ಕಾರ್ಕಳ, ಸೆ.13: ಕ್ರಿಯೇಟಿವ್ ಪದವಿಪೂರ್ವ ಕಾಲೇಜು, ಕಾರ್ಕಳ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ), ಕಾರ್ಕಳ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಯಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಸಂತೋಷ್ ಶೆಟ್ಟಿ ಸಮಾಜದ ಪ್ರಗತಿ ಆರೋಗ್ಯದ ಹಾದಿಯಲ್ಲೇ ಅಡಗಿದೆ. ಆರೋಗ್ಯದ ಅರಿವು ಬೆಳೆಯಲು ಜಾಗೃತಿ ಅತ್ಯವಶ್ಯಕ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಾದೇಶಿಕ ಕಛೇರಿ, ಉಡುಪಿಯ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ, ಆರೋಗ್ಯದ ಅರಿವು ಬೆಳಗಿದಾಗ ಮಾತ್ರ ಸಮಾಜ ಶ್ರೇಯೋಭಿವೃದ್ಧಿಯ ಹಾದಿ ಹಿಡಿಯುತ್ತದೆ ಎಂಬ ಸತ್ಯವಾಕ್ಯವನ್ನು ತಮ್ಮ ನಿರರ್ಗಳ ನುಡಿಗಳೊಂದಿಗೆ ತಿಳಿಸಿಕೊಟ್ಟರು. ಅಲ್ಲದೇ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಬಿ ಗಣನಾಥ ಶೆಟ್ಟಿ ಜಾಗೃತಿಯ ಬೆಳಕು ಮೂಡಿದಾಗಲೇ ಸಮಾಜ ಆರೋಗ್ಯ, ಅರಿವು ಮತ್ತು ಪ್ರಗತಿಯನ್ನು ಕಾಣುತ್ತದೆ ಎಂಬುದಾಗಿ ಹಲವು ಅಮೂಲ್ಯ ವಿಚಾರಗಳನ್ನು ಅಧ್ಯಕ್ಷೀಯ ನುಡಿಗಳೊಂದಿಗೆ ಹಂಚಿಕೊಂಡರು. ಕರುಣಾಕರ ಕಡಂಬ, ಸದಸ್ಯರು, ತಾಲೂಕು ಜನಜಾಗೃತಿ ವೇದಿಕೆ , ವಾಸು ಶೆಟ್ಟಿ, ಸದಸ್ಯರು, ತಾಲೂಕು ಜನಜಾಗೃತಿ ವೇದಿಕೆ, ಸುಭಾಷ್, ಅಧ್ಯಕ್ಷರು, ಹಿರ್ಗಾನ ಒಕ್ಕೂಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೋಧಕ-ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕನ್ನಡ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿ, ವಾಸು ಶೆಟ್ಟಿ ವಂದಿಸಿದರು.




By
ForthFocus™