Home ಅಂಕಣ ಸ್ವತಂತ್ರ ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ

ಸ್ವತಂತ್ರ ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ

586
0

ಮ್ಮ ಭಾರತದ ಒಟ್ಟು ಜನಸಂಖ್ಯೆಯ ಏಳು ಶೇಕಡಾಕ್ಕಿಂತ ಕಡಿಮೆ ಇರುವ ಬುಡಕಟ್ಟು ಜನಾಂಗಕ್ಕೆ ಮೊತ್ತಮೊದಲನೆ ಬಾರಿಗೆ ಅತೀ ದೊಡ್ಡ ಸಾಂವಿಧಾನಿಕ ಹುದ್ದೆಯು ದೊರಕಿದೆ. ಎನ್.ಡಿ.ಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ದ್ರೌಪದಿ ಮುರ್ಮು ಅತೀ ಹೆಚ್ಚು ಮತಗಳ ಅಂತರದಲ್ಲಿ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಹತ್ತು ಹಲವು ಆಯಾಮಗಳಲ್ಲಿ ಇದು ಐತಿಹಾಸಿಕ ಸಾಧನೆ.

ದ್ರೌಪದಿ ಅವರ ಬದುಕಿನ ಹೋರಾಟಗಳನ್ನು ಗಮನಿಸುತ್ತ ಹೋದಂತೆ ಆಕೆ ಖಂಡಿತವಾಗಿಯೂ ಗಟ್ಟಿಗಿತ್ತಿ ಎಂಬ ಅಭಿಪ್ರಾಯಕ್ಕೆ ನಾವು ಬರಬಹುದು.

ಬುಡಕಟ್ಟು ಜನಾಂಗದಲ್ಲಿ ಕೂಡ ಅತೀ ಹೆಚ್ಚು ತುಳಿತಕ್ಕೆ ಒಳಗಾದ ಸಂತಾಲಿ ಜನಾಂಗಕ್ಕೆ ಸೇರಿದ ಆಕೆ ಬಾಲ್ಯದಲ್ಲಿ ಅತೀ ಹೆಚ್ಚು ಅಪಮಾನ, ನೋವುಗಳನ್ನು ಅನುಭವಿಸಿದರು. ಬಡತನ ಮತ್ತು ಹಸಿವು ಅವರ ಬೆನ್ನಿಗೇ ನಿಂತಿತ್ತು. ಅದರ ಹೊರತಾಗಿಯೂ ಉನ್ನತ ಶಿಕ್ಷಣವನ್ನು ಪಡೆದ ಅವರು ರಾಯರಂಗಪುರದ ಅರಬಿಂದೋ ಶಾಲೆಯಲ್ಲಿ ಶಿಕ್ಷಕಿ ಆಗಿ ಒಂದು ಅವಧಿಗೆ ದುಡಿದವರು. ಮುಂದೆ ಒಡಿಶಾ ರಾಜ್ಯಸರಕಾರದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿ ಆಗಿ ಕೂಡ ಆಕೆ ದುಡಿದದ್ದು ಇದೆ.

ಮುಂದೆ ಭಾರತೀಯ ಜನತಾ ಪಕ್ಷದ ಮೂಲಕ ಆಕೆಯು ರಾಜಕೀಯ ಪ್ರವೇಶ ಮಾಡುತ್ತಾರೆ. ರಾಯರಂಗಪುರದ ನಗರಸಭೆಗೆ ಸತತ ಆಯ್ಕೆ ಆಗುತ್ತಾರೆ. ಅವರ ತಂದೆ ಮತ್ತು ಅಜ್ಜ ಸರಪಂಚರಾಗಿ ದುಡಿದ ಅನುಭವವು ಅವರನ್ನು ಕೈ ಹಿಡಿದು ಮುನ್ನಡೆಸಿತು.

ಮುಂದೆ ಒಡಿಶಾ ರಾಜ್ಯದ ವಿಧಾನಸಭೆಗೆ ಅವರು ಆಯ್ಕೆ ಆಗಿ ವಾಣಿಜ್ಯ, ಮೀನುಗಾರಿಕೆ ಮೊದಲಾದ ಸ್ವತಂತ್ರವಾದ ಖಾತೆಗಳನ್ನು ನಿರ್ವಹಿಸುವುದರ ಮೂಲಕ ರಾಜ್ಯದ ಎಲ್ಲರ ಮನಗೆದ್ದರು. ಅವರಿಗೆ ಅತ್ಯುತ್ತಮ ಶಾಸಕರಿಗೆ ಕೊಡುವ ನೀಲಕಂಠ ಪ್ರಶಸ್ತಿಯು ದೊರಕಿತು. ಅದರ ಜೊತೆಗೆ ಪಕ್ಷವು ಅವರನ್ನು ಎಸ್.ಟಿ. ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆ ಆಗಿ ನೇಮಕ ಮಾಡಿತು.

ದ್ರೌಪದಿಯ ಅರ್ಹತೆಯು ಅವರನ್ನು ಮುಂದೆ ಜಾರ್ಖಂಡ್ ರಾಜ್ಯದ ರಾಜ್ಯಪಾಲರ ಹುದ್ದೆಯವರೆಗೆ ಕರೆದುಕೊಂಡು ಬಂದಿತು. ಆ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರು ಅವರು. ಈ ಹುದ್ದೆಯನ್ನು ಅವರು ಅತ್ಯಂತ ದಕ್ಷತೆಯಿಂದ ಒಂದು ಪೂರ್ಣಾವಧಿಗೆ ನಿಭಾಯಿಸಿರುವ ಕೀರ್ತಿಯನ್ನು ಹೊಂದಿದ್ದಾರೆ. ಒಮ್ಮೆ ತಮ್ಮದೇ ಪಕ್ಷದ ಸರಕಾರವು ಸಹಿ ಮಾಡಲು ಕಳಿಸಿದ್ದ ವಿಧೇಯಕವನ್ನು ಪುನರ್ ಪರಿಶೀಲನೆಗೆ ಹಿಂದೆ ಕಳಿಸಿದ್ದ ಕೀರ್ತಿಯೂ ಅವರಿಗೆ ಇದೆ. ಅವರು ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಆಗಲಾರರು ಅನ್ನುವುದು ಅಲ್ಲಿಗೆ ಖಾತ್ರಿ!

ಅವರ ಜೀವನದಲ್ಲಿ ಕೂಡ ಹಲವು ಸುನಾಮಿಗಳು ಬಂದು ಹೋಗಿವೆ. ಅವರ ಪತಿ ಶ್ಯಾಮಚರಣ ಮರ್ಮು ಅವರನ್ನು ಮತ್ತು ತಮ್ಮ ಎರಡು ಗಂಡು ಮಕ್ಕಳನ್ನು ನಾಲ್ಕೇ ವರ್ಷಗಳ ಅವಧಿಯಲ್ಲಿ ಕಳೆದುಕೊಂಡು ನೊಂದು ಕಣ್ಣೀರು ಹಾಕಿದ್ದು ಇದೆ. ಆದರೆ ಮತ್ತೆ ಸಮಾಜಸೇವೆಯ ಆಸ್ತೆಯಿಂದ ದುಃಖ ಎಲ್ಲವನ್ನೂ ಮರೆತು ಬೌನ್ಸ್ ಬ್ಯಾಕ್ ಮಾಡಿದ್ದು ಇದೆ. ತನ್ನ ಎದೆಯಲ್ಲಿ ಜ್ವಾಲಾಮುಖಿಯನ್ನು ಇಟ್ಟುಕೊಂಡು ಮುಗ್ಧ ನಗುವನ್ನು ಹೊಮ್ಮಿಸುವುದು ಅವರಿಗೆ ಸಾಧ್ಯವಾಗಿದೆ. ಅದು ಅವರ ಗಟ್ಟಿತನ!

ಭವ್ಯ ಭಾರತದ ಅತೀ ಶ್ರೇಷ್ಟ ರಾಷ್ಟ್ರಪತಿಗಳಾದ ಸರ್ವಶ್ರೀ ರಾಜೇಂದ್ರ ಪ್ರಸಾದ್, ಅಬ್ದುಲ್ ಕಲಾಂ, ನೀಲಂ ಸಂಜೀವ ರೆಡ್ಡಿ, ಎಸ್ ರಾಧಾಕೃಷ್ಣನ್, ಪ್ರಣವ್ ಮುಖರ್ಜಿ ಮತ್ತು ರಾಮಾನಾಥ ಕೋವಿಂದ ಅವರ ಸಾಲಿನಲ್ಲಿ ನಿಲ್ಲುವ ಸಾಮರ್ಥ್ಯವು ಅವರಲ್ಲಿ ಖಂಡಿತವಾಗಿ ಇದೆ ಎಂದು ನನಗೆ ಅನ್ನಿಸುತ್ತದೆ.

ಬಧಾಯಿ ಹೊ ದ್ರೌಪದೀಜಿ.

-ರಾಜೇಂದ್ರ ಭಟ್ ಕೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.