ವಡ್ಡರ್ಸೆ, ಸೆ.14: ಇಡೀ ಮನುಕುಲಕ್ಕೆ ನಾರಾಯಣ ಗುರುಗಳ ತತ್ವ ಆದರ್ಶಗಳು ಮಾದರಿಯಾಗಿದೆ, ಈ ಹಿನ್ನಲ್ಲೆಯಲ್ಲಿ ವ್ಯಾಟಿಕನ್ ಪೋಪ್ ನಾರಾಯಣಗುರುಗಳ ಸಿದ್ಧಾಂತವನ್ನು ವಿಶ್ವಮಟ್ಟದಲ್ಲಿ ಕೊಂಡಾಡಿದ್ದಾರೆ ಎಂದು ಬಿಲ್ಲವ ಸೇವಾ ಸಂಘ ಬ್ರಹ್ಮಾವರ ಅಧ್ಯಕ್ಷ ಬಿ.ಎನ್ ಶಂಕರ್ ಪೂಜಾರಿ ಹೇಳಿದರು. ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ವಡ್ಡರ್ಸೆ ಬ್ರಹ್ಮಶ್ರೀ ನಾರಾಯಣಗುರುಗಳ ೧೭೧ನೇ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ಗುರುಪೂಜೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭರತನಾಟ್ಯದಲ್ಲಿ ವಿಶ್ವದಾಖಲೆ ಬರೆದ ಕಲಾವಿದೆ ದೀಕ್ಷಾ ವಿ ಪೂಜಾರಿ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡ ಪರಿಮಳ ಕೋಟಿ ಪೂಜಾರಿ, ಹೈನುಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಉಡುಪಿ ಇದರ ಉತ್ತಮಕೃತಕ ಗರ್ಭಧಾರಣೆಯ ಪ್ರಶಸ್ತಿ ಪುರಸ್ಕೃತ ಸಂತೋಷ್ ಪೂಜಾರಿ ಅಚ್ಲಾಡಿ, ಸಿಸ್ಟರ್ ಮಮತಾ ಪೂಜಾರಿ, ಶೈಕ್ಷಣಿಕ ಸಾಧಕರಾದ ಅಪೇಕ್ಷಾ, ಸಜನಿ ವಿ ಇವರುಗಳನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಕೇಶ್ ಪೂಜಾರಿ ವಹಿಸಿದ್ದರು. ಗುರುಗಳ ಸಂದೇಶವನ್ನು ಶಿಕ್ಷಕ ಅಲ್ತಾರ್ ಆನಂದ್ ಪೂಜಾರಿ ನೀಡಿದರು ಮುಖ್ಯ ಅಭ್ಯಾಗತರಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಮಾಜಿ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಉದ್ಯಮಿ ಮಹಾಬಲ ಪೂಜಾರಿ, ಬಿಲ್ಲವ ಸಂಘ ವಡ್ಡರ್ಸೆ ಗೌರವಾಧ್ಯಕ್ಷ ಕೋಟಿ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಶಾರದ ಪೂಜಾರಿ, ಎಲ್ ಐಸಿ ವಿಮಾ ಕಂಪನಿಯ ಭಾಸ್ಕರ್ ಪೂಜಾರಿ ಕದ್ರಿಕಟ್ಟೆ, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಬಿಲ್ಲಾಡಿ ಆತ್ಮಾನಂದ ಟ್ರಸ್ಟ್ ನ ಓಬ ಪೂಜಾರಿ, ಬಾರ್ಕೂರು ಬಿಲ್ಲವ ಸಂಘದ ಅಧ್ಯಕ್ಷ ಸರ್ವೋತ್ತಮ ಪೂಜಾರಿ ಉಪಸ್ಥಿತರಿದ್ದರು. ನಾರಾಯಣಗುರು ಪೂಜಾ ಅಂಗವಾಗಿ ಸತ್ಯನಾರಾಯಣ ಪೂಜೆ, ಗುರು ಪೂಜೆ ಕಾರ್ಯಕ್ರಮ ಜರಗಿತು. ವೇ.ಮೂ.ಸತ್ಯನಾರಾಯಣ ಅಡಿಗ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಿತು. ಗುರುಪೂಜೆಯನ್ನು ನಾಗರಾಜ ಪೂಜಾರಿ ನೆರವೇರಿಸಿದರು. ಗೋಪಾಲಕೃಷ್ಣ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ಜರಗಿತು. ಸಂಘದ ಕಾರ್ಯದರ್ಶಿ ಕೃಷ್ಣ ಪೂಜಾರಿ ಸ್ವಾಗತಿಸಿ, ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು.




By
ForthFocus™