Home ಸುದ್ಧಿಗಳು ಪ್ರಾದೇಶಿಕ ಕೃಷಿಯಿಂದ ಸ್ವಾವಲಂಬಿ ಭಾರತ ನಿರ್ಮಾಣ: ಸಚಿವ ಪಾಟೀಲ್

ಕೃಷಿಯಿಂದ ಸ್ವಾವಲಂಬಿ ಭಾರತ ನಿರ್ಮಾಣ: ಸಚಿವ ಪಾಟೀಲ್

477
0

ಫಲವತ್ತಾದ ಕೃಷಿ ಭೂಮಿ ಹಡಿಲು ಬಿಡುವುದು ರಾಷ್ಟ್ರಕ್ಕೆ ಮಾಡುವ ದ್ರೋಹ. ಭೂಮಿ ತಾಯಿಯನ್ನು ಹಸನಾಗಿಸಿದರೆ ಆ ತಾಯಿ ನಮಗೆ ಚಿನ್ನದಂತಹ ಬೆಳೆಯನ್ನು ನೀಡುತ್ತಾಳೆ. ಹಡಿಲು ಭೂಮಿಯನ್ನು ಕೃಷಿ ಮಾಡಲು ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಕಾರ್ಯ ರಾಷ್ಟ್ರಕ್ಕೆ ಮಾದರಿ ಎಂದು ಕೃಷಿ ಸಚಿವರಾದ ಬಿ. ಸಿ. ಪಾಟೀಲ್ ಹೇಳಿದರು.

ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 110 ಎಕರೆ ಹಡಿಲು ಭೂಮಿಯನ್ನು ಸಾವಯವ ಕೃಷಿ ಮಾಡಲಾಗುತ್ತಿದ್ದು, ಕಡೆಕಾರ್ ಗ್ರಾಮದ ಭುವನೇಂದ್ರ ಕಿದಿಯೂರು ಅವರ ಮನೆ ಹಿಂಬದಿಯ 40 ಎಕರೆ ಹಡಿಲು ಭೂಮಿ ಕೃಷಿಯ ನಾಟಿ ಕಾರ್ಯಕ್ಕೆ ಸಚಿವರು ಶನಿವಾರ ಚಾಲನೆ ನೀಡಿ ಮಾತನಾಡಿದರು.

ಕೃಷಿಯಿಂದ ಸ್ವಾವಲಂಬಿ ಭಾರತದ ನಿರ್ಮಾಣ ಸಾಧ್ಯ. ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಕ್ಷೇತ್ರ ಶೇ. 60 ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಕೊರೋನಾದಂತಹ ಸಂಕಷ್ಟದ ಸ್ಥಿತಿಯಲ್ಲಿಯೂ ಕೃಷಿ ಕ್ಷೇತ್ರ ಸದೃಢವಾಗಿದೆ. ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಡಿಲು ಭೂಮಿಯಿದೆ. ಈ ಭೂಮಿಯಲ್ಲಿ ಕೃಷಿ ಕಾರ್ಯವಾದರೆ ಆಹಾರ ಉತ್ಪಾದನೆಯಲ್ಲಿ ಗಣನೀಯ ಪ್ರಗತಿಯಾಗುವುದು. ಹಿಂದಿನ ವರ್ಷ ರಾಜ್ಯದಲ್ಲಿ 153 ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.

ಕೃಷಿ ಸಚಿವರೊಂದಿಗೆ ಶಾಸಕ ಕೆ. ರಘುಪತಿ ಭಟ್ ಅವರು ಯಂತ್ರ ನಾಟಿಗೆ ಚಾಲನೆ ನೀಡಿ ಸ್ಥಳೀಯರೊಂದಿಗೆ ಸೇರಿ ನೇಜಿ ನಟ್ಟರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ದಾಮಾ ರವೀಂದ್ರ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಉದ್ಯಮಿ ಭುವನೇಂದ್ರ ಕಿದಿಯೂರು, ರಿಕೇಶ್, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ಕೆ. ರಾಘವೇಂದ್ರ ಕಿಣಿ, ಸದಸ್ಯರಾದ ಮಹೇಶ್ ಠಾಕೂರ್, ದಿನಕರ್ ಬಾಬು ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆಂಪೇಗೌಡ, ಉಪ ನಿರ್ದೇಶಕರಾದ ಸೂರ್ಯಕಾಂತ್ ಬಿರಾದರ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಮುಖ್ಯಸ್ಥರಾದ ಡಾ.ಬಿ ಧನಂಜಯ್, ಸಂಶೋಧನಾ ನಿರ್ದೇಶಕರಾದ ಲಕ್ಷ್ಮಣ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.