಳಿಕ ಪುತ್ತಿಗೆ ಶ್ರೀಗಳು ಶೀರೂರು ಶ್ರೀಗಳನ್ನು ಬರಮಾಡಿಕೊಂಡು ಅಕ್ಷಯ ಸೌಟು ಮತ್ತು ಮಠದ ಕೀಲಿಕೈ ಹಸ್ತಾಂತರಿಸಿದರು. ಶ್ರೀ ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದ ಯತಿಗಳು ಅರಳು ಗದ್ದಿಗೆ ಸಾಂಪ್ರಾದಯಿಕ ದರ್ಬಾರ್ ನಲ್ಲಿ ಪಾಲ್ಗೊಂಡರು.

ಸರ್ವಜ್ಞ ಪೀಠವೇರಿದ ವೇದವರ್ಧನ ತೀರ್ಥರ ಜೊತೆಗೆ ಕೃಷ್ಣಾಪುರ, ಪಲಿಮಾರು, ಪೇಜಾವರ, ಕಾಣಿಯೂರು, ಸೋದೆ, ಅದಮಾರು ಶ್ರೀಗಳು ಭಾಗಿಯಾದರು. ರಾಜಾಂಗಣದಲ್ಲಿ ನಡೆದ ದರ್ಬಾರ್ ನಲ್ಲಿ ದೇಶದ ವಿವಿಧ ಭಾಗಗಳ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಮೈಸೂರು ಮಹಾರಾಜ ಸಂಸದ ಯದುವೀರ ದತ್ತ ಒಡೆಯರ್ ಭಾಗಿಯಾಗಿದ್ದರು.

ದರ್ಬಾರ್ ಮುಗಿದ ಬಳಿಕ ಶೀರೂರು ಶ್ರೀಗಳು ತನ್ನ ಪ್ರಥಮ ಪರ್ಯಾಯದ ಮೊದಲ ಕೃಷ್ಣ ಪೂಜೆ ನೆರವೇರಿಸಿದರು. ಈ ಬಾರಿಯ ಹಿಂದಿನ ಪರ್ಯಾಯಗಳಿಗಿಂತಲೂ ಅಧಿಕ ಸಂಖ್ಯೆಯ ಭಕ್ತರ ಉಪಸ್ಥಿತಿಗೆ ಸಾಕ್ಷಿಯಾಯಿತು.


ಗಮನ ಸೆಳೆದ ಶಿವಶ್ರೀ ನಾಮಸಂಕೀರ್ತನೆ: ಶೀರೂರು ಪರ್ಯಾಯದ ಪ್ರಥಮ ದಿನ ಖ್ಯಾತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯರವರ ನಾಮಸಂಕೀರ್ತನೆಯು ಭಾನುವಾರದಂದು ರಾಜಾಂಗಣದಲ್ಲಿ ನಡೆಯಿತು. ಪಕ್ಕವಾದ್ಯದಲ್ಲಿ ಹಾರ್ಮೋನಿಯಂ ಗೌರವ್ ಗಡಿಯಾರ್, ಮೃದಂಗಂ ಅನಿರುದ್ಧ ಭಟ್, ತಬಲಾ ಪ್ರದ್ಯುಮ್ನ ಕರ್ಪುರ್ ಸಹಕರಿಸಿದ್ದರು. ಅರವಿಂದ ಹೆಬ್ಬಾರ್ ಸ್ವಾಗತಿಸಿದರು.




By
ForthFocus™