ಉಡುಪಿ, ಸೆ.13: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದ ಕ, ಉಡುಪಿ ಜಿಲ್ಲೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ನೀಡುತ್ತಿರುವ ಸಂಗೊಳ್ಳಿ ರಾಯಣ್ಣ ಪುರಸ್ಕಾರ- 2025ಕ್ಕೆ ಸಾಮಾಜಿಕ ಹೋರಾಟಗಾರ, ಚಿಂತಕ ಹಾಗೂ ಪ್ರಸಿದ್ಧ ಮನೋವೈದ್ಯ ಡಾ. ಪಿ.ವಿ.ಭಂಡಾರಿ ಅವರು ಆಯ್ಕೆಯಾಗಿರುತ್ತಾರೆ. ಸೆಪ್ಟೆಂಬರ್ 24, ಬುಧವಾರ 5 ಗಂಟೆಗೆ ಉಡುಪಿಯ ಯಕ್ಷಗಾನ ಕಲರಂಗದ ಐವೈಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನವು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಸಂಗೊಳ್ಳಿ ರಾಯಣ್ಣ ಬಳಗದ ಗೌರವಾಧ್ಯಕ್ಷ ಜನಾರ್ದನ ಕೊಡವೂರು, ಕಾರ್ಯಾಧ್ಯಕ್ಷ ಕುಮಾರ್ ಪ್ರಸಾದ್, ಪ್ರಸನ್ನ ಹಿರೇಮಠ್ ಉಪಸ್ಥಿತರಿದ್ದರು.
ಡಾ. ಪಿ. ವಿ. ಭಂಡಾರಿ ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ತಜ್ಞ ಮನೋವೈದ್ಯ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಹೋರಾಟಗಾರರಾಗಿರುವ ಭಂಡಾರಿಯವರು ಹಲವು ಸಮಾಜ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಭಂಡಾರಿ ಅವರ ಕೊಡುಗೆ ಬಹಳ ದೊಡ್ಡದು. ಮನೋವೈದ್ಯರಾಗಿ ಸಾವಿರಾರು ಮಂದಿಗೆ ನೆಮ್ಮದಿಯ ಬದುಕನ್ನು ನೀಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಶ್ರೇಷ್ಠ ಮನೋವೈದ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ. ಎಸ್. ಎಸ್. ಜಯರಾಂ ಪ್ರಶಸ್ತಿ, ಸ್ಪಂದನ ಪ್ರಶಸ್ತಿ. ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡುವ ಸಂಯಮ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಳೆದ 15 ವರ್ಷಗಳಿಂದ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ತಜ್ಞ ಮನೋವೈದ್ಯ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸಗಳ ಮೂಲಕವೂ ಸ್ವಸ್ಥ ಜೀವನಕ್ಕಾಗಿ ಸಾವಿರಾರು ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಡಾ. ಪಿ.ವಿ. ಭಂಡಾರಿಯವರು ಜೆಜೆ.ಎಂ.ವೈದ್ಯಕೀಯ ಮಹಾವಿದ್ಯಾನಿಲಯದಲ್ಲಿ ಎಂ.ಬಿ. ಬಿ.ಎಸ್, ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಮನೋವೈಜ್ಞಾನಿಕ ಚಿಕಿತ್ಸೆಯಲ್ಲಿ ಡಿಪ್ಲೊಮಾ, ಮಂಗಳೂರಿನ ಫಾ. ಮುಲ್ಲರ್ಸ್ ವೈದ್ಯಕೀಯ ಮಹಾ ವಿದ್ಯಾನಿಲಯದಿಂದ ಡಿ.ಎನ್.ಬಿ (ಮನೋವೈಜ್ಞಾನಿಕ ಚಿಕಿತ್ಸೆ) ಪದವಿ ಪಡೆದಿದ್ದಾರೆ.




By
ForthFocus™