ಕುಂದಾಪುರ, ನ.30: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಕುಂದಾಪುರ, ಒನ್ ಗುಡ್ ಸ್ಟೆಪ್, ಬೆಂಗಳೂರು, ರೋಟರಿ ಕ್ಲಬ್ ಕುಂದಾಪುರ ಹಾಗೂ ಎಮ್.ಪಿ. & ಐ.ಎಸ್. ಲಿ. ನ ಸಿ.ಎಸ್.ಆರ್. ಪ್ರಾಯೋಜಿತ ಟಿ.ಎಮ್.ಜಿ. ಸುನಿಧಿ ಫೌಂಡೇಶನ್ ಟ್ರಸ್ಟ್, ಸಮುದಾಯ ವೈದ್ಯಕೀಯ ವಿಭಾಗ ಮತ್ತು ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನಲ್, ಮಾಹೆ ಮಣಿಪಾಲ ಇವರ ಸಹಯೋಗದೊಂದಿಗೆ ಅಂತರಾಷ್ಟ್ರೀಯ ವಿಶೇಷ ಚೇತನ ದಿನದ ಅಂಗವಾಗಿ ಕುಂದಾಪುರ ತಾಲ್ಲೂಕಿನ ವಿಶೇಷ ಚೇತನ ಮಕ್ಕಳಿಗಾಗಿ ಆರೋಗ್ಯ ತಪಾಸಣಾ ಶಿಬಿರವು ಕುಂದಾಪುರ ರೋಟರಿ ಭವನದಲ್ಲಿ ನಡೆಯಿತು.
ಶಿಬಿರವನ್ನು ಒನ್ ಗುಡ್ ಸ್ಟೆಪ್, ಬೆಂಗಳೂರು ಇದರ ಸ್ಥಾಪಕಿ & ಮ್ಯಾನೇಜಿಂಗ್ ಟ್ರಸ್ಟಿಯವರಾದ ಅಮಿತಾ ಪೈ ಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಮ್ಮ ಟ್ರಸ್ಟ್ ಮೂಲಕ ವಿಶೇಷ ಚೇತನ ಮಕ್ಕಳ ಬೆಳವಣಿಗೆಗೆ ಬೇಕಾದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಹೆಚ್. ಶೋಭಾ ಶೆಟ್ಟಿಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ರೋಟರಿ ಕ್ಲಬ್ ನ ಅಧ್ಯಕ್ಷರಾದ ನಾಗರಾಜ ಶೆಟ್ಟಿ, ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಯಶ್ ಅಲೋಕ್, ಸ್ಪೀಚ್ & ಹಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅರ್ಚನಾ ಜಿ., ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಅಶೋಕ ನಾಯ್ಕ ಉಪಸ್ಥಿತರಿದ್ದರು.
ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸುಮಾರು 120 ವಿಶೇಷ ಚೇತನ ಮಕ್ಕಳಿಗೆ ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ಕಣ್ಣು, ಕಿವಿ ತಪಾಸಣೆ, ಮಕ್ಕಳಿಗೆ ಮಾತನಾಡಲು ಹಾಗೂ ದೈಹಿಕ ವ್ಯಾಯಾಮವನ್ನು ತಿಳಿಸಿಕೊಡಲಾಯಿತು. ತೆಕ್ಕಟ್ಟೆ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕರಿಸಿದರು.
ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಶಂಕರ ಕುಲಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಮನ ಪ್ರಾರ್ಥಿಸಿ, ಸುಕನ್ಯ ವಂದಿಸಿ, ಸಂತೋಷ ಶೆಟ್ಟಿ ನಿರೂಪಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಸಾಮಾಜಿಕ ಕಾರ್ಯಕರ್ತ ಮಹೇಶ್ ಆಚಾರ್ಯ ಕೊಕ್ಕರ್ಣೆ, ರೋಟರಿ ಕ್ಲಬ್ ನ ಕಾರ್ಯದರ್ಶಿ ಸರ್ವೋದಯ ಪೂಜಾರಿ ಹಾಗೂ ಸದಸ್ಯರಾದ ಪಾರ್ವತಿ ಮುದ್ದೋಡಿ ಸಹಕರಿಸಿದರು.




By
ForthFocus™