Home ಸುದ್ಧಿಗಳು ಪ್ರಾದೇಶಿಕ ಕೆ.ಎಂ.ಸಿ ಮಣಿಪಾಲ: ಅಂತರರಾಷ್ಟ್ರೀಯ ಥಲಸ್ಸೇಮಿಯಾ ದಿನಾಚರಣೆ

ಕೆ.ಎಂ.ಸಿ ಮಣಿಪಾಲ: ಅಂತರರಾಷ್ಟ್ರೀಯ ಥಲಸ್ಸೇಮಿಯಾ ದಿನಾಚರಣೆ

97
0

ಮಣಿಪಾಲ, ಮೇ 8: ಥಲಸ್ಸೆಮಿಯಾ ಒಂದು ಆನುವಂಶಿಕ ರಕ್ತದ ಕಾಯಿಲೆಯಾಗಿದೆ. ಈ ಅಸ್ವಸ್ಥತೆಯಲ್ಲಿ ರೋಗಿಯು ಸಾಕಷ್ಟು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆದ್ದರಿಂದ, ಈ ಖಾಯಿಲೆ ಇರುವವರು ರಕ್ತ ಹೀನತೆಯಿಂದ ಬಳಳುತ್ತಾರೆ ಮತ್ತು ಜೀವನಪರ್ಯಂತ ನಿಯಮಿತ ರಕ್ತ ವರ್ಗಾವಣೆಯ ಮೇಲೆ ಅವಲಂಬಿತರಾಗಿರುತ್ತಾರೆ. ಥಲಸ್ಸೆಮಿಯಾ ರೋಗವನ್ನು ತಡೆಗಟ್ಟುವಿಕೆ, ಗುಣಪಡಿಸುವ ಆಯ್ಕೆಗಳು ಮತ್ತು ಥಲಸ್ಸೆಮಿಯಾ ರೋಗಿಗಳ ಆರೈಕೆಯ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಥಲಸ್ಸೆಮಿಯಾ ದಿನವನ್ನು ಪ್ರತಿವರುಷ ಮೇ 8 ರಂದು ಆಚರಿಸಲಾಗುತ್ತದೆ. ಈ ವರುಷ ಥಲಸ್ಸೆಮಿಯಾ ದಿನದ ಧ್ಯೇಯವೇನೆಂದರೆ ‘ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಚಿಕಿತ್ಸೆಯ ಆಯ್ಕೆಗಳು ಥಲಸ್ಸೆಮಿಯಾ ರೋಗಿಗಳಿಗೆ ಸಿಗಬೇಕು ಮತ್ತು ಉತ್ತಮವಾದ ರೋಗ ಆರೈಕೆಗೆ ಸಮಾನ ಹಕ್ಕು ದೊರೆಯಬೇಕು’ ಎಂಬುದಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ವೀಣಾ ಕುಮಾರಿ ಅವರು ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ, ಥಲಸ್ಸೆಮಿಯಾ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮವಾದ ಆರೈಕೆ ಮತ್ತು ಚಿಕಿತ್ಸೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮತ್ತು ಅದನ್ನು ಪಡೆಯಲು ಅವರು ಅರ್ಹರು ಎಂದು ತಿಳಿಸಿದರು.

ಥಲಸ್ಸೆಮಿಯಾದಂತಹ ಕಾಯಿಲೆಗಳಿಗೆ ಸಾರ್ವಜನಿಕ (ಸರ್ಕಾರಿ) ಖಾಸಗಿ ಸಹಭಾಗಿತ್ವದ ಮಾದರಿಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಡಾ.ಪದ್ಮರಾಜ್ ಹೆಗ್ಡೆ, ಡೀನ್ ಕೆಎಂಸಿ, ಮಣಿಪಾಲ ಇವರು ಈ ಸಮಗ್ರ ಚಿಕಿತ್ಸಾಲಯವನ್ನು ಆರಂಭಿಸಿದ್ದಕ್ಕಾಗಿ ವಿಭಾಗವನ್ನು ಅಭಿನಂದಿಸಿದರು. ಅವರು ಮಾತನಾಡುತ್ತಾ, ಬಹಳಷ್ಟು ಸಂಘ ಸಂಸ್ಥೆಗಳ ಬೆಂಬಲವು ಕೆಎಂಸಿಯಲ್ಲಿ ಬಡ ಮಕ್ಕಳಿಗೆ ಮೂಳೆ ಮಜ್ಜೆಯ ಕಸಿ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಉಲ್ಲೇಖಿಸಿದರು . ಥಲಸ್ಸೆಮಿಯಾ ಕುರಿತು ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಿದ ಅವರು, ರೋಗದ ವಿವರವಾದ ಮಾಹಿತಿಯನ್ನು ಆರೈಕೆ ಮಾಡುವವರಿಗೆ ಅವರಿಗೆ ಉತ್ತಮವಾಗಿ ಅರ್ಥವಾಗುವ ಭಾಷೆಯಲ್ಲಿ ನೀಡಬೇಕು ಎಂದು ಹೇಳಿದರು.

ಮಣಿಪಾಲದ ಕೆಎಂಸಿಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ವಾಸುದೇವ ಭಟ್ ಕೆ ಸ್ವಾಗತಿಸಿ, ಈ ಕ್ಲಿನಿಕ್ ಅನ್ನು ಪ್ರಾರಂಭಿಸಲು ಅಂತರರಾಷ್ಟ್ರೀಯ ಥಲಸ್ಸೆಮಿಯಾ ದಿನಕ್ಕಿಂತ ಉತ್ತಮ ದಿನ ಬೇರೊಂದಿಲ್ಲ ಮತ್ತು ನಮ್ಮ ದೃಷ್ಟಿ ಈ ವರ್ಷದ ಥೀಮ್‌ಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದರು. ಇದೇ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಅರ್ಚನಾ ಎಂ.ವಿ ಸಮಗ್ರ ಥಲಸ್ಸೆಮಿಯಾ ಚಿಕಿತ್ಸಾಲಯ ಮತ್ತು ಅದರ ಕಾರ್ಯನಿರ್ವಹಣೆಯ ಅವಲೋಕನವನ್ನು ನೀಡಿದರು. ಈ ಚಿಕಿತ್ಸಾಲಯವು ಪ್ರತಿ ತಿಂಗಳ 2ನೇ ಶನಿವಾರದಂದು ಕಾರ್ಯನಿರ್ವಹಿಸಲಿದ್ದು, ಉಡುಪಿ ಮತ್ತು ನೆರೆಯ ಜಿಲ್ಲೆಗಳ ರೋಗಿಗಳಿಗೆ ಸೇವೆ ಒದಗಿಸಲಿದೆ ಎಂದು ಹೇಳಿದರು. ಬೆಳಕು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ರೋಗಿಗಳಿಗೆ ಸಹಾಯಧನ ಈ ಸಂದರ್ಭದಲ್ಲಿ ವಿತರಿಸಲಾಯಿತು. ಉಪ ವೈದ್ಯಕೀಯ ಅಧೀಕ್ಷಕ ಡಾ. ಶಿರನ್ ಶೆಟ್ಟಿ ವಂದಿಸಿದರು. ಔಪಚಾರಿಕ ಕಾರ್ಯಕ್ರಮದ ನಂತರ ಆರೈಕೆದಾರರು ಮತ್ತು ದಾದಿಯರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ಡಾ.ಸ್ವಾತಿ ಪಿ.ಎಂ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.