Home ಸುದ್ಧಿಗಳು ಪ್ರಾದೇಶಿಕ ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ 3ನೇ ವಾರ್ಷಿಕೋತ್ಸವ

ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ 3ನೇ ವಾರ್ಷಿಕೋತ್ಸವ

843
0

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಣಿಪಾಲ್ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ ಇದರ 3ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ಆಂಕೊಲಾಜಿ ಅಧ್ಯಕ್ಷರು, ಅಪೋಲೋ ಆಸ್ಪತ್ರೆಗಳು ಮುಂಬೈ, ದೆಹಲಿ ಮತ್ತು ಚೆನ್ನೈ ನಿರ್ದೇಶಕ ಹಾಗೂ ಟಾಟಾ ಮೆಮೋರಿಯಲ್ ಆಸ್ಪತ್ರೆ ಮುಂಬೈ ಮಾಜಿ ನಿರ್ದೇಶಕರಾದ ಡಾ. ಅನಿಲ್ ಡಿ ಕ್ರೂಜ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಮಾಹೆ ಟ್ರಸ್ಟ್ ಮಣಿಪಾಲ ಟ್ರಸ್ಟಿ ವಸಂತಿ ಆರ್ ಪೈ, ಮಾಹೆ ಮಣಿಪಾಲ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಮ್‌ ಡಿ ವೆಂಕಟೇಶ್, ಸಹ ಉಪಕುಲಪತಿ ಡಾ. ಪಿಎಲ್‌ಎನ್‌ಜಿ ರಾವ್ ಗೌರವ ಅತಿಥಿಗಳಾಗಿದ್ದರು. ಮಾಹೆ ಮಣಿಪಾಲದ ಸಹ ಕುಲಪತಿಗಳಾದ ಡಾ. ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು.

ಡಾ. ಅನಿಲ್ ಡಿ ಕ್ರೂಜ್ ಮುಖ್ಯ ಭಾಷಣ ಮಾಡಿದರು. ಕ್ಯಾನ್ಸರ್ ತಡೆಗಟ್ಟುವ ಪ್ರಾಮುಖ್ಯತೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಚಿಕಿತ್ಸೆಯ ಸಮಾನತೆ, ವೆಚ್ಚ-ಪರಿಣಾಮಕಾರಿ ನವೀನ ಕ್ಯಾನ್ಸರ್ ಸಂಶೋಧನೆ ಮತ್ತು ಗುಣಮಟ್ಟದ ಜೀವನ ಕ್ರಮಗಳ ಕುರಿತು ಮಾತನಾಡಿದರು.

ಜಾಹೀರಾತು

ವಸಂತಿ ಆರ್ ಪೈ ಅವರು ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಮ್ ಗೆ ಚಾಲನೆ ನೀಡಿ ಮತ್ತು ತಮ್ಮ ಭಾಷಣದಲ್ಲಿ ಸಮುದಾಯ ಸಂಪರ್ಕ ಕಾರ್ಯಕ್ರಮಗಳ ಪ್ರಾಮುಖ್ಯತೆ ಮತ್ತು ಕ್ಯಾನ್ಸರ್ ಗೆ  ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಆರೋಗ್ಯ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು.

ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಮಾಹೆಯ ಮುಂಬರುವ ಯೋಜನೆಗಳಾದ ಮಾರಣಾಂತಿಕ ಕಾಯಿಲೆ ಇರುವ ರೋಗಿಗಳಿಗೆ ಅವಶ್ಯವಾದ ಮಣಿಪಾಲ್ ವಿಶ್ರಾಂತಿ ಮತ್ತು ಉಪಶಾಮಕ ಆರೈಕೆ ಕೇಂದ್ರ ಮತ್ತು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಮನೆಯಿಂದ ಹೊರಗೆ ಮನೆ ಸೌಲಭ್ಯದ ಕುರಿತು ಚರ್ಚಿಸಿದರು. ಎಲ್ಲಾ ಕ್ಯಾನ್ಸರ್ ರೋಗಿಗಳಿಗೆ ಅವರ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಅತ್ಯುತ್ತಮ ಕೈಗೆಟುಕುವ ಗುಣಮಟ್ಟದ ಆರೈಕೆಯನ್ನು ಒದಗಿಸಲಾಗುತ್ತಿದೆ ಎಂದು ಅವರು ಪುನರುಚ್ಚರಿಸಿದರು.

ಡಾ. ಪಿ ಎಲ್ ಎನ್ ಜಿ ರಾವ್ ಅವರು ಕ್ಯಾನ್ಸರ್ ಆರೈಕೆಯನ್ನು ಹೆಚ್ಚಿಸಲು ಹೊಸ ಔಷಧ ಆವಿಷ್ಕಾರದ ಅಗತ್ಯತೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಅದರ ಲಭ್ಯತೆ ಮತ್ತು ಕೈಗೆಟಕುವ ದರದ ಅವಶ್ಯಕತೆಗಳ ಕುರಿತು ಮಾಹಿತಿ ನೀಡಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಡಾ. ಹೆಚ್.ಎಸ್.ಬಲ್ಲಾಳ್ ಅವರು, ಆರಂಭದಲ್ಲೇ ಪತ್ತೆ ಹಚ್ಚುವುದು, ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಉಪಶಾಮಕ ಆರೈಕೆಯ ಅಗತ್ಯವನ್ನು ಒತ್ತಿ ಹೇಳಿದರು. ಅವರು ಕ್ಯಾನ್ಸರ್ ಆರೈಕೆಗೆ ಅವಶ್ಯವಿರುವ ಮಾನವೀಯ ಅಂಶ ಮತ್ತು ಅದನ್ನು ವೈದ್ಯಕೀಯ ಆರೈಕೆಯೊಂದಿಗೆ ಹೇಗೆ ಹೆಣೆದುಕೊಂಡಿರಬೇಕು ಎಂಬುವುದರ ಕುರಿತು ಒತ್ತಿ ಹೇಳಿದರು.

ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನ ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಮಹಾದೇವ ರಾವ್ ಅವರು ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಮತ್ತು ಅದರ ಸಹಯೋಗಿಗಳು, ಅದರ ವ್ಯಾಪ್ತಿ, ಚಟುವಟಿಕೆಗಳು ಮತ್ತು ಪರಿಣಾಮವನ್ನು ವಿವರಿಸಿದರು. ಅವರು ಒಕ್ಕೂಟದ ವೆಬ್‌ಸೈಟ್ http://www.glocacon.org ಅನ್ನು ಪ್ರಸ್ತುತಪಡಿಸಿದರು ಮತ್ತು ಕಳೆದ ವರ್ಷದಲ್ಲಿ ನಡೆದ ವಿವಿಧ ಸೆಮಿನಾರ್‌ಗಳು, ಸಮುದಾಯ ಸರಣಿ ಕಾರ್ಯಕ್ರಮಗಳು ಮತ್ತು ಸಣ್ಣ ವಿಚಾರ ಸಂಕಿರಣಗಳ ಕುರಿತು ವಿವರಿಸಿದರು. 2021 ರ ಡಿಸೆಂಬರ್ 2 ರಿಂದ 4 ರವರೆಗೆ ನಡೆಯಲಿರುವ ಮುಂಬರುವ ಮೊದಲ ವರ್ಚುವಲ್ ಸಮ್ಮೇಳನದ ಕುರಿತು ಮಾತನಾಡಿದರು.

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರತ್ ಕುಮಾರ್ ರಾವ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಮಣಿಪಾಲದ ಕ್ಯಾನ್ಸರ್ ಕೇಂದ್ರದ ಪಯಣ ಮತ್ತು ಬೆಳವಣಿಗೆಯನ್ನು ತಿಳಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.