Home ಸುದ್ಧಿಗಳು ಪ್ರಾದೇಶಿಕ ರಸಪ್ರಶ್ನೆ ಸ್ಪರ್ಧೆ ಮೂಲಕ ಮತದಾನ ಜಾಗೃತಿ

ರಸಪ್ರಶ್ನೆ ಸ್ಪರ್ಧೆ ಮೂಲಕ ಮತದಾನ ಜಾಗೃತಿ

334
0

ಉಡುಪಿ, ಮೇ 1: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಸಪ್ರಶ್ನೆ ಸ್ಪರ್ಧೆಯ ಮೂಲಕ ಮತದಾರರಿಗೆ ಚುನಾವಣೆಯಲ್ಲಿ ಭಾಗವಹಿಸುವ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಸ್ವೀಪ್ ಸಮಿತಿಯ ಕಾರ್ಯಕ್ರಮಗಳ ಮಾಹಿತಿಗೆಂದೇ ರೂಪಿಸಿರುವ ಇ-ಪತ್ರಿಕೆಯಲ್ಲಿ ‘ಚುನಾವಣೆಯ ಬಗ್ಗೆ ನಿಮಗೆಷ್ಟು ತಿಳಿದಿದೆ’ ಎಂಬ ವಿಷಯದ ಬಗ್ಗೆ, ‘ಪ್ರಜ್ಞಾವಂತರಿಗೊಂದು ಸವಾಲ್’ ಎಂಬ ಕುತೂಹಲಕಾರಿ ಪಶ್ನೆಗಳನ್ನು ಒಳಗೊಂಡ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾವಹಿಸುವವರು ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಈ ಮುಂದಿನ ಗೂಗಲ್ ಲಿಂಕ್ https://forms.gle/pCShAi46G1qEAfxA9 ನಲ್ಲಿ ಇರುವ ಫಾರ್ಮ್ ನ್ನು ಕ್ಲಿಕ್ ಮಾಡಿ, ತಮ್ಮ ಉತ್ತರಗಳನ್ನು, ಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಉತ್ತರಿಸಬೇಕು. ಈ ಸ್ಪರ್ಧೆಯಲ್ಲಿ ಪ್ರತಿದಿನ ಚುನಾವಣೆಗೆ ಸಂಬಂಧಿಸಿದ 5 ಪ್ರಶ್ನೆಗಳನ್ನು ಬಹು ಆಯ್ಕೆಯ ಉತ್ತರಗಳನ್ನು ನೀಡುವುದರ ಮೂಲಕ ಕೇಳಲಾಗುವುದು ಹಾಗೂ ಮರುದಿನ 5 ಹೊಸ ಪ್ರಶ್ನೆಗಳೊಂದಿಗೆ ಹಿಂದಿನ ದಿನದ ಪ್ರಶ್ನೆಗಳಿಗೆ ಸರಿ ಉತ್ತರ ಪ್ರಕಟಿಸಲಾಗುವುದು. ಆಯ್ದ ವಿಜೇತರನ್ನು ಪ್ರತಿ ಭಾನುವಾರದ ಇ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ ಯಾರು, ರಾಷ್ಟ್ರಪತಿ ಚುನಾವಣೆಯಲ್ಲಿ ಯಾರು ಮತದಾನ ಮಾಡಲು ಅರ್ಹರಲ್ಲ, ಒಂದು ರಾಜ್ಯ ಹೊಂದಿರಬಹುದಾದ ಕನಿಷ್ಠ ವಿಧಾನಸಭಾ ಸದಸ್ಯರ ಸಂಖ್ಯೆ ಎಷ್ಟು, ಗರಿಷ್ಠ ವಿಧಾನಸಭಾ ಸದಸ್ಯರ ಸಂಖ್ಯೆ ಎಷ್ಟು, ಯಾವ ಕಾರಣಕ್ಕೆ ಕ್ರಿಟಿಕಲ್ ಮತಗಟ್ಟೆ ಎಂದು ಗುರುತಿಸಲಾಗುತ್ತದೆ, ಒಂದು ಮತಗಟೆಯಲ್ಲಿ ಇರಬಹುದಾದ ಗರಿಷ್ಠ ಮತದಾರರು ಎಷ್ಟು, ಮತಯಂತ್ರದಲ್ಲಿನ ನಿಯಂತ್ರಣ ಕೋಶವು ಎಷ್ಟು ಅವಧಿಯವರೆಗೆ ಮತದಾನದ ಫಲಿತಾಂಶವನ್ನು ದಾಖಲಿಸಿಟ್ಟುಕೊಳ್ಳಬಹುದು, ಅಂಚೆ ಮತದಾನ ಎಂದರೆ ಏನು, ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಎಷ್ಟು ನಾಮಪತ್ರ ಸಲ್ಲಿಸಬಹುದು, ಯಾವ ಪೋರ್ಟಲ್ ನಲ್ಲಿ ಅಭ್ಯರ್ಥಿ ನಾಮಪತ್ರ ಸಲ್ಲಿಸಬಹುದು.. ಇವೇ ಮುಂತಾದ ಕುತೂಹಲಕಾರಿ ಮತ್ತು ಆಶ್ಚರ್ಯಕಾರವಾದ ಪ್ರಶ್ನೆಗಳನ್ನು ಕೇಳುವ ಮೂಲಕ ಸಾರ್ವಜನಿಕರು ಚುನಾವಣೆ ಪ್ರಕ್ರಿಯೆಗಳ ಬಗ್ಗೆ ತಿಳಿಯಲು ತಮ್ಮ ಮತದಾನದ ಮಹತ್ವವನ್ನು ಅರಿಯಲು ಹಾಗೂ ಚುನಾವಣೆ ಕುರಿತ ಹಲವು ಗೊಂದಲಗಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಉತ್ತರ ಪಡೆಯಬಹುದಾಗಿದೆ.

ಮತದಾನ ದಿನವಾದ ಮೇ 10 ರ ವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ಪ್ರಸ್ತುತ ಪ್ರತಿದಿನ ಸುಮಾರು 500 ಕ್ಕೂ ಅಧಿಕ ಮಂದಿ ಭಾಗವಹಿಸಿ ತಮ್ಮ ಉತ್ತರಗಳನ್ನು ನೀಡುತ್ತಿದ್ದು, ಪ್ರತಿದಿನದ ಕುತೂಹಲಕಾರಿ ಪ್ರಶ್ನೆಗಳು ಮತ್ತು ಉತ್ತರಗಳು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು, ದಿನೇ ದಿನೇ ಭಾಗವಹಿಸುವ ಸ್ಪರ್ಧಿಗಳ ಸಂಖ್ಯೆ ಅಧಿಕವಾಗುತ್ತಿದ್ದು, ರಸಪ್ರಶ್ನೆಗಳ ಎಲ್ಲಾ ಕಂತುಗಳು ಮುಗಿದ ನಂತರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಎಲ್ಲಾ ವಿಜೇತರಿಗೆ ಆಕರ್ಷಕ ಬಹುಮಾನ ವಿತರಿಸಲಾಗುವುದು.

“ಜಿಲ್ಲೆಯ ಸ್ವೀಪ್ ಕಾರ್ಯಕ್ರಮಗಳ ಮಾಹಿತಿ ನೀಡಲೆಂದು ರೂಪಿಸಿರುವ ಇ-ಪತ್ರಿಕೆಯನ್ನು ಪ್ರತಿದಿನ 2 ಲಕ್ಷಕ್ಕೂ ಅಧಿಕ ಮಂದಿಗೆ ತಲುಪಿಸಲಾಗುತ್ತಿದ್ದು, ಇ-ಪತ್ರಿಕೆಯಲ್ಲಿ ಮತದಾನ ಜಾಗೃತಿಗಾಗಿ ಆರಂಭಿಸಿರುವ ರಸಪ್ರಶ್ನೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತಿದ್ದು, ದಿನೇ ದಿನೇ ಸ್ಪರ್ಧೆಯಲ್ಲಿ ಭಾಗವಹಿಸುವ ಮತ್ತು ವಿಜೇತರಾಗುವ ಸಂಖ್ಯೆ ಸಹ ಅಧಿಕವಾಗುತ್ತಿದೆ. ಮತದಾರರು ಮತದಾನ ಪ್ರಕ್ರಿಯೆಯ ಹಲವು ಕುತೂಹಲವಾದ ಅಂಶಗಳನ್ನು ತಿಳಿದು, ತಮ್ಮ ಅಮೂಲ್ಯ ಮತದ ಮಹತ್ವ ಅರಿಯಲು ಮತ್ತು ಮೇ 10 ರಂದು ನಡೆಯುವ ಮತದಾನದಲ್ಲಿ ತಪ್ಪದೇ ಭಾಗವಹಿಸಲು ಇದು ಪ್ರೇರಣೆ ನೀಡಲಿದೆ”- ಪ್ರಸನ್ನ ಹೆಚ್., ಅಧ್ಯಕ್ಷರು, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್, ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.