Home ಸುದ್ಧಿಗಳು ಪ್ರಾದೇಶಿಕ ಆದಿಉಡುಪಿ ಪ್ರೌಢಶಾಲೆಯಲ್ಲಿ ಚೈಲ್ಡ್ ಲೈನ್-1098 ಜಾಗೃತಿ ಕಾರ್ಯಕ್ರಮ

ಆದಿಉಡುಪಿ ಪ್ರೌಢಶಾಲೆಯಲ್ಲಿ ಚೈಲ್ಡ್ ಲೈನ್-1098 ಜಾಗೃತಿ ಕಾರ್ಯಕ್ರಮ

411
0

ಉಡುಪಿ: ಚೈಲ್ಡ್ ಲೈನ್-1098 ಉಡುಪಿ, ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಉಡುಪಿ ಸಹಯೋಗದೊಂದಿಗೆ ಆದಿಉಡುಪಿ ಪ್ರೌಢಶಾಲೆಯಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಚೈಲ್ಡ್ ಲೈನ್-1098ರ ಸೇವೆಗಳು, ಮಕ್ಕಳ ರಕ್ಷಣಾ ವ್ಯವಸ್ಥೆಗಳು, ಪೋಕ್ಸೋ ಕಾಯಿದೆ, ಹದಿಹರೆಯದ ಮಕ್ಕಳ ಸಮಸ್ಯೆಗಳು, ವೈಯಕ್ತಿಕ ಸ್ವಚ್ಚತೆ, ಸುರಕ್ಷಿತ ಸ್ಪರ್ಶ ಮತ್ತು ಅಸುರಕ್ಷಿತ ಸ್ಪರ್ಶದ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಚೈಲ್ಡ್ ಲೈನ್-1098 ಉಡುಪಿ ಸಹ ನಿರ್ದೇಶಕರಾದ ಗುರುರಾಜ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಮಹತ್ವದ ಕುರಿತು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಕೆ.ಎಂ.ಸಿ, ಆಸ್ಪತ್ರೆ ಮಣಿಪಾಲ ವೈದ್ಯರಾದ ಡಾ. ಅಶ್ವಿನ್ ರವರು ಅಸುರಕ್ಷಿತ ಮತ್ತು ಸುರಕ್ಷಿತ ಸ್ಪರ್ಶಗಳ ಕುರಿತು ಅರಿವನ್ನು ಮೂಡಿಸಿದರು. ಸಾಮಾಜಿಕ ಜಾಲತಾಣಗಳ‌ ಬಳಕೆಯ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಜಾಗರೂಕರಾಗಿರಬೇಕೆಂಬ ಕಿವಿ ಮಾತನ್ನು ಹೇಳಿದರು.

ಕರಾವಳಿ ಕಾವಲು ಪಡೆ ಮಲ್ಪೆಯ ಎಸ್.ಐ ಮುಕ್ತಾಬಾಯಿಯವರು ಮಾತನಾಡಿ, ಮಕ್ಕಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ಸಂದರ್ಭದಲ್ಲಿ ಅಡ್ಡ ದಾರಿಯನ್ನು ತುಳಿಯಬಾರದು. ಅವಶ್ಯಕತೆಗಿಂತ ಹೆಚ್ಚಿನ ಮೊಬೈಲ್ ಬಳಕೆಯಿಂದ ಸಮಸ್ಯೆಗಳೇ ಹೆಚ್ಚು. ಅನಗತ್ಯವಾದ ಸಾಮಾಜಿಕ ಜಾಲತಾಣಗಳ ಕುರಿತಾದ ಚಟುವಟಿಕೆಗಳಿಂದ ದೂರವಿರಬೇಕು.

ಶಿಕ್ಷಣದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಮಾರಕವಾಗುವಂತಹ ಚಟುವಟಿಕೆಗಳಿಂದ ದೂರವಿರಬೇಕು ಎಂದರು. ಪೋಕ್ಸೋ ಕಾಯಿದೆಯ ಕುರಿತು ಅರಿವನ್ನು ಮೂಡಿಸಿದರು. ಅಲ್ಲದೇ ಯಾವುದೇ ರೀತಿಯಾದ ಸಮಸ್ಯೆಯಾದಲ್ಲಿ ಮಕ್ಕಳು ಪೊಲೀಸ್ ಅಥವಾ ಚೈಲ್ಡ್ ಲೈನ್-1098 ಇದಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯಲು ತಿಳಿಸಿದರು. ಸ್ಯಾನಿಟೈಸರ್ ಹಾಗೂ ಪೋಸ್ಟರ್ ಗಳನ್ನು ಮತ್ತು ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಯಿತು.

ಚೈಲ್ಡ್ ಲೈನ್ – 1098 ಉಡುಪಿಯ ಸಹ ನಿರ್ದೇಶಕಿ ಸುಹಾನಿ ಕಾಮತ್, ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರಾದ ಶುಭಾ ಎಸ್. ಬಾಸ್ರಿ, ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಮೇಘನಾ ರಾವ್, ಶಾಲಾ ಮುಖ್ಯೋಪಾಧ್ಯಾಯ ರಘುರಾಮ್, ಶ್ರೀಕೃಷ್ಣ ರೋಟರ‍್ಯಾಕ್ಟ್ ಕ್ಲಬ್‌ನ ಕಾರ್ಯದರ್ಶಿ ತನ್ವಿ ವಿಶಿಷ್ಠ ಮುಂತಾದವರು ಉಪಸ್ಥಿತರಿದ್ದರು.

ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿ ತ್ರಿವೇಣಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.