ಉಡುಪಿ, ಡಿ.3: ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾ ರೆಡ್ ಕ್ರಾಸ್ ಘಟಕ ಪ್ರಾಯೋಜಿತ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ವತಿಯಿಂದ ನವೆಂಬರ್ 25 ರಿಂದ ಡಿಸೆಂಬರ್ 1 ರವರೆಗೆ ವಿವಿಧ ತಾಲೂಕುಗಳಲ್ಲಿ ವಿಕಲಚೇತನರ ಸಪ್ತಾಹವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ಘಾಟನೆಯೊಂದಿಗೆ ಚಾಲನೆಗೊಂಡು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಮಾರೋಪ ಸಮಾರಂಭದೊಂದಿಗೆ ಕೊನೆಗೊಂಡಿತು.

ಸಾರ್ವಜನಿಕರಿಗೆ 21 ಬಗೆಯ ವಿಕಲತೆ, ವಿಕಲಚೇತನರಿಗೆ ದೊರೆಯುವ ಸರಕಾರಿ ಸೌಲಭ್ಯಗಳು, ವಿಕಲಚೇತನರ ಆರೈಕೆ ಮತ್ತು ಕಾನೂನುಗಳ ಬಗ್ಗೆ ಮಾಹಿತಿ ನೀಡಲಾಯಿತು. ಡಿಡಿಆರ್ಸಿ ನೋಡಲ್ ಅಧಿಕಾರಿ ಜಯಶ್ರೀ, ಮನೋಶಾಸ್ತ್ರಜ್ಞೆ ವೈಶಾಖ ವಾರಂಬಳ್ಳಿ, ಫಿಸಿಯೋಥೆರಪಿಸ್ಟ್ ಡಾ. ಶ್ರೇಯಾ, ಪ್ರಾಸ್ಥೆಟಿಕ್ ಮತ್ತು ಆರ್ಥೋಟಿಸ್ಟ್ ಇಂಜಿನಿಯರ್ ಜೆನಿಸ್ ಡಿಸೋಜ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ರಾಜ್ಯ ರೆಡ್ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನಾ ಸುವರ್ಣ ಉಪಸ್ಥಿತರಿದ್ದರು. ಸಪ್ತಾಹದ ಅಂಗವಾಗಿ ಕುಂದಾಪುರ ತಾಲೂಕು ಪಂಚಾಯತ್, ಬ್ರಹ್ಮಾವರದ ಎಸ್ ಎಮ್ ಎಸ್ ಕಾಲೇಜು, ಕಾರ್ಕಳ ತಾಲೂಕು ಪಂಚಾಯತ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ತಾಲೂಕು ಪಂಚಾಯತ್ ಬೈಂದೂರು ಇಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು.




By
ForthFocus™