ಉಡುಪಿ, ಏ.19: ಸಮಾಜದಿಂದ ಪ್ರತಿ ಕ್ಷಣವೂ ಲಾಭ ಪಡೆಯುವ ನಾವು ಸಮಾಜಕ್ಕೆ ಮರಳಿ ನೀಡುವ ಅಗತ್ಯವಿದೆ. ಅದು ಸೇವೆಯಿಂದ ಮಾತ್ರ ಸಾಧ್ಯ. ಮಾನವೀಯ ಸೇವೆಯು ನಮಗೆ ಆತ್ಮ ಸಂತೃಪ್ತಿಯನ್ನು ನೀಡುತ್ತದೆ ಎಂದು ರಾಜ್ಯ ರೆಡ್ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ವಿ.ಜಿ. ಶೆಟ್ಟಿ ಹೇಳಿದರು. ಅವರು ಡಾ. ಟಿ.ಎಂ.ಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ, ಡಾ. ಟಿ.ಎಂ.ಎ ಪೈ ಶಿಕ್ಷಣ ಮಹಾವಿದ್ಯಾಲಯ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಯುವರೆಡ್ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರೊ. ಒ.ಎಸ್. ಅಂಚನ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರೆಡ್ಕ್ರಾಸ್ ಗೌರವ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಅವರು ಪ್ರೊ. ಒ.ಎಸ್. ಅಂಚನ್ ಸ್ಮಾರಕ ಉಪನ್ಯಾಸ ನೀಡಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಸೇವೆಗೆ ಹೆಸರಾಗಿರುವ ರೆಡ್ಕ್ರಾಸ್ನ ಮಾನವೀಯ ಸೇವೆಗೆ ನಾಲ್ಕು ಬಾರಿ ನೊಬೆಲ್ ಪ್ರಶಸ್ತಿ ಬಂದಿರುವುದನ್ನು ಹೆಮ್ಮೆಯ ವಿಷಯ ಎಂದ ಅವರು, ರೆಡ್ಕ್ರಾಸ್ನ ಇತಿಹಾಸ ಮತ್ತು ತತ್ವಗಳನ್ನು ವಿವರಿಸಿದರು. ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೆಡ್ಕ್ರಾಸ್ ಚಟುವಟಿಕೆಗಳಿಂದ ಮಹಾತ್ಮ ಗಾಂಧೀಜಿಯವರು ಉತ್ತೇಜಿತರಾಗಿದ್ದರು. ರೆಡ್ಕ್ರಾಸ್ ಚಟುವಟಿಕೆಗಳಡಿ ಕಾಲೇಜಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. ರೆಡ್ಕ್ರಾಸ್ ಖಜಾಂಜಿ ರಮಾದೇವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೀಪಿಕಾ ಸ್ವಾಗತಿಸಿ, ಅಶ್ವಿಜಾ ಮತ್ತು ಕಿಶನ್ ನಾಯಕ್ ನಿರೂಪಿಸಿ, ರೆಡ್ಕ್ರಾಸ್ ಸಂಯೋಜಕಿ ಮಮತಾ ಸಾಮಂತ್ ವಂದಿಸಿದರು.